ಮೈಸೂರು: ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಅವರು ಹೇಳಿರುವ ಮಾತಿನಲ್ಲಿ ಸತ್ಯ ಇದೆ. ಅನಿಷ್ಟ ಪದ್ಧತಿ ಉಳಿಯಬೇಕು ಎನ್ನುವ ಜನ ನಮ್ಮ ಹತ್ಯೆಗೆ ಮುಂದಾಗುತ್ತಿದ್ದಾರೆ ಎಂದು ವಿಚಾರವಾದಿ ಕೆಎಸ್ ಭಗವಾನ್ ಹೇಳಿದ್ದಾರೆ.
ಹತ್ಯೆಗಳ ಟಾರ್ಗೆಟ್ ಲಿಸ್ಟ್ ನಲ್ಲಿ ವಿಚಾರವಾದಿ ಪ್ರೊ. ಕೆಎಸ್ ಭಗವಾನ್ ಇದ್ದಾರೆ ಎಂದು ನಿಡುಮಾಮಿಡಿ ಸ್ವಾಮೀಜಿ ಹೇಳಿದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಇಂತಹ ಪರಿಸ್ಥಿತಿ ಇದೆ ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಿದೆ. ಕಲಬುರಗಿ ಅವರ ಹತ್ಯೆ ಆದ ಮರುದಿನವೇ ದಕ್ಷಿಣ ಕನ್ನಡದ ಹುಡುಗನೊಬ್ಬ ಮುಂದಿನ ಟಾರ್ಗೆಟ್ ಭಗವಾನ್ ಅಂತ ಘೋಷಣೆ ಮಾಡಿದ್ದ. ತಕ್ಷಣ ಆತನನ್ನ ಪೊಲೀಸರು ಬಂಧಿಸಿದ್ದರು. ಆತ ಹೊರಗೆ ಬಂದಿದ್ದಾನೋ ಅಥವಾ ಅಲ್ಲಿಯೇ ಇದಾನೋ ಗೊತ್ತಿಲ್ಲ. ಹಾಗಾಗಿ ಇದು ಬಹಳ ವರ್ಷಗಳಿಂದ ನಡೆಯುತ್ತಿರುವ ಕುತಂತ್ರ ಎಂದು ಹೇಳಿದರು.
ನಿಡುಮಾಮಿಡಿ ಸ್ವಾಮೀಜಿ ಅವರು ಹೇಳಿರುವ ಮಾತಿನಲ್ಲಿ ಸತ್ಯ ಇದೆ. ಅವರಲ್ಲಿ ಅಪಾರವಾದ ಮಾಹಿತಿಗಳು ಬರುತ್ತವೆ ಆದ್ದರಿಂದ ಯಾರ್ಯಾರೋ ಅಸಮಾನತೆ, ಭೇದಭಾವ, ಜಾತೀಯತೆಯನ್ನ ಹೋಗಲಾಡಿಸಬೇಕು. ಅನಿಷ್ಟ ಪದ್ಧತಿಗಳು ಉಳಿಯಬೇಕು ಚಿಂತನೆ ಮಾಡುವ ಜನರು ಈಗ ನಮ್ಮನ್ನು ಕೊಲ್ಲಲು ಮುಂದಾಗಿದ್ದಾರೆ ಎಂದರು.
ಈಗ ನನ್ನ ರಕ್ಷಣೆಗೆ ಇಬ್ಬರು ಅಂಗರಕ್ಷಕರನ್ನು ಕೊಟ್ಟಿದ್ದಾರೆ. ಹಾಗಾಗಿ ಸರ್ಕಾರ ನನಗೆ ಎಲ್ಲಾ ರೀತಿಯ ರಕ್ಷಣೆ ಕೊಟ್ಟಿದೆ. ಈ ಹಿಂದೆ ತುಂಬಾ ಬೆದರಿಕೆ ಕರೆಗಳು ಬರುತ್ತಿದ್ದವು. ಈಗ ಬಹುಪಾಲು ಬೆದರಿಕೆ ಕರೆಗಳು ನಿಂತಿವೆ ಎಂದು ಹೇಳಿದರು.
ಇದುವರೆಗೂ ಇಷ್ಟೊಂದು ಹತ್ಯೆಗಳು ಆಗಿವೆ. ಆದರೆ ಪ್ರಧಾನಿ ಮೋದಿ ಅವರು ಇದರ ಬಗ್ಗೆ ಮಾತನಾಡಬೇಕು. ಈ ಹತ್ಯೆ ವಿಷಯಗಳ ಬಗ್ಗೆ ಅವರು ಮಾತನಾಡುತ್ತಿಲ್ಲ. ನಾನು ಯಾವುದೇ ರೀತಿಯ ಭಯವಿಲ್ಲದೆ ನನ್ನ ಕೆಲಸ ಮಾಡುತ್ತಿದ್ದೆನೆ ಎಂದು ಹೇಳಿದರು.