ಚಾಮರಾಜನಗರ: ಸತತ ಮಳೆಗೆ ಮೈದುಂಬಿ ಗೋಪಿನಾಥಂ ಡ್ಯಾಂ ಕೋಡಿ ಬಿದ್ದಿರುವುದರಿಂದ ಹೊಗೇನಕಲ್ಗೆ ತೆರಳಲು ಪ್ರವಾಸಿಗರು ಪ್ರಯಾಸ ಪಡುವಂತಾಗಿದೆ.
ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗೋಪಿನಾಥಂ ಡ್ಯಾಂ ಎರಡು ವರ್ಷದ ಬಳಿಕ ತುಂಬಿದೆ. ಶುಕ್ರವಾರ ಬಿದ್ದ ಜೋರು ಮಳೆಗೆ ಜಲಾಶಯದ ನೀರು, ಹಳ್ಳಕೊಳ್ಳದ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ‘ತೇಂಗಾಕೋಂಬು’ ಎಂಬಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ.
ವಾರಾಂತ್ಯದ ಮೋಜಿಗಾಗಿ ಹೊಗೇನಕಲ್ಗೆ ತೆರಳುವ ಪ್ರವಾಸಿಗರು ತೆರಳಲಾಗದೇ ಮೂರು 3 ತಾಸುಗಳಿಂದ ರಸ್ತೆತುದಿಯಲ್ಲೇ ನಿಂತಿದ್ದರು. ಬೈಕ್ ಸವಾರರಂತೂ 3-4 ಮಂದಿಯ ಸಹಾಯದಿಂದ ಬೈಕನ್ನು ಒಂದು ಬದಿಯಿಂದ ಮತ್ತೊಂದು ಬದಿಗೆ ತರಲಾಗುತ್ತಿದೆ. ಇಂದು ಕೂಡ ಜೋರು ಮಳೆಯಾದರೆ ನೀರು ಇಳಿಮುಖವಾಗುವವರೆಗೆ ಹೊಗೇನಕಲ್ ಮಾರ್ಗವೇ ಬಂದ್ ಆಗಲಿದೆ.
ಇತ್ತ ರೇಷ್ಮೆನಗರಿ ರಾಮನಗರ ಜಿಲ್ಲೆಯ ಹಲವೆಡೆ ತಡರಾತ್ರಿ ಭರ್ಜರಿ ಮಳೆಯಾಗಿದ್ದು, ಸಾಕಷ್ಟು ಅವಾಂತರಗಳು ಉಂಟಾಗಿವೆ. ತಡರಾತ್ರಿ ಕನಕಪುರದಲ್ಲಿ ಭರ್ಜರಿ ಮಳೆಯಾಗಿದ್ದು, ನಗರಸಭೆ ವ್ಯಾಪಾರ ಮಳಿಗೆಗೆ ನೀರು ನುಗ್ಗಿ ವ್ಯಾಪಾರಸ್ಥರು ಪರದಾಡುವಂತಾಗಿತ್ತು. ಕನಕಪುರ ಹೊರ ವಲಯದ ಕುರುಪೇಟೆ ಗ್ರಾಮದಲ್ಲಿಯೂ ತಗ್ಗುಪ್ರದೇಶದಲ್ಲಿನ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಸಾರ್ವಜನಿಕರು ಪರದಾಡುವಂತಾಗಿತ್ತು. ಏಕಾಏಕಿ ನೀರು ನುಗ್ಗಿದ ಹಿನ್ನೆಲೆಯಲ್ಲಿ ಮನೆಯೆಲ್ಲಾ ಕೆರೆಗಳಂತಾಗಿದ್ದವು.