ನವದೆಹಲಿ: ವಿಶ್ವದ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ 17 ವರ್ಷಗಳ ಬಳಿಕ ಮಧ್ಯರಾತ್ರಿ ಮಹಾ ಆರ್ಥಿಕ ಕ್ರಾಂತಿಯಾಗಿದೆ. ರಾಜ್ಯ, ಕೇಂದ್ರದಲ್ಲಿದ್ದ 16 ತೆರಿಗೆ ಹಾಗೂ 23 ಸೆಸ್ ರೂಪಿಸಿ ಜಿಎಸ್ಟಿ ಜಿಂದಗಿ ಆರಂಭವಾಗಿದೆ.
ಕೋಟ್ಯಾಂತರ ಗ್ರಾಹಕರು-ವ್ಯಾಪಾರಿಗಳು, ಸಾವಿರಾರು ಉದ್ದಿಮೆಗಳು, ಸೇವಾ ಸಂಸ್ಥೆಗಳು ದೇಶಾದ್ಯಂತ ಇವತ್ತಿನಿಂದ ಒಂದೇ ತೆರಿಗೆ ವ್ಯವಸ್ಥೆಗೆ ಒಳಪಡುವ ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ಸೇರ್ಪಡೆಯಾಗುತ್ತಿವೆ. ಐತಿಹಾಸಿಕ ಕ್ಷಣಕ್ಕೆ ವಿಶೇಷವಾಗಿ ಸಿಂಗಾರಗೊಂಡಿದ್ದ ಸಂಸತ್ ಸೆಂಟ್ರಲ್ ಹಾಲ್ನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಪ್ರಧಾನಿ ಮೋದಿ ಜಂಟಿಯಾಗಿ ಜಿಎಸ್ಟಿಗೆ ಚಾಲನೆ ನೀಡಿದ್ರು.
ಮಧ್ಯರಾತ್ರಿ ಸಂಸತ್ನ ಸೆಂಟ್ರಲ್ ಹಾಲ್ನಲ್ಲಿ ಜಿಎಸ್ಟಿ ಬಗ್ಗೆ ಕೇಂದ್ರ ಹಣಕಾಸು ಸಚಿವ ಪ್ರಾಸ್ತಾವಿಕ ಭಾಷಣ ಮಾಡಿ, ಜಿಎಸ್ಟಿ ಪರಿಕಲ್ಪನೆ ಕೊಟ್ಟಿದ್ದು ಪಶ್ಚಿಮ ಬಂಗಾಳದ ಆಸೀಮ್ ಗುಪ್ತ ಅಂದ್ರು. ಭಾರತ ಸಂಕುಚಿತ ರಾಜಕೀಯವನ್ನು ಮೀರಿ ಬೆಳೆಯುತ್ತಿದೆ. ಒಂದು ದೇಶ, ಒಂದು ತೆರಿಗೆ, ಒಂದೇ ಮಾರುಕಟ್ಟೆಯಾಗಲಿದೆ. ಹಣದುಬ್ಬರಕ್ಕೂ ಬ್ರೇಕ್ ಬೀಳಲಿದೆ. ಹಾಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಒಗ್ಗೂಡಿ ಕೆಲಸ ಮಾಡಬೇಕಿದೆ. ಜಿಎಸ್ಟಿಯಿಂದಾಗಿ ನವಭಾರತದ ನಿರ್ಮಾಣವಾಗಲಿದೆ ಎಂದು ಬಣ್ಣಿಸಿದ್ರು.
ಇದನ್ನೂ ಓದಿ: ಜಿಎಸ್ಟಿಯಿಂದ ಯಾವ್ಯಾವ ವಸ್ತುಗಳು ದುಬಾರಿಯಾಗಲಿವೆ? ಇಲ್ಲಿದೆ ಪೂರ್ಣ ಮಾಹಿತಿ
ಜಿಎಸ್ಟಿ ಅಂದ್ರೆ ಗುಡ್ ಅಂಡ್ ಸಿಂಪಲ್ ಟ್ಯಾಕ್ಸ್ ಅಂತ ಪ್ರಧಾನಿ ಮೋದಿ ವ್ಯಾಖ್ಯಾನಿಸಿದ್ದಾರೆ. ಜಿಎಸ್ಟಿ ಜಾರಿಗೆ ಸಂಸತ್ಗಿಂತ ಪವಿತ್ರ ಸ್ಥಳ ಮತ್ತೊಂದಿಲ್ಲ. ಬಡವರ ಹಿತದ ಬಗ್ಗೆ ಜಿಎಸ್ಟಿಯಲ್ಲಿ ಗಮನ ಹರಿಸಲಾಗಿದೆ. ನವಭಾರತ ಕಟ್ಟುವಲ್ಲಿ ಜಿಎಸ್ಟಿ ರಹದಾರಿಯಾಗಲಿದೆ. ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ದೇಶದ ಏಕೀಕರಣ ಮಾಡಿದ್ರು. ಅದರಂತೆ ಜಿಎಸ್ಟಿ ಮೂಲಕ ದೇಶದ ಆರ್ಥಿಕ ಏಕೀಕರಣಕ್ಕೆ ನಾಂದಿ ಹಾಡಿದ್ದೇವೆ. ಲೇಹ್ನಿಂದ ಲಕ್ಷದ್ವೀಪದವರೆಗೆ, ಗಂಗಾನಗರದಿಂದ ಇಟಾ ನಗರದವರೆಗೆ ಒಂದೇ ತೆರಿಗೆ. ಜಿಎಸ್ಟಿ ಯಶಸ್ಸು ಕೇವಲ ಒಂದು ಸರ್ಕಾರಕ್ಕೆ ಸೇರಿದ್ದಲ್ಲ. ಹಿಂದಿನ ಎಲ್ಲ ಸರ್ಕಾರಗಳ ಸಾಮೂಹಿಕ ಶ್ರಮದ ಫಲವಾಗಿ ಎರಡು ದಶಕಗಳ ಕನಸು ಸಾಕಾರಗೊಂಡಿದೆ. ಭಗವದ್ಗೀತೆಯಲ್ಲಿನ 18 ಅಧ್ಯಾಯಗಳಂತೆ ಜಿಎಸ್ಟಿ ಮಂಡಳಿ ಸಹ 18 ಸಭೆ ನಡೆಸಿತ್ತು. ಕಪ್ಪುಹಣಕ್ಕೆ ಕಡಿವಾಣ ಬೀಳಲಿದೆ. ಟೀಂ ಇಂಡಿಯಾದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಅಂದ್ರು. ಇದೇ ವೇಳೆ ಚಾಣಾಕ್ಯನನ್ನೂ ನೆನಪಿಸಿಕೊಂಡ್ರು.
ಇದನ್ನೂ ಓದಿ: ಜಿಎಸ್ಟಿ ಎಫೆಕ್ಟ್, ಚಿನ್ನದ ಅಂಗಡಿಗಳಿಗೆ ಮುಗಿಬಿದ್ದ ಮಹಿಳಾ ಮಣಿಗಳು
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಾತನಾಡಿ, ಹೊಸ ತೆರಿಗೆ ವ್ಯವಸ್ಥೆ ದೇಶದಲ್ಲಿ ಭಾರಿ ಬದಲಾವಣೆಗೆ ಕಾರಣವಾಗಲಿದ್ದು, ಡಿಜಿಟಲ್ ಮತ್ತು ಮಾಹಿತಿ ತಂತ್ರಜ್ಞಾನದಿಂದಾಗಿ ಜಿಎಸ್ಟಿ ಜಾರಿ ಸುಲಭವಾಗಲಿದೆ. ವ್ಯಾಟ್ ಜಾರಿಯಾದ ಹೊಸದರಲ್ಲಿ ಎದುರಾದ ತೊಂದರೆಯೇ ಈಗಲೂ ಆಗಬಹುದು. ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ನಾನು ಕೂಡ ಜಿಎಸ್ಟಿ ಯಾತ್ರೆಯ ಭಾಗವಾಗಿದ್ದೆ. ದೇಶದ ಖ್ಯಾತ ಆರ್ಥಿಕ ತಜ್ಞರು, ಹಣಕಾಸು ಸಚಿವರ ಒಡನಾಟ ಲಭಿಸಿತು ಎಂದು ಮುಖರ್ಜಿ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಇದನ್ನೂ ಓದಿ: ಜಿಎಸ್ಟಿ ಸೇವಾ ತೆರಿಗೆ: ಯಾವುದಕ್ಕೆ ಎಷ್ಟು? ದುಬಾರಿಯಾಗಲಿದೆ ಕನ್ನಡ ಸಿನಿಮಾ ಟಿಕೆಟ್ ದರ