ಬೆಂಗಳೂರು: ಶಕ್ತಿ ಯೋಜನೆ (Shakti Seheme) ಅಡಿ 88 ಕೋಟಿ ಹೆಣ್ಣುಮಕ್ಕಳು ಓಡಾಡಿದ್ದಾರೆ. ಶಕ್ತಿ ಯೋಜನೆ ಮಾಡಿದ ಮೇಲೆ ಧರ್ಮಸ್ಥಳಕ್ಕೆ ಬರೋರು ಜಾಸ್ತಿ ಆಗಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ನನ್ನ ಹೆಸರಲ್ಲಿ ಪೂಜೆ ಮಾಡಿಸ್ತಾರೆ ಅಂತ ಹೇಳಿದ್ದಾರೆ. ನನ್ನ ಹೆಸರಲ್ಲಿ ಪೂಜೆ ಮಾಡಿಸೋ ಹೆಣ್ಣು ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ನುಡಿದಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ 2022-23ನೇ ಸಾಲಿನ ಶೈಕ್ಷಣಿಕ ಧನಸಹಾಯ ಬಿಡುಗಡೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಸಿದ್ದರಾಮಯ್ಯ, ಅಸಂಘಟಿತ ಕಡ್ಟಟ ಕಾರ್ಮಿಕರ ಮಕ್ಕಳು ಶಿಕ್ಷಣ ಪಡೆಯಬೇಕು ಅಂತ 226 ಕೋಟಿ ರೂ. ಧನಸಹಾಯ ಮಾಡ್ತಿದ್ದೇವೆ. 9.60 ಲಕ್ಷ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಿದ್ದೇವೆ. ರಾಜ್ಯದಲ್ಲಿ 83% ಅಸಂಘಟಿತ ಕಾರ್ಮಿಕರು ಇದ್ದಾರೆ. ಕೃಷಿ ಇಲಾಖೆ ಬಿಟ್ಟರೆ ಕಾರ್ಮಿಕರೇ ಹೆಚ್ಚು ಈ ದೇಶದಲ್ಲಿ ಇರೋದು. ಯಾವುದೇ ರಾಷ್ಟ್ರದ ಶಕ್ತಿ ಕಾರ್ಮಿಕರು ಅಂತ ಅಂಬೇಡ್ಕರ್ ಹೇಳಿದ್ದರು ಎಂದು ನುಡಿದರು.
ದೇಶದಲ್ಲಿ ಸಂಪತ್ತು ಉತ್ಪಾದನೆ ಮಾಡೋದು ಕಾರ್ಮಿಕರು. ಅದನ್ನು ಅನುಭವಿಸೋರು ಉಳ್ಳವರು. ಬಸವಣ್ಣ ಕಾಯಕ ಮತ್ತು ದಾಸೋಹ ಅಂತ ಹೇಳಿದ್ದರು. ಎಲ್ಲರು ಉತ್ಪನ್ನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಉತ್ಪಾದನೆ ಅದುದ್ದನ್ನು ಹಂಚಿಕೆ ಮಾಡಿಬೇಕು ಅಂತ ಹೇಳಿದ್ರು. ಬಡತನ, ನಿರುದ್ಯೋಗ, ಅನಕ್ಷರತೆ ಇದು ಸಾಧ್ಯವಿಲ್ಲ. ಇದನ್ನೇ ಸಂವಿಧಾನದಲ್ಲಿ ಹೇಳಿರೋದು. ಸಮಾನತೆ ಪಾಲು ಎಲ್ಲರಿಗೂ ಸಿಗಬೇಕು. ಅದೇ ನಿಜವಾದ ಪ್ರಜಾಪ್ರಭುತ್ವ ಎಂದರು.
ಸಂವಿಧಾನ ಗೊತ್ತಿಲ್ಲದೆ ಹೋದರೆ ದೇಶದ ಇತಿಹಾಸ ಗೊತ್ತಿರೋದಿಲ್ಲ. ಯಾರಿಗೆ ಇತಿಹಾಸ ಗೊತ್ತಿರುತ್ತೆ ಅವರು ಇತಿಹಾಸ ನಿರ್ಮಿಸುತ್ತಾರೆ ಅಂತ ಅಂಬೇಡ್ಕರ್ ಹೇಳಿದ್ರು. ಸಮ ಸಮಾಜ ಹೇಳೋದ್ರಿಂದ ಮಾತ್ರ ನಿರ್ಮಾಣ ಆಗಲ್ಲ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಡಬೇಕು. ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಇದೆ. ಇದರಿಂದ ಶೂದ್ರ ವರ್ಗ ಮತ್ತು ಮಹಿಳೆಯರು ಅಕ್ಷರ ಸಂಸ್ಕೃತಿಯಿಂದ ವಂಚನೆಗೊಳಗಾದರು. ಇದರಿಂದ ಆರ್ಥಿಕ, ಸಾಮಾಜಿಕ ಅಸಮಾನತೆ ನೋಡ್ತಿದ್ದೇವೆ. ಈ ಅಸಮಾನತೆ ಹೋಗಲಾಡಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಆಪರೇಷನ್ ಶಾಪಿಂಗ್ ಹಬ್ – ತೆರವು ಖಂಡಿಸಿ ಬೀದಿಬದಿ ವ್ಯಾಪಾರಿಗಳಿಂದ ಪ್ರತಿಭಟನೆ
ಅಸಮಾಧಾನ ಹೋಗಲಾಡಿಸದೇ ಹೋದರೆ ಪ್ರಜಾಪ್ರಭುತ್ವ ಸೌಧವನ್ನು ಧ್ವಂಸ ಮಾಡ್ತಾರೆ ಅಂತ ಅಂಬೇಡ್ಕರ್ ಹೇಳಿದ್ದರು. ಕಾರ್ಮಿಕರ ಮಕ್ಕಳಿಗೆ ಸಹಾಯ ಧನ ಕೊಡ್ತಿರೋದು ಅವರು ಮುಖ್ಯ ವಾಹಿನಿಗೆ ಬರಬೇಕು ಅಂತ. ನಮ್ಮಲ್ಲಿ ಅನೇಕ ಜಾತಿ, ಭಾಷೆ, ವ್ಯವಸ್ಥೆ ಇದೆ. ಎಲ್ಲರು ಬೆಳವಣಿಗೆ ಆದಾಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡೋಕೆ ಸಾಧ್ಯ. ಕೆಲವರಿಗೆ ಮಾತ್ರ ಪ್ರೊತ್ಸಾಹ ಮಾಡಿದ್ರೆ ಎಲ್ಲರ ಬೆಳವಣಿಗೆ ಆಗಲ್ಲ. ಧರ್ಮ ಮತ್ತು ಜಾತಿ ಹೆಸರಲ್ಲಿ ಸಮಾಜ ಒಡೆಯುವವರ ಬಗ್ಗೆ ಎಚ್ಚರವಾಗಿ ಇರಬೇಕು. ಅಂತಹವರನ್ನು ವಿರೋಧಿಸೋ ಕೆಲಸ ಮುಲಾಜಿಲ್ಲದೆ ಮಾಡಬೇಕು. ಸಂವಿಧಾನ ವಿರೋಧ ಮಾಡೋರು ಈ ದೇಶದಲ್ಲಿ ಇದ್ದಾರೆ. ಸಂವಿಧಾನ ವಿರೋಧ ಮಾಡೋರು ಸಾಮಾಜಿಕ ನ್ಯಾಯದ ವಿರೋಧಿಗಳು. ಅವರನ್ನು ನಾವು ಪಟ್ಟಭದ್ರ ಹಿತಾಸಕ್ತಿಗಳು ಅಂತಾರೆ. ಅವರಿಂದ ಎಚ್ಚರಿಕೆಯಿಂದ ಇರಬೇಕು. ನಮ್ಮ ಸರ್ಕಾರ ಸಮ ಸಮಾಜದ ಆಧಾರದಲ್ಲಿ ಸರ್ಕಾರ ಮಾಡ್ತಿದೆ ಎಂದರು.
ನಮ್ಮ ಸರ್ಕಾರ 5 ಗ್ಯಾರಂಟಿ ಕೊಡ್ತಿದೆ. ಯಾವುದೇ ಜಾತಿ, ಧರ್ಮ ಇಲ್ಲದೆ ಜಾರಿ ಮಾಡಿದ್ದೇವೆ. ಜಾತಿ, ಧರ್ಮ ನೋಡದೇ ಬಡವರಿಗೆ ಕೊಡುತ್ತಿದ್ದೇವೆ. ಗೃಹಲಕ್ಷ್ಮಿ ಯೋಜನೆ ಅಡಿ 1 ಕೋಟಿ 07 ಲಕ್ಷ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ಕೊಡ್ತಿದ್ದೇವೆ. ಕೆಲವರಿಗೆ ಇನ್ನು ಸಿಕ್ಕಿಲ್ಲ. ಅದಕ್ಕೆ ಟೆಕ್ನಿಕಲ್ ಕಾರಣ ಇದೆ. ಶಕ್ತಿ ಯೋಜನೆ ಅಡಿ 88 ಕೋಟಿ ಹೆಣ್ಣು ಮಕ್ಕಳು ಓಡಾಡಿದ್ದಾರೆ. ಶಕ್ತಿ ಯೋಜನೆ ಮಾಡಿದ ಮೇಲೆ ಧರ್ಮಸ್ಥಳಕ್ಕೆ ಬರೋರು ಜಾಸ್ತಿ ಆಗಿದ್ದಾರೆ ಅಂತ ವೀರೇಂದ್ರ ಹೆಗ್ಗಡೆ ಹೇಳಿದ್ರು. ನನ್ನ ಹೆಸರಲ್ಲಿ ಪೂಜೆ ಮಾಡಿಸ್ತಾರೆ ಅಂತ ಹೇಳಿದ್ರು. ನನ್ನ ಹೆಸರಲ್ಲಿ ಪೂಜೆ ಮಾಡಿಸೋ ಹೆಣ್ಣು ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಸಿಎಂ ನುಡಿದಿದ್ದಾರೆ. ಇದನ್ನೂ ಓದಿ: ಟಿಕೆಟ್ ಕೊಡಲ್ಲ ಅಂತ ಹೈಕಮಾಂಡ್ ಹೇಳಿತ್ತು: ಸದಾನಂದಗೌಡ ನಿವೃತ್ತಿ ಘೋಷಣೆಗೆ ಬಿಎಸ್ವೈ ಪ್ರತಿಕ್ರಿಯೆ