ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟು ಹಬ್ಬವನ್ನು ಆಚರಿಸಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಜು.2 ರಂದು ತಮ್ಮ ನೆಚ್ಚಿನ ನಟನ ಬರ್ತಡೇ ಆಚರಿಸಲು ನಾನಾ ರೀತಿಯಲ್ಲಿ ಅಭಿಮಾನಿಗಳು ತಯಾರಿ ಕೂಡ ನಡೆಸಿದ್ದಾರೆ. ಆದರೆ, ಈ ಬಾರಿಯೂ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಮತ್ತು ಅಭಿಮಾನಿಗಳಿಗೆ ತಾವು ಸಿಗುವುದಿಲ್ಲವೆಂದು ಅಧಿಕೃವಾಗಿ ಹೇಳಿಕೊಂಡಿದ್ದಾರೆ ಗಣೇಶ್.
ಈ ಕುರಿತು ಸುದೀರ್ಘ ಪತ್ರ ಬರೆದಿರುವ ಗಣೇಶ್, “ನನ್ನ ಕಲಾ ಬದುಕಿನ ಆರಂಭದ ದಿನಗಳಿಂದ ಶುರುವಾಗಿ ಇಲ್ಲಿಯ ತನಕ ನನ್ನ ಈ ಬಣ್ಣದ ಹಾದಿಯ ಪ್ರತಿ ಹೆಜ್ಜೆಯಲ್ಲೂ ನನ್ನೊಂದಿಗೆ ಹೆಜ್ಜೆ ಹಾಕಿ, ನನ್ನ ಯಶಸ್ಸನ್ನು ನಿಮ್ಮದೇ ಯಶಸ್ಸು ಎನ್ನುವಂತೆ ಸಂಭ್ರಮಿಸಿ ನೀವೆಲ್ಲರೂ ಖುಷಿ ಪಟ್ಟಿದ್ದೀರಿ. ಪ್ರತಿ ವರ್ಷವೂ ನನ್ನ ಹುಟ್ಟಿದ ದಿನದಂದು ರಾಜ್ಯದ ಮೂಲೆ ಮೂಲೆಗಳಿಂದ ನನ್ನ ಮನೆಯ ಬಳಿ ಬಂದು ಅತೀವ ಅಭಿಮಾನದಿಂದ ನನ್ನನ್ನು ಆಲಂಗಿಸಿ ಹರಿಸಿದ್ದೀರಿ. ನಿಮ್ಮ ಅಭಿಮಾನದ ಸವಿಯನ್ನು ಇಡೀ ದಿನ ಖುಷಿಯಿಂದ ಸವಿಯು ಹಂಬಲ ನನಗೂ ಇದೆ. ಆದರೆ, ಕಳೆದ ಬಾರಿಯಂತೆ ಈ ಬಾರಿಯೂ ಸಮಯ ಅದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಮಲಯಾಳಂ ನಟಿ ಅಂಬಿಕಾ ರಾವ್ ನಿಧನ
ಜುಲೈ 2ರಂದು ಗಣೇಶ್ ಅವರು ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಅಭಿಮಾನಿಗಳಿಗೆ ಅವರು ಕ್ಷಮೆ ಕೇಳಿದ್ದಾರೆ. ಅಭಿಮಾನದ ಹಾರು, ತುರಾಯಿ, ಕೇಕ್ ಇತ್ಯಾದಿ ಬದಲಿಗೆ ಅಗತ್ಯ ಇರುವವರಿಗೆ ನಿಮ್ಮ ಕೈಲಾದಷ್ಟು ನೆರವು ನೀಡುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಅರ್ಥಪೂರ್ಣಗೊಳಿಸಲು ಅವರು ವಿನಂತಿಸಿದ್ದಾರೆ.