ಚಿಕ್ಕಬಳ್ಳಾಪುರ: ನಿಮ್ಮ ಮನೆಯಲ್ಲಿನ ದೇವರ ವಿಗ್ರಹಗಳ ಪಾಲಿಷ್ ಮಾಡಿಕೊಡ್ತೀವಿ, ಲಕ ಲಕ ಅಂತ ಹೊಳಿಸ್ತೀವಿ ಎಂದು ಮನೆಯಲ್ಲಿದ್ದ ಒಂಟಿ ವೃದ್ಧೆಗೆ ಮಂಕು ಬೂದಿ ಎರಚಿ ಸರಿಸುಮಾರು 8 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಇಬ್ಬರು ಖತರ್ನಾಕ್ ಖದೀಮರು ದೋಚಿ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಗುಂಡ್ಲಗುರ್ಕಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸೆ.24 ರಂದು ಗುಂಡ್ಲಗುರ್ಕಿ ಗ್ರಾಮದ ಸೊಣ್ಣೇಗೌಡ ಎಂಬವರ ಮನೆ ಬಳಿ ಸರ್ಕಾರಿ ಅಧಿಕಾರಿಗಳಂತೆ ಪೋಸ್ ಕೊಡ್ತಾ, ಸಭ್ಯಸ್ಥರಂತೆ ನೀಟಾಗಿ ಇನ್ ಶರ್ಟ್ ಮಾಡ್ಕೊಂಡು, ಕಾಲಿಗೆ ಶೂ ಧರಿಸಿಕೊಂಡು ಇಬ್ಬರು ಖತರ್ನಾಕ್ ಖದೀಮರು ಬಂದಿದ್ದರು. ಮನೆಯಲ್ಲಿರುವ ಹಳೆ ದೇವರ ವಿಗ್ರಹಗಳು ಹಾಗೂ ಹಳೆ ಚಿನ್ನಾಭರಣಗಳಿಗೆ ಪಾಲಿಷ್ ಮಾಡಿ ಲಕ ಲಕ ಹೊಳೆಯುವ ಹಾಗೆ ಮಾಡ್ತೀವಿ ಅಂತ ಮನೆಯಲ್ಲಿರುವ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಸಾರಿಗೆ ನೌಕರರ ವೇತನ ವಿಳಂಬ – ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೆಚ್ಡಿಕೆ
ಮನೆ ಬಳಿ ಬಂದು ಒಂಟಿಯಾಗಿ ಮನೆಯಲ್ಲಿದ್ದ ವೃದ್ಧೆ ಚಿನ್ನಮ್ಮ ಬಳಿ ಹೋಗಿದ್ದಾರೆ. ಮಹಿಳೆ ನಮಗೆ ಯಾವ ಪಾಲಿಷ್ ಬೇಡ ಎನ್ನುತ್ತಿದ್ದರೂ ಕೇಳದೆ, ಹೋಗಲಿ ನಾವು ಇಲ್ಲಿಗೆ ಬಂದಿದ್ದೇವೆ ಎನ್ನುವ ಗುರುತಿಗೆ ಬುಕ್ ಗೆ ಸಹಿ ಹಾಕಿ ಎಂದು ಕೇಳಿದರು. ಅವರು ಚಿನ್ನಮ್ಮನಿಗೆ ಕೈಯಲ್ಲಿ ಅದೇನೊ ಪೇಪರ್ ಕೊಟ್ಟಿದ್ದಾರೆ ಅಷ್ಟೆ, ಅದನ್ನು ತೆಗೆದುಕೊಂಡು ಚಿನ್ನಮ್ಮಗೆ ಮಂಕುಬೂದಿ ಹಾಕಿ, ಮೊದಲು ದೇವರ ವಿಗ್ರಹವೊಂದಕ್ಕೆ ಪಾಲಿಶ್ ಹಾಕಿ ಕೊಟ್ಟಿದ್ದಾರೆ.
ಕುಡಿಯಲು ನೀರು ಕೊಡಲು ಹೇಳಿ ನಂತರ ಮನೆ ಒಳಗೆ ಬಂದು ಮನೆಯ ಬೀರುವಿನಲ್ಲಿದ್ದ ಎಂಟು ಲಕ್ಷ ರೂ. ಬೆಲೆ ಬಾಳುವ 150 ಗ್ರಾಂ ತೂಕದ 4 ಬಂಗಾರದ ಬಳೆಗಳು, ಒಂದು ಮಾಂಗಲ್ಯ ಸರ, ಎರಡು ಎಳೆಯ ಬಂಗಾರದ ಸರವನ್ನು ಕದ್ದು, ಇಬ್ಬರು ಕ್ಷಣಾರ್ಧಲ್ಲಿ ನಾಪತ್ತೆಯಾಗಿದ್ದಾರೆ. ಹೇಳಿ ಕೇಳಿ ಚಿನ್ನಮ್ಮ ಶ್ರೀಮಂತ ಮಹಿಳೆ, ಮಕ್ಕಳು ದೊಡ್ಡ ದೊಡ್ಡ ಗುತ್ತಿಗೆದಾರರು, ಅಧಿಕಾರಿಗಳು ಆಗಿದ್ದಾರೆ. ಹೀಗಾಗಿ ಇವರ ಮನೆಯನ್ನೆ ಟಾರ್ಗೆಟ್ ಮಾಡಿಕೊಂಡ ಕಿರಾತಕರು ಕೃತ್ಯ ಎಸಗಿದ್ದಾರೆ. ಇದನ್ನೂ ಓದಿ: ಶಾರೂಖ್, ಗೌರಿ ಖಾನ್ ಬೆಂಬಲಕ್ಕೆ ನಿಂತ ಹೃತಿಕ್ ಮಾಜಿ ಪತ್ನಿ, ಮಿಕಾ ಸಿಂಗ್!
ಈ ಕುರಿತು ಚಿನ್ನಮ್ಮ ಅವರ ದೂರು ಪಡೆದಿರುವ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಅಪರಿಚಿತ ಕಿಲಾಡಿಗಳ ವಿರುದ್ದ ಐಪಿಸಿ ಸೆಕ್ಷನ್ 379(ಕಳ್ಳತನಕ್ಕೆ ಶಿಕ್ಷೆ), 420(ಮೋಸ ಮಾಡುವುದು ಮತ್ತು ಅಪ್ರಾಮಾಣಿಕವಾಗಿ ಆಸ್ತಿಯ ವಿತರಣೆಯನ್ನು ಪ್ರೇರೇಪಿಸುವುದು) ಗಳಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈ ಆಸಾಮಿಗಳ ಎಲ್ಲ ಕೃತ್ಯ ಸಹ ಮನೆಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಸಿಸಿಟಿವಿ ರೆಕಾರ್ಡ್ ಆಗುತ್ತೆ ಎಂದು ಗೊತ್ತಿದ್ದರೂ ಕಳ್ಳರು ಈ ಕೃತ್ಯ ನಡೆಸಿದ್ದಾರೆ. ಹೀಗಾಗಿ ಪಾಲಿಶ್ ಮಾಡಿಕೊಡ್ತೀವಿ ಎಂದು ಮನೆ ಬಳಿ ಬರೋ ಅಪರಿಚಿತರ ನಂಬೋ ಮುನ್ನ ಎಚ್ಚರವಾಗಿರಿ ಎಂದು ಪೊಲೀಸರು ಸೂಚನೆ ನೀಡಿದ್ದಾರೆ.