47ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ದೇವರು

Public TV
3 Min Read
SACHIN 01

– ‘ಒಂದು ಅವಕಾಶಕ್ಕಾಗಿ ಕ್ಯಾಪ್ಟನ್ ಬಳಿ ಬೇಡಿದ್ದ ಕ್ರಿಕೆಟ್ ದಿಗ್ಗಜ’

ಮುಂಬೈ: ಕ್ರಿಕೆಟ್ ದಿಗ್ಗಜ, ಕ್ರಿಕೆಟ್ ದೇವರು, ದಂತಕಥೆ ಸಚಿನ್ ತೆಂಡೂಲ್ಕರ್ ಇಂದು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕ್ರಿಕೆಟ್ ದೇವರ ಹುಟ್ಟುಹಬ್ಬಕ್ಕೆ ವಿಶ್ವದ ಮೂಲೆ ಮೂಲೆಯಿಂದ ಶುಭಾಶಯಗಳು ಹರಿದು ಬರುತ್ತಿವೆ.

ಮಹಾರಾಷ್ಟ್ರದ ಮುಂಬೈನಲ್ಲಿ 1973ರ ಏಪ್ರಿಲ್ 24ರಂದು ಜನಿಸಿದ ಮಾಸ್ಟರ್ ಬ್ಲಾಸ್ಟರ್ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅನೇಕ ದಾಖಲೆಯನ್ನು ಬರೆದಿದ್ದಾರೆ. ಆದರೆ ಲಿಟಲ್ ಮಾಸ್ಟರ್ ಒಂದು ಅವಕಾಶಕ್ಕಾಗಿ ನಾಯಕನ ಬಳಿ ಬೇಡಿಕೊಂಡಿದ್ದ ಬಗ್ಗೆ ನಿಮಗೆಷ್ಟು ಗೊತ್ತು? ಅಂದು ಸಿಕ್ಕ ಅವಕಾಶದಲ್ಲಿ ಸಚಿನ್ ತಮ್ಮ ಬ್ಯಾಟಿಂಗ್ ಮ್ಯಾಜಿಕ್ ತೋರಿಸಿದ್ದು ಇತಿಹಾಸದ ಪುಟ ಸೇರಿದೆ. ಇದನ್ನೂ ಓದಿ: ಹುಟ್ಟುಹಬ್ಬದಂದೇ ಸಚಿನ್ ಮಾನವೀಯತೆಯನ್ನು ನೆನೆದ ಸೆಹ್ವಾಗ್

sachin tendulkar azharuddin s

ಹೌದು. ಸಾಮಾನ್ಯವಾಗಿ ತಂಡದಲ್ಲಿ ಸ್ಥಾನ ಸಿಕ್ಕರೆ, ಓಪನಿಂಗ್ ಅವಕಾಶ ಪಡೆಯುವ ಆಸೆ ಪ್ರತಿಯೊಬ್ಬ ಬ್ಯಾಟ್ಸ್‌ಮನ್‍ನಲ್ಲೂ ಇರುತ್ತದೆ. ಅಂತಹದೊಂದು ತವಕ ಮಾಸ್ಟರ್ ಬ್ಲಾಸ್ಟರ್‍ಗೂ ಇತ್ತು. 16ನೇ ವಯಸ್ಸಿನಲ್ಲಿ ಭಾರತದ ಕ್ರಿಕೆಟ್ ತಂಡಕ್ಕೆ ಎಂಟ್ರಿಕೊಟ್ಟಿದ್ದ ಸಚಿನ್ ಮಿಡಲ್ ಆರ್ಡರ್ ಬ್ಯಾಟ್ಸ್‌ಮನ್ ಆಗಿ ವೃತ್ತಿಜೀವನ ಆರಂಭಿಸಿದ್ದರು. ಆದರೆ ಅಷ್ಟೇನು ಯಶಸ್ವಿಯಾಗಿರಲಿಲ್ಲ. ಹೀಗಾಗಿಯೇ ಲಿಟಲ್ ಮಾಸ್ಟರ್ ತಮಗೆ ಬ್ಯಾಟಿಂಗ್ ಮಾಡಲು ಅನುಕೂಲವಾಗುವ ಕ್ರಮಾಂಕವನ್ನು ಎದುರು ನೋಡುತ್ತಿದ್ದರು.

ನ್ಯೂಜಿಲೆಂಡ್ ವಿರುದ್ಧ 1994ರ ಸೆಪ್ಟೆಂಬರ್‌ನಲ್ಲಿ ನಡೆದ ಪಂದ್ಯದಲ್ಲಿ ಓಪನಿಂಗ್ ಬ್ಯಾಟಿಂಗ್ ಮಾಡುವ ಅವಕಾಶ ನೀಡುವಂತೆ ಸಚಿನ್ ಟೀಂ ಇಂಡಿಯಾ ಮ್ಯಾನೇಜ್ಮೆಂಟ್, ನಾಯಕನನ್ನು ಬೇಡಿದ್ದರಂತೆ. ಈ ವಿಚಾರವನ್ನು ಸಂದರ್ಶವೊಂದರಲ್ಲಿ ಸ್ವತಃ ಸಚಿನ್ ಅವರೇ ಬಹಿರಂಗ ಪಡಿಸಿದ್ದರು. ”ನಾನು ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶಕ್ಕಾಗಿ ಟೀಂ ಮ್ಯಾನೇಜ್ಮೆಂಟ್ ಅನ್ನು ಭಿಕ್ಷುಕನಂತೆ ಬೇಡಿಕೊಂಡಿದ್ದೆ” ಎಂದು ಮಾಸ್ಟರ್ ಬ್ಲಾಸ್ಟರ್ ನೆನೆದಿದ್ದರು.

Sachin Tendulkar A

”ನನ್ನಲ್ಲಿ ಆಕ್ರಮಣಕಾರಿ ಆಟವಾಡುವ ವಿಶ್ವಾಸವಿತ್ತು. ಈ ಬಗ್ಗೆ ನಾಯಕನಿಗೆ ಮತ್ತು ಮ್ಯಾನೇಜರ್‌ಗೆ ಮನವರಿಕೆ ಮಾಡಿಕೊಟ್ಟೆ. ಒಂದು ವೇಳೆ ವಿಫಲನಾದರೆ ಮತ್ತೆ ನಿಮ್ಮೊಂದಿಗೆ ಕೇಳುವುದಿಲ್ಲ ಎಂದೆ. ಕೊನೆಗೂ ಅಂದು ನನಗೆ ಇನಿಂಗ್ಸ್ ಆರಂಭಿಸುವ ಅವಕಾಶ ಲಭಿಸಿತ್ತು” ಎಂದು ಸಚಿನ್ ಸಂದರ್ಶದಲ್ಲಿ ಹೇಳಿಕೊಂಡಿದ್ದರು.

”ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಅಂದಿನ ಆರಂಭಿಕ ಆಟಗಾರ ನವಜೋತ್ ಸಿಂಗ್ ಸಿಧು ಅವರಿಗೆ ಕುತ್ತಿಗೆ ನೋವು ಕಾಣಿಸಿಕೊಂಡಿತ್ತು. ಹಾಗಾಗಿ ಇನ್ನಿಂಗ್ಸ್ ಆರಂಭಿಸಲು ಅವರಿಂದ ಸಾಧ್ಯವಿರಲಿಲ್ಲ. ಈ ವೇಳೆ ಅಂದಿನ ನಾಯಕ ಅಜರುದ್ದೀನ್ ಹಾಗೂ ಮ್ಯಾನೇಜರ್ ಅಜಿತ್ ವಾಡೇಕರ್ ಅವರಿಗೆ ಒಂದು ಅವಕಾಶ ನೀಡುವಂತೆ ಕೇಳಿಕೊಂಡಿದ್ದೆ. ಎಲ್ಲರ ಮೊದಲ ಪ್ರತಿಕ್ರಿಯೆ ನಾನ್ಯಾಕೆ ಇನಿಂಗ್ಸ್ ಆರಂಭಿಸಬೇಕು ಎಂಬುದಾಗಿತ್ತು. ಆದರೆ ನನ್ನಲ್ಲಿ ಆಕ್ರಮಣಕಾರಿ ಆಟವಾಡುವ ವಿಶ್ವಾಸವಿತ್ತು. ಈ ಬಗ್ಗೆ ನಾಯಕನಿಗೆ ಮತ್ತು ಮ್ಯಾನೇಜರ್ ಅಜಿತ್ ವಾಡೇಕರ್ ಅವರಿಗೆ ಮನವರಿಕೆ ಮಾಡಿಕೊಟ್ಟೆ. ಒಂದು ವೇಳೆ ವಿಫಲನಾದರೆ ಮತ್ತೆ ನಿಮ್ಮೊಂದಿಗೆ ಕೇಳುವುದಿಲ್ಲ ಎಂದು ಹೇಳಿದ್ದೆ. ಕೊನೆಗೂ ಅಂದು ನನಗೆ ಇನಿಂಗ್ಸ್ ಆರಂಭಿಸುವ ಅವಕಾಶ ಲಭಿಸಿತು” ಎಂದು ಸಚಿನ್ ಆದಿನವನ್ನು ನೆನೆದಿದ್ದರು.

https://www.facebook.com/publictv/videos/532225020823063

”ಆಕ್ಲೆಂಡ್‍ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ನನ್ನನ್ನು ಓಪನರ್ ಆಗಿ ಕಣಕ್ಕಿಳಿಸಿದ್ದರು. ಈ ಪಂದ್ಯದಲ್ಲಿ ನಾನು 49 ಎಸೆತಗಳಲ್ಲಿ ಸ್ಫೋಟಕ 82 ರನ್‍ಗಳನ್ನು ಚಚ್ಚಿದ್ದೆ. ಹಾಗಾಗಿ ಎರಡನೇ ಬಾರಿ ಓಪನಿಂಗ್ ಅವಕಾಶವನ್ನು ಕೇಳಬೇಕಾದ ಅನಿವಾರ್ಯತೆಯೇ ಬರಲಿಲ್ಲ” ಎಂದು ಸಚಿನ್ ತಮ್ಮ ಕ್ರಿಕೆಟ್ ಜೀವನವನ್ನು ಮೆಲುಕು ಹಾಕಿದ್ದರು.

ಸಚಿನ್ ಅಂದು ಆರಂಭಿಕರಾಗಿ ಕಣಕ್ಕಿಳಿದ ಅವರ ಆಟದ ಖದರೇ ಬದಲಾಯಿತು. ಓಪನರ್ ಆಗಿ ಆಡಿದ ಮೊದಲ ಐದು ಇನ್ನಿಂಗ್ಸ್‌ಗಳಲ್ಲಿ ಕ್ರಿಕೆಟ್ ದೇವರು ಕ್ರಮವಾಗಿ 82, 63, 40, 63 ಮತ್ತು 73 ರನ್‍ಗಳನ್ನು ಬಾರಿಸಿದ್ದರು. ಕೊಲಂಬೊದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸಚಿನ್ ತಮ್ಮ 76ನೇ ಇನ್ನಿಂಗ್ಸ್‍ನಲ್ಲಿ ಚೊಚ್ಚಲ ಏಕದಿನ ಶತಕವನ್ನು ಗಳಿಸಿದ್ದರು. ಅಲ್ಲಿಂದ ಆರಂಭವಾದ ಸೆಂಚುರಿ ಸರದಾರನ ಆಟ ನಿವೃತ್ತರಾಗುವ ವೇಳೆಗೆ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ 100 ಶತಕಗಳಿಗೆ ಬಂದು ನಿಂತಿತ್ತು. ಕಾಡಿ ಬೇಡಿ ಆರಂಭವಾಗಿದ್ದ ಕ್ರಿಕೆಟ್ ವೃತ್ತಿಯ 463 ಏಕದಿನ ಇನ್ನಿಂಗ್ಸ್‍ಗಳಲ್ಲಿ 18,426 ರನ್ ಗಳಿಸಿ ಏಕದಿನ ಕ್ರಿಕೆಟ್‍ನಲ್ಲಿ ಅತ್ಯಧಿಕ ರನ್‍ಗಳಿಸಿದ ವಿಶ್ವದ ಸರ್ವಶ್ರೇಷ್ಠ ಆಟಗಾರ ಎನಿಸಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *