ಬೆಂಗಳೂರು: ದೇವರು, ಧರ್ಮ ಬಿಜೆಪಿಯವರ ಆಸ್ತಿಯೇ? ಪೂಜೆಯನ್ನು ಬಿಜೆಪಿಯವರು ಮಾತ್ರ ಮಾಡುವುದೇ? ನೀರಿಗೆ, ಗಾಳಿಗೆ, ಬೆಳಕಿಗೆ ಜಾತಿ ಇದೆಯೇ? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K Shivakumar) ಅವರು ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ (KPCC) ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ, ನಾವು ಏನೇ ಮಾಡಿದರೂ ಬಿಜೆಪಿಯವರು ಟೀಕೆ ಮಾಡ್ತಾರೆ. ಕೆಆರ್ಎಸ್ ಬಳಿ ಕಾವೇರಿ ಆರತಿ ಕಾರ್ಯಕ್ರಮ ಮಾಡಲು ಮುಂದಾಗಿದ್ದೇವೆ. ಇದಕ್ಕೆ ಪೂರ್ವಭಾವಿಯಾಗಿ ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಕಾರ್ಯಕ್ರಮ ಮಾಡಲಾಯಿತು. ಸುಮಾರು 25 ಸಾವಿರ ಜನರು ಭಾಗವಹಿಸಿದ್ದರು. ಸ್ಥಳೀಯ ಶಾಸಕರು ಇದನ್ನು ನೋಡಿ ಗಾಬರಿಯಾಗಿದ್ದರು. ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ರೈತ ಸಂಘದವರು ಟೀಕೆ ಮಾಡುತ್ತಿದ್ದಾರೆ. ಅವರನ್ನು ಕರೆದು ಮಾತನಾಡುತ್ತೇವೆ. ಟೀಕೆಗಳನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ, ಟೀಕೆಗಳಿಲ್ಲದೇ ಯಾವುದೇ ಕೆಲಸಗಳು ಆಗುವುದಿಲ್ಲ. ನಾವೆಲ್ಲರೂ ಒಟ್ಟಾಗಿ ಸಮಾಜವನ್ನು ತೆಗೆದುಕೊಂಡು ಹೋಗುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ನವರ ಹೃದಯ ಬಗೆದ್ರೆ ರಾಹುಲ್ ಗಾಂಧಿ, ಪಾಕ್ ಪ್ರಧಾನಿ ಬಿರಿಯಾನಿ ತಿನ್ನೋದು ಕಾಣುತ್ತೆ: ಬಿ.ಸಿ ಪಾಟೀಲ್ ವ್ಯಂಗ್ಯ
ರಾಜೀವ್ ಗಾಂಧಿ ಅವರ ಹತ್ಯೆಯಿಂದ ಸ್ತ್ರೀ ಶಕ್ತಿಗೆ, ಯುವ ಪೀಳಿಗೆ ಹಾಗೂ ಇಡೀ ದೇಶಕ್ಕೆ ದೊಡ್ಡ ನಷ್ಟವಾಗಿದೆ. ರಾಜೀವ್ ಗಾಂಧಿ ಅವರ ಬಗ್ಗೆ ಇಡೀ ಪ್ರಪಂಚದಲ್ಲಿಯೇ ಸಾಕಷ್ಟು ಒಲವಿತ್ತು. ಅವರನ್ನು ಇತರೇ ರಾಷ್ಟ್ರಗಳು ಅತ್ಯಂತ ಗೌರವದಿಂದ ನೋಡುತ್ತಿದ್ದರು. ಅಷ್ಟರ ಮಟ್ಟಿಗೆ ಅವರು ತಮ್ಮ ಆಧುನಿಕ ಚಿಂತನೆಗಳಿಂದ ಪ್ರಭಾವ ಬೀರಿದ್ದರು. ಇವರಿಂದ 18 ವರ್ಷಕ್ಕೆ ಮತದಾನದ ಹಕ್ಕು ದೊರೆಯಿತು, ಮಹಿಳೆಯರಿಗೆ ಸ್ಥಳೀಯ ಸಂಸ್ಥೆಯಲ್ಲಿ 50% ರಷ್ಟು ಮೀಸಲಾತಿ ನೀಡಿದರು. ಪಕ್ಷಾಂತರ ವಿರೋಧಿ ಕಾಯ್ದೆಗೆ ಕಾನೂನು ತಂದರು. ದೆಹಲಿಗೆ ರಾಜ್ಯದ ಸ್ಥಾನಮಾನ ನೀಡಿದರು. ಹೀಗೆ ಹಲವಾರು ಕ್ರಾಂತಿಕಾರಕ ಬದಲಾವಣೆಗಳನ್ನು ಜಾರಿಗೆ ತಂದವರು ರಾಜೀವ್ ಗಾಂಧಿಯವರು ಎಂದು ಹೇಳಿದ್ದಾರೆ.
ಮೊದಲು ಒಂದು ಲ್ಯಾಂಡ್ ಲೈನ್ ಫೋನ್ ಸಂಪರ್ಕ ಪಡೆದುಕೊಳ್ಳಲು ಸಂಸದರಿಂದ ಪತ್ರ ಪಡೆಯಬೇಕಿತ್ತು. ಯುವ ಕಾಂಗ್ರೆಸ್ ಅಧ್ಯಕ್ಷನಾದ ನಿನ್ನನು ಹೇಗೆ ಸಂಪರ್ಕಿಸುವುದು ಎಂದು ಹೇಳಿ ಜಾಫರ್ ಷರೀಫ್ ಅವರು ನನಗೆ ಫೋನ್ ಸಂಪರ್ಕ ಕೊಡಿಸಿದರು. ಸೆಲ್ ಫೋನ್ ತಂತ್ರಜ್ಞಾನ ಭಾರತಕ್ಕೆ ಬರಲು ರಾಜೀವ್ ಗಾಂಧಿ ಅವರು ಹಾಗೂ ಅವರಿಗೆ ಸಲಹೆಗಾರರಾಗಿದ್ದ ಸ್ಯಾಮ್ ಪಿತ್ರೋಡ ಅವರು ಕಾರಣ. ಕಾವೇರಿ ಗಲಭೆ ವೇಳೆ ಎನ್ಪಿಎಸ್ ಶಾಲೆಯಲ್ಲಿದ್ದ ಕಂಪ್ಯೂಟರ್ಗಳನ್ನು ಸುಟ್ಟು ಹಾಕಲಾಯಿತು. ಆಗ ಅವು 1.50 ಲಕ್ಷ ರೂ. ಬೆಲೆ ಬಾಳುತ್ತಿತ್ತು, ಈಗ 15- 20,೦೦೦ ರೂ.ಗೆ ದೊರೆಯುತ್ತಿದೆ. ಐಟಿ ಕ್ರಾಂತಿಗೆ ನಾಂದಿ ಹಾಡಿದ ಆಧುನಿಕತೆಯ ಹರಿಕಾರ ರಾಜೀವ್ ಗಾಂಧಿ ಆಗಿದ್ದಾರೆ.
ನನ್ನನ್ನು ಚನ್ನಪಟ್ಟಣದಿಂದ ಬೆಂಗಳೂರಿನ ತನಕ ಕಾರಿನಲ್ಲಿ ಜೊತೆಯಾಗಿ ಕರೆದುಕೊಂಡು ಬಂದ ರಾಜೀವ್ ಗಾಂಧಿಯವರು ರಾಜ್ಯದ ಪರಿಸ್ಥಿತಿಯ ಬಗ್ಗೆ ಅವಲೋಕಿಸಿದರು. ನನ್ನ ಬಳಿ ಚರ್ಚೆ ಮಾಡಿದರು. ಅಂದು ರಾತ್ರಿ ಏನು ಮಾತುಕತೆಯಾಯಿತು ಎಂದು ನಾನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ವಿರೇಂದ್ರ ಪಾಟೀಲ್ ಅವರು ಅಂದು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು ಆದರೆ ಅವರ ಆರೋಗ್ಯ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಇದನ್ನು ಗಮನಿಸಿದ ಅವರು ಮರಳಿ ಹೋಗುವಾಗ ವಿಮಾನ ನಿಲ್ದಾಣದಲ್ಲಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿದೆ. ಮುಖ್ಯಮಂತ್ರಿ ಸ್ಥಾನ ಬದಲಾವಣೆ ನಂತರ ಒಂದಷ್ಟು ಗಲಾಟೆಗಳು ನಡೆಯಿತು. ಈ ವೇಳೆ ರಾಜೀವ್ ಗಾಂಧಿ ಅವರು ಹೈದರಾಬಾದ್ಗೆ ತೆರಳಿದರು. ನಾನು, ರಮೇಶ್, ಗುತ್ತೇದಾರ್, ಬಂಗಾರಪ್ಪ ಅವರು ಹೈದರಾಬಾದ್ಗೆ ತೆರಳಿದೆವು. ನಾನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದೆ. ಅಂದು ಬಂಗಾರಪ್ಪ ಅವರಿಗೆ ರಾಜೀವ್ ಗಾಂಧಿ ಅವರು ಸೂಚನೆ ನೀಡಿದರು. ಎಲ್ಲಾ ಜಾತಿಯ ಯುವಕರನ್ನು ಗುರುತಿಸಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಜಿಲ್ಲೆಗೆ ಇಬ್ಬರು ಆದರೂ ಚಿಂತೆ ಮಾಡಬೇಡಿ ಎಂದು ತಿಳಿಸಿದರು. ಈ ಕಾರಣಕ್ಕೆ ನಮಗೆಲ್ಲ ಮೊದಲ ಬಾರಿಗೆ ಅವಕಾಶ ಸಿಕ್ಕಿತ್ತು. ಮೊಟ್ಟ ಮೊದಲ ಬಾರಿಗೆ ಬಿ.ಕೆ.ಹರಿಪ್ರಸಾದ್ ಅವರಿಗೆ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನ ನೀಡಿದರು. ರಾಜ್ಯದಿಂದ ವಿರೋಧವಿದ್ದರು ರಾಜ್ಯಸಭೆಗೆ ಇವರನ್ನು ಆಯ್ಕೆ ಮಾಡಿದರು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ, ಭಯೋತ್ಪಾದನೆಯಿಂದ ನಮ್ಮ ನಾಗರಿಕರು ಮರಣ ಹೊಂದಿದರು. ಅದಾದ ನಂತರ ನಮ್ಮ ಸೇನಾಪಡೆಗಳು ತಕ್ಕ ಉತ್ತರ ನೀಡಿವೆ. ಆಗ ನಿಮ್ಮೆಲ್ಲರ ಬೆಂಬಲದಿಂದ ತಿರಂಗಾ ಯಾತ್ರೆ ನಡೆಸಲಾಯಿತು. ನಮ್ಮ ಪದಾಧಿಕಾರಿಗಳು, ನಾಯಕರು ಬೆಂಗಳೂರಿಗೆ ಗೌರವ ತರುವ ರೀತಿಯಲ್ಲಿ ಯಾತ್ರೆ ಆಯೋಜಿಸಲಾಗಿತ್ತು. ಇನ್ನೂ ಕೇವಲ ನಾನು, ಜಮೀರ್ ಅಹಮದ್, ಕೃಷ್ಣಬೈರೇಗೌಡ ಅವರು ಸೇರಿ ಸರ್ಕಾರದ ಎರಡು ವರ್ಷದ ಸಂಭ್ರಮ ಮಾಡಿಲ್ಲ. ರಾಜ್ಯದ ಎಲ್ಲಾ ಕಾರ್ಯಕರ್ತರು, ಶಾಸಕರು, ಮಂತ್ರಿಗಳು ಸೇರಿ ಮಾಡಿದ ಸಂಭ್ರಮ. ಈ ಎರಡು ವರ್ಷದ ಯಶಸ್ಸಿನಲ್ಲಿ ಪಕ್ಷದ ಎಲ್ಲರ ಪಾತ್ರವಿದೆ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ಪಟ್ಟಾ ಖಾತೆ ಹಂಚಿಕೆಯನ್ನು ಅಧಿಕಾರಿಗಳು ಹಂಚಿಕೆ ಮಾಡುವುದಿಲ್ಲ. ಬದಲಾಗಿ ಪ್ರತಿ ಕ್ಷೇತ್ರದ ಗ್ಯಾರಂಟಿ ಸಮಿತಿಯ ಸದಸ್ಯರು ಜನರಿಗೆ ಖಾತೆಗಳನ್ನು ಹಂಚಿಕೆ ಮಾಡುತ್ತಿದ್ದಾರೆ. ಬೆಂಗಳೂರು ನಗರದಲ್ಲಿಯೂ ಇ- ಸ್ವತ್ತು ಖಾತೆಗಳ ಡಿಜೀಟಲೀಕರಣ ಮಾಡಲಾಗುತ್ತಿದೆ. ಇಲ್ಲಿಯೂ ಅದೇ ರೀತಿ ಹಂಚಿಕೆ ಮಾಡಲಾಗುವುದು. ಬಿಬಿಎಂಪಿ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಈಗ ಗ್ರೇಟರ್ ಬೆಂಗಳೂರು ಜಾರಿಗೆ ಬಂದಿದೆ. ಶೀಘ್ರದಲ್ಲಿಯೇ ಚುನಾವಣೆ ನಡೆಯಲಿದೆ. ಮುಂದಕ್ಕೆ ಶಾಸಕರಾಗಬೇಕು ಎನ್ನುವ ಆಲೋಚನೆ ಇದ್ದವರು ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧರಾಗಬೇಕು ಎಂದು ಕರೆ ನೀಡಿದ್ದಾರೆ.
ಭಯೋತ್ಪಾದಕ ದಾಳಿ ಬಗ್ಗೆ ಚರ್ಚೆ ನಡೆಯುತ್ತಿವೆ. ಬಿ.ಕೆ.ಹರಿಪ್ರಸಾದ್ ಅವರು ಹೇಳುವಂತೆ ಲೈನ್ ಆಫ್ ಕಂಟ್ರೋಲ್ನಿಂದ ಪಹಲ್ಗಾಮ್ಗೆ ಬರುವುದಕ್ಕೆ ಹತ್ತು ದಿನವಾಗುತ್ತದೆ ಎಂದು ಹೇಳಲಾಗುತ್ತದೆ. ಇದೆಲ್ಲಾ ನಡೆದಿದ್ದು ನಿಜವೇ ಎಂದು ನಾವು ಅಧ್ಯಯನ ಮಾಡಬೇಕಿದೆ. ನಮಗೆ ಪಕ್ಷಕ್ಕಿಂತ ದೇಶ ಮುಖ್ಯ. ಇದರ ಬಗ್ಗೆ ನೀವು ನಾವು ತಿಳಿದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಜಿ. ಪರಮೇಶ್ವರ್ ಅವರ ಸಂಸ್ಥೆಗಳ ಮೇಲೆ ಇಡಿ ದಾಳಿ ಬಗ್ಗೆ ಕೇಳಿದಾಗ, ಇದರ ಬಗ್ಗೆ ನಾನು ಮಾಹಿತಿ ಪಡೆದು ಮಾತನಾಡುತ್ತೇನೆ. ಪರಮೇಶ್ವರ್ ಅವರು ಅತ್ಯಂತ ಸರಳ ವ್ಯಕ್ತಿ. ಅವರು ಯಾವುದೇ ತಪ್ಪು ಮಾಡಿರಲು ಸಾಧ್ಯವಿಲ್ಲ. ಇನ್ನೂ ಬೆಂಗಳೂರು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದನ್ನು ಬಿಜೆಪಿ ಟೀಕೆ ಮಾಡುತ್ತಿದ್ದಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಅವರ ಕಾಲದಲ್ಲಿ ಆಗಿರುವ ತಪ್ಪುಗಳನ್ನು ನಾವು ಸರಿ ಮಾಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ 2 ವರ್ಷ – ಸಿಎಂಗೆ `ದಿವಾಳಿ ಮಾಡೆಲ್ ಆಫ್ ಕರ್ನಾಟಕ’ ಬಿರುದು ಕೊಟ್ಟ ಬಿಜೆಪಿ