ಮಂಡ್ಯ: ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದ ವೀರ ಯೋಧ ಗುರು ಕುಟುಂಬಕ್ಕೆ ಗೋಬಿ ಮಂಚೂರಿ ವ್ಯಾಪಾರಿಯೊಬ್ಬರು ತಮ್ಮ ಒಂದು ದಿನದ ದುಡಿಮೆಯನ್ನು ನೀಡಿ ಗೌರವ ಸಲ್ಲಿಸಿದ್ದಾರೆ.
ಮಂಡ್ಯದ ಹೊಳಲು ವೃತ್ತದಲ್ಲಿರುವ ವ್ಯಾಪಾರಿ ಉಪ್ಪಿಗೋವಿಂದ ಅವರು ಒಂದು ದಿನದ ದುಡಿಮೆಯನ್ನು ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಗುಡಿಗೆರೆ ಯೋದ ಗುರು.ಎಚ್. ಮಡಿವಾಳ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಮಂಗಳವಾರ ವ್ಯಾಪಾರ ಆರಂಭಿಸಿದ್ದರು. ಆಹಾರ ಸೇವಿಸಿದ ಯಾರ ಬಳಿಯೂ ಹಣ ಪಡೆಯದೇ ಯೋಧರ ನೆರವಿಗೆ ನಿಮ್ಮ ಕೈಲಾದ ಹಣವನ್ನು ಹುಂಡಿಗೆ ಹಾಕಿ ಎಂದು ಮನವಿ ಮಾಡಿದ್ದರು.
ಆಹಾರ ಸೇವಿಸಿದವರು ನೀಡಿದ ಹಣ ಸುಮಾರು 10 ಸಾವಿರ ರೂ. ಸಂಗ್ರಹವಾಗಿತ್ತು. ಸಂಗ್ರಹವಾದ ಹಣವನ್ನು ಬುಧವಾರ ಉಪ್ಪಿಗೋವಿಂದ ಅವರು ವೀರ ಯೋಧ ಗುರು ಕುಟುಂಬಕ್ಕೆ ನೀಡಿದ್ದಾರೆ.
ಇಂದು ಯೋಧರು ತಮ್ಮ ಮಕ್ಕಳು, ಕುಟುಂಬದವರಿಂದ ದೂರ ಇದ್ದು ದೇಶ ಕಾಯುತ್ತಿದ್ದಾರೆ. ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಟ ನಡೆಸುತ್ತಿದ್ದಾರೆ. ಆದ್ದರಿಂದ ಒಂದು ದಿನ ಸಂಪಾದನೆ ಮಾಡಿದ ಹಣವನ್ನು ವೀರ ಯೋಧ ಗುರು ಮೃತರ ಕುಟುಂಬಕ್ಕೆ ನೀಡುತ್ತಿದ್ದೇನೆ ಎಂದು ತಿಳಿಸಿದರು.
ಸರ್ಕಾರ ಎಷ್ಟೇ ಹಣ ಕೊಟ್ಟರು, ಸಾರ್ವಜನಿಕರು ತಮ್ಮ ಕೈಲಾದ ಸಹಾಯ ಮಾಡುವುದರಿಂದ ಮುಂದೆ ಅವರ ಮಕ್ಕಳನ್ನು ಯೋಧರಾಗಿ ಮಾಡಲು ಬಯಸುತ್ತಾರೆ. ಇದನ್ನು ನನ್ನ ಆತ್ಮ ತೃಪ್ತಿಗಾಗಿ ಮಾಡುತ್ತಿದ್ದೇನೆ ಎಂದು ಉಪ್ಪಿಗೋವಿಂದ ಹೇಳಿದರು.
https://www.youtube.com/watch?v=vw7lk_ueU98
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv