ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಕರ್ನಾಟಕ (Karnataka) ರಾಜ್ಯದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಬಂಡವಾಳ ಹೂಡಿಕೆ (Investment) ವಿಚಾರದಲ್ಲಿ ಕರ್ನಾಟಕ ದೇಶದ ಇತರ ನಗರಗಳ ಜತೆ ಸ್ಪರ್ಧೆ ಮಾಡುತ್ತಿಲ್ಲ. ಬದಲಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ತಿಳಿಸಿದರು. ಇದನ್ನೂ ಓದಿ : ರಕ್ಷಣಾ ಒಪ್ಪಂದ – ಭಾರತಕ್ಕೆ ಅಮೆರಿಕದ F-35 ಯುದ್ಧ ವಿಮಾನ
ಅರಮನೆ ಮೈದಾನದಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ 2025 (Invest Karnataka 2025) ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ದಿನಗಳಲ್ಲಿ ಈ ಸಮಾವೇಶದಲ್ಲಿ ಅನೇಕ ಒಪ್ಪಂದಗಳು, ಚರ್ಚೆಗಳು ನಡೆದಿವೆ. ನೀವೆಲ್ಲರೂ ಕರ್ನಾಟಕ ರಾಜ್ಯದಲ್ಲಿ ಸೋಲುವ ಮಾತಿಲ್ಲ. ಹೀಗಾಗಿ ಈ ರಾಜ್ಯದ ಮೇಲೆ ನೀವು ವಿಶ್ವಾಸವಿಡಬಹುದು. ಈ ರಾಜ್ಯಕ್ಕೆ ಬಂದವರು ಬರಿಗೈಯಲ್ಲಿ ಹೋಗುವುದಿಲ್ಲ. ಈ ಸಮಾವೇಶದಲ್ಲಿ ಭಾಗವಹಿಸಿದ ಸಜ್ಜನ್ ಜಿಂದಾಲ್, ಆನಂದ್ ಮಹೀಂದ್ರಾ ಅವರ ಮಾತು ಕೇಳಿದ್ದೀರಿ. ಅವರ ಯೋಶೋಗಾಥೆ ಕೇಳಿದ್ದೀರಿ. ಇವರ ಮಾತು ಕೇಳಿದ ನಂತರ ವಿಶ್ವ ಭಾರತವನ್ನು ಬೆಂಗಳೂರು ಹಾಗೂ ಕರ್ನಾಟಕದ ಮೂಲಕ ನೋಡುತ್ತಿದೆ ಎಂದರು.
Advertisement
Advertisement
ನಿಮ್ಮ ಕರ್ನಾಟಕ ರಾಜ್ಯ ಹಾಗೂ ದೇಶದ ಭವಿಷ್ಯಕ್ಕಾಗಿ ನೀವು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಬೇಕು. ಇದು ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿ ಮಾತ್ರವಲ್ಲ ಬೆಂಗಳೂರಿನ ಹೊರತಾಗಿ ಪ್ರಗತಿ ಸಾಧಿಸಲು ನಾವು ಗುರಿ ಹೊಂದಿದ್ದೇವೆ. ನಮ್ಮ ರಾಜ್ಯದಲ್ಲಿ ಏರೋಸ್ಪೇಸ್ ಕ್ಷೇತ್ರದಲ್ಲಿ ನಮ್ಮ ಎಂಎಸ್ಎಂಇಗಳು ದೊಡ್ಡ ಶಕ್ತಿ ತುಂಬುತ್ತಿವೆ. ಬಾಹ್ಯಾಕಾಶ ಕ್ಷೇತ್ರದ ಸಾಧನೆಗೆ ರಾಕೆಟ್ಗಳನ್ನು ನಮ್ಮ ಪೀಣ್ಯ ಕೈಗಾರಿಕಾ ಪ್ರದೇಶದಲ್ಲೇ ತಯಾರು ಮಾಡಿದ್ದೆವು ಎಂದು ಹೇಳಿದರು.
Advertisement
ನೆಹರೂ ಅವರ ಕಾಲದಿಂದ ದೊಡ್ಡ ಕೈಗಾರಿಕೆಗಳು ಆರಂಭವಾಗಿ ದೊಡ್ಡ ಮಟ್ಟಕ್ಕೆ ಬೆಳೆದಿವೆ. ದೇಶದ ದೊಡ್ಡ ಕಂಪನಿಗಳು ನಮ್ಮ ರಾಜ್ಯದ ನೀತಿಗಳು, ಸ್ನೇಹ ಸಂಬಂಧವನ್ನು ಮೆಚ್ಚಿ ನಮ್ಮ ರಾಜ್ಯಕ್ಕೆ ಬಂದಿದ್ದಾರೆ. ನಾವೆಲ್ಲರೂ ಒಟ್ಟಾಗಿ ಸೇರಿ ಭವಿಷ್ಯದತ್ತ ಹೆಜ್ಜೆ ಹಾಕೋಣ. ಈ ಸಮಾವೇಶದ ಮೂಲಕ ರಾಜ್ಯಕ್ಕೆ 10 ಲಕ್ಷ ಕೋಟಿ ರೂ. ಗುರಿ ಹೊಂದಿದೆ. ನಮ್ಮ ನೂತನ ಕೈಗಾರಿಕಾ ನೀತಿಯು ಬೆಂಗಳೂರಿನ ಹೊರತಾಗಿ ರಾಜ್ಯದ ಇತರ ಪ್ರದೇಶಗಳಲ್ಲಿ ಬಂಡವಾಳ ಹೂಡಿಕೆ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಅಂತ ಭರವಸೆ ನೀಡಿದರು.
Advertisement
ಸಚಿವ ಹೆಚ್.ಕೆ.ಪಾಟೀಲ್ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಪ್ರವಾಸೋದ್ಯಮ ನೀತಿ ಪ್ರಕಟಿಸಿದೆ. ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ನವೀನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ರಾಜ್ಯದಲ್ಲಿ 300 ಕಿ.ಮೀ ಕರಾವಳಿ ಪ್ರದೇಶವಿದ್ದು, ಈ ಭಾಗದಲ್ಲಿ ನಮ್ಮ ಐತಿಹಾಸಿಕ ಸ್ಥಳಗಳನ್ನು ಉಳಿಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ಕಾರ್ಯಕ್ರಮ ರೂಪಿಸಲಾಗುವುದು. ಕರ್ನಾಟಕ ರಾಜ್ಯ ಕೈಗಾರಿಕೆಗಳ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮ ರೂಪಿಸಿದೆ. ಈ ಸಮಾವೇಶ ನಮ್ಮ ರಾಜ್ಯ ಜಾಗತಿಕ ಮಟ್ಟದಲ್ಲಿ ವ್ಯಾಪಾರ ವ್ಯವಹಾರ ಮಾಡುವ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ನಾವು ದೇಶದ ಇತರೆ ನಗರಗಳ ಜತೆ ಸ್ಪರ್ಧೆ ಮಾಡುತ್ತಿಲ್ಲ. ಬದಲಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ. ಇದು ನಮ್ಮ ಸಾಮರ್ಥ್ಯ ಎಂದು ತಿಳಿಸಿದರು. ಇದನ್ನೂ ಓದಿ :ಬೆಂಗಳೂರು | 5 ಕೋಟಿ ವೆಚ್ಚದಲ್ಲಿ ಬೀದಿನಾಯಿಗಳಿಗೆ ವ್ಯಾಕ್ಸಿನ್ಗೆ ಬಿಬಿಎಂಪಿ ಪ್ಲ್ಯಾನ್!
ಈ ದೇಶದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆರಂಭಿಸಿದ್ದೆ ಎಸ್.ಎಂ ಕೃಷ್ಣ ಅವರ ಸರ್ಕಾರ ಕರ್ನಾಟಕದಲ್ಲಿ. ಈ ಸಮಾವೇಶ ಕೇವಲ ಆರಂಭವಷ್ಟೇ, ಇಲ್ಲಿಂದ ನಿಮಗೆ ಅವಕಾಶಗಳು ತೆರೆದುಕೊಳ್ಳಲು ಆರಂಭವಾಗುತ್ತವೆ. ವರ್ಷದ 365 ದಿನಗಳು ಕೂಡ ನಿಮಗಾಗಿ ನಾವು ಬಾಗಿಲು ತೆರೆದಿರುತ್ತೇವೆ. ನೀವು ಯಾವಾಗ ಬಂದರೂ ನಾವು ನಿಮಗೆ ಅಗತ್ಯ ನೆರವು ನೀಡಿ ನಿಮ್ಮ ಪ್ರಗತಿ, ಕರ್ನಾಟಕ ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ. ಎಂ.ಬಿ.ಪಾಟೀಲ್ ಅವರ ನೇತೃತ್ವದಲ್ಲಿ ಈ ಸಮಾವೇಶ ಯಶಸ್ವಿಯಾಗಿದ್ದು, ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ನಾನು ಅಭಿನಂದನೆ ಎಂದು ಕೃತಜ್ಞತೆ ಸಲ್ಲಿಸಿದರು.