ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ಶೋಷಿತರಿಗೆ 1 ಬಿರಿಯಾನಿ ಕೊಟ್ಟು ಮತಾಂತರ ಮಾಡಲಾಗ್ತಿದೆ ಎಂದು ಕೇಂದ್ರ ಸಚಿವ ಎ ನಾರಾಯಣಸ್ವಾಮಿ (A Narayanaswamy) ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ರದ್ದುಗೊಳಿಸುವ ವಿಚಾರವಾಗಿ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ ಅವರು, ಆಂಧ್ರಪ್ರದೇಶದಲ್ಲಿ 90% ರಷ್ಟು ಮತಾಂತರವಾಗಿದೆ. ತೆಲಂಗಾಣದಲ್ಲಿ ಅಶಕ್ತರು 30% ರಷ್ಟು ಮತಾಂತರವಾಗಿದ್ದಾರೆ. ಎಲ್ಲೆಡೆ ನನ್ನ ಮಾದಿಗ ಸಮಾಜದ ಜನರ ಮತಾಂತರ ನಡೆಯುತ್ತಿದೆ. ಚಿತ್ರದುರ್ಗದ ಸುತ್ತಮುತ್ತಲೂ ಕೇವಲ 1 ಬಿರಿಯಾನಿ ಕೊಟ್ಟು ಮತಾಂತರ ಮಾಡುತ್ತಿದ್ದು ಈ ಮೂಲಕ ಅವರ ಬಡತನವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಕಿಡಿಕಾರಿದರು.
ಶೋಷಿತರನ್ನೇ ಟಾರ್ಗೆಟ್ ಮಾಡಿ ಮತಾಂತರ ನಡೆಸಲಾಗುತ್ತಿದ್ದು, ಮತಾಂತರದಿಂದ ನಮ್ಮ ಐಡೆಂಟಿಟಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾವು ಬಲವಂತದ ಮತಾಂತರ ತಡೆಗೆ ಕಾನೂನು ರೂಪಿಸಿದ್ದೇವೆ. ಆದರೆ ಈ ಕಾಂಗ್ರೆಸ್ ಸರ್ಕಾರ ಅದರ ವಿರುದ್ಧ ಹೋಗುವುದಾದರೆ ಹೋಗಲಿ ಎಂದು ಆಕ್ರೋಶ ಹೊರಹಾಕಿದರು.
ಏಕರೂಪ ನಾಗರಿಕ ಸಂಹಿತೆಯನ್ನು ಮುಸ್ಲಿಮರು ಸಹ ಸ್ವಾಗತಿಸಿದ್ದಾರೆ. ಇದರಿಂದ ಸಂವಿಧಾನಕ್ಕೆ ಗೌರವ ಸಿಗುತ್ತದೆ ಎಂಬುದು ಅಂಬೇಡ್ಕರ್ ಅವರ ಅಪೇಕ್ಷೆಯಾಗಿತ್ತು ಅಂತ ಮತಾಂತರ ನಿಷೇಧ ರದ್ದು ಸರಿಯಲ್ಲ ಎಂದು ಪರೋಕ್ಷವಾಗಿ ಉದಾಹರಣೆ ಕೊಟ್ಟು ವಿವರಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಡಿಕೆಶಿಯನ್ನು ಮುಖ್ಯಮಂತ್ರಿಯಾಗಲು ಬಿಡಲ್ಲ: ಭಗವಂತ್ ಖೂಬಾ
ಇದೇ ವೇಳೆ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆಯೂ ಮಾತನಾಡಿದ ಸಚಿವರು, ಕಾಂಗ್ರೆಸ್ ‘ಗ್ಯಾರಂಟಿ’ ಮೂಲಕ ಅಧಿಕಾರಕ್ಕೆ ಬಂದಿದೆ. ಸಿದ್ಧಾಂತದ ಮೂಲಕ ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ. ಜನರಿಗೆ ಮಾತು ಕೊಟ್ಟಂತೆ ರಾಜ್ಯದ ಜನರಿಗೆ ಸರ್ಕಾರ ಅಕ್ಕಿ ನೀಡಬೇಕು. ಅಲ್ಲದೇ ಕೇಂದ್ರ ಅಕ್ಕಿ ಕೊಟ್ಟಿಲ್ಲ ಎಂದು ಹೇಳುವ ಅವರ ನಡೆ ಸರಿಯಲ್ಲ. ಕೇಂದ್ರ ಸರ್ಕಾರ ಅಲ್ಲಿನ ಅಕ್ಕಿ ಸ್ಟಾಕ್ ಹಾಗೂ ಉತ್ಪಾದನೆ ವರದಿ ಆಧರಿಸಿ ರಾಜ್ಯಗಳಿಗೆ ಅಕ್ಕಿ ನೀಡುತ್ತದೆ. ಆದರೆ ಈ ರಾಜ್ಯ ಸರ್ಕಾರದ ಬಳಿ ಯಾವ ರಿಪೋರ್ಟ್ ಇದೆಯೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರದ ಶಕ್ತಿ ಯೋಜನೆ ಬಗ್ಗೆ ರೆಡ್ ಬಸ್ ಎಂದು ವ್ಯಂಗ್ಯವಾಡಿದ್ದು, ಕೆಲವೆಡೆ ಮಕ್ಕಳು ಹಾಗೂ ತಾಯಂದಿರು ನೆಲಕ್ಕೆ ಬಿದ್ದಿದ್ದಾರೆ. ಬಸ್ ಚಾಲಕ, ನಿರ್ವಾಹಕರೊಂದಿಗೆ ಮಹಿಳೆಯರು ಜಗಳವಾಡುತ್ತಿದ್ದಾರೆ. ಸರ್ಕಾರಿ ಬಸ್ಗಳು ನಿಯಮ ಮೀರಿ ಸಂಚಾರ ಮಾಡುತ್ತಿದ್ದು, ಸಂಚರಿಸುವ ರಸ್ತೆಗಳ ಸ್ಥಿತಿ ಹೇಗಿದೆ, ಪುಣ್ಯ ಕ್ಷೇತ್ರಗಳ ವ್ಯವಸ್ಥೆ ಹೇಗಿದೆ ಎಂಬುದನ್ನು ಯಾರು ನೋಡಿಲ್ಲ. ಸಾರಿಗೆ ಚಾಲಕ, ನಿರ್ವಾಹಕರಿಗೆ ಯಾವುದೇ ಭದ್ರತೆ ಇಲ್ಲ. ಜೊತೆಗೆ ಸಾರಿಗೆ ಬಸ್ಗಳ ಪರಿಸ್ಥಿತಿ ಹೇಗಿದೆ ಪರಿಶೀಲಿಸಿಲ್ಲ ಎಂದು ಕಿಡಿಕಾರಿದರು.
ರಾಜ್ಯದ ಜನರ ಮುಂದಿನ ಭವಿಷ್ಯದ ಗತಿ ಏನೆಂಬುದರ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು. ಅದನ್ನು ಬಿಟ್ಟು ಕೇಂದ್ರದ ಬಗ್ಗೆ ಪದೇ ಪದೇ ಮಾತನಾಡುವ ಕಾಂಗ್ರೆಸ್ ಸರ್ಕಾರ 75 ವರ್ಷ ದೇಶದಲ್ಲಿ ಆಡಳಿತ ನಡೆಸಿದರೂ ಬಡವರು ಬಡವರಾಗಿಯೇ ಮತ್ಯಾಕೆ ಉಳಿದಿದ್ದಾರೆ? ಎಂದು ಕೈ ನಾಯಕರ ವಿರುದ್ಧ ನಾರಾಯಣಸ್ವಾಮಿ ಗುಡುಗಿದರು. ಈ ವೇಳೆ ಬಿಜೆಪಿ ಮುಖಂಡರು, ಇತರರು ಇದ್ದರು. ಇದನ್ನೂ ಓದಿ: ಎನ್ಸಿಸಿಎಫ್, ನಾಫೆಡ್, ಕೇಂದ್ರೀಯ ಭಂಡಾರಗಳಿಂದ ಅಕ್ಕಿ ಪಡೆಯಲು ಕ್ರಮ: ಸಿದ್ದರಾಮಯ್ಯ