ಬೆಂಗಳೂರು: ಯಾರೇ ಆದರೂ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡಿ, ಕುರ್ಚಿ ಆಸೆಗಾಗಿ ಕೆಲಸ ಮಾಡಬೇಡಿ ಎಂದು ನೂತನ ಎಐಸಿಸಿ ಅಧ್ಯಕ್ಷ (AICC President) ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕರೆ ನೀಡಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ (Bangaluru Palace Ground) ಆಯೋಜಿಸಿದ್ದ ಕಾಂಗ್ರೆಸ್ (Congress) `ಸರ್ವೋದಯ ಸಮಾವೇಶ’ದಲ್ಲಿ ಮಾತನಾಡಿದ ಅವರು, ಪಕ್ಷ ಸಿದ್ಧಾಂತ ನಂಬಿದವರು ಎಂದಿಗೂ ಪಕ್ಷ ಬಿಡಲ್ಲ. ಹಾಗಾಗಿ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡಿ ಎಂದರು. ಇದನ್ನೂ ಓದಿ: ಸೋನಿಯಾ, ಮನಮೋಹನ್ ಸಿಂಗ್ ಅವಧಿಯಲ್ಲಿ 12 ಲಕ್ಷ ಕೋಟಿ ಭ್ರಷ್ಟಾಚಾರ – ಶಾ ಕಿಡಿ
ಕೆಟ್ಟ ಸರ್ಕಾರಗಳನ್ನ ಕಿತ್ತೊಗೆಯಿರಿ: ಪ್ರಧಾನಿ ಮೋದಿ (Narendra Modi) ನಮ್ಮನ್ನು ಕೇಳ್ತಾರೆ 70 ವರ್ಷದಲ್ಲಿ ಏನು ಮಾಡಿದ್ರಿ ಅಂತಾ, ನಾವು ಏನು ಮಾಡದೇ ಹೋಗಿದ್ರೆ ದೇಶ ಉಳಿಯುತ್ತಿರಲಿಲ್ಲ. ಕಾಂಗ್ರೆಸ್ ಈ ದೇಶಕ್ಕೆ ಬುನಾದಿ ಹಾಕಿಕೊಟ್ಟಿದೆ. ಅಂಬೇಡ್ಕರ್ ಸಂವಿಧಾನ ಉಳಿದರೆ ದೇಶ ಉಳಿಯುತ್ತೆ, ಸಂವಿಧಾನ ಇದ್ರೆ ಮಾತ್ರ ಮೋದಿ, ಅಮಿತ್ ಶಾ (Amit Shah) ಉಳಿತಾರೆ. ಹಾಗಾಗಿ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ದೇಶ ಉಳಿಯಬೇಕು. ಅದಕ್ಕಾಗಿ ಜನರನ್ನು ಒಗ್ಗೂಡಿಸಿ ಹೋರಾಟ ಮಾಡಿ. ಇರುವ ಕೆಟ್ಟ ಸರ್ಕಾರಗಳನ್ನ ಕಿತ್ತೊಗೆಯಿರಿ ಎಂದು ಗುಡುಗಿದರು.
ಇವತ್ತು ಮಾತನಾಡುವ ನಾಯಕರು ಮೋದಿ ಅವರ ಶಾಲೆಯಲ್ಲಿ ಕಲಿತಿದ್ದಾರಾ? ಕಾಂಗ್ರೆಸ್ ನಿರ್ಮಿಸಿದ ಶಾಲೆಯಲ್ಲಿ ಕಲಿತು ಮಾತನಾಡುತ್ತಿದ್ದಾರೆ. ಇಂದಿರಾಗಾಂಧಿ ಹೋರಾಟ ಮಾಡದೇ ಇದ್ದಿದ್ದರೇ ಬಾಂಗ್ಲಾದೇಶ ಇರುತ್ತಿರಲಿಲ್ಲ. ಹಾಗೆಯೇ ವಿದೇಶಾಂಗ ನೀತಿ ರೂಪಿಸಿದ್ದು ನೆಹರು. ಪದೆ-ಪದೇ ನೆಹರು, ಇಂದಿರಾಗಾಂಧಿ, ಸೋನಿಯಾ (Sonia Gandhi) ಬೈಯ್ಯವುದು ಬಿಡಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಆಧಾರ್ ಇರುವ ಪ್ರತಿಯೊಬ್ಬರು ಟ್ವಿಟ್ಟರ್ ಬ್ಲೂಟಿಕ್ ಖಾತೆ ಪಡೆಯಬೇಕು – ಮಸ್ಕ್ ನಿರ್ಧಾರಕ್ಕೆ ಕಂಗನಾ ಬೆಂಬಲ
ನಮ್ಮ ಪಕ್ಷದ ಚಿಂತೆ ನಿಮಗ್ಯಾಕಪ್ಪ? ನಮ್ಮ ಪಕ್ಷಕ್ಕೆ ಅವ್ವ ಮಕ್ಕಳ ಪಾರ್ಟಿ ಅಂತಾ ಈ ಶಾ ಕರಿತಾರೆ, ಈ ಚುನಾವಣೆಯಲ್ಲಿ ಗಾಂಧಿ ಕುಟುಂಬದವರು ಸ್ಪರ್ಧೆ ಮಾಡಿಲ್ಲ. ಆದರೂ ಶಾ ಮಾತನಾಡೋದನ್ನ ಬಿಡಲ್ಲ. ಅರೆ, ನಮ್ಮ ಪಾರ್ಟಿ ಚಿಂತೆ ನಿಮಗ್ಯಾಕಪ್ಪ? ನಮ್ಮ ಪಾರ್ಟಿ ಚಿಂತಿ ನಮಗ ಬಿಡ್ರಿ, ನಿಮಗ್ಯಾಕೆ? ಎಂದು ಅಮಿತ್ ಶಾಗೆ ಟಾಂಗ್ ನೀಡಿದರು.
ಮೊದಲು ಪಕ್ಷ ಸಂಘಟನೆ ಮಾಡಿದ್ವಿ: ಸ್ವಯಂ ಶಕ್ತಿಯಿಂದ ಮುಂದೆ ಬಂದ್ರೆ ಎಲ್ಲರೂ ಗುರುತಿಸ್ತಾರೆ. ಕಾಂಗ್ರೆಸ್ ಇಬ್ಬಾಗ ಆದಾಗ ಕಲಬುರಗಿಯಲ್ಲಿ ಅಧ್ಯಕ್ಷ ಇರಲಿಲ್ಲ. ನಾನು ವಕೀಲನಾಗಿ ವೃತ್ತಿ ಆರಂಭ ಮಾಡಿದ್ದೆ. ಆಗ ಕಾಂಗ್ರೆಸ್ ನಾಯಕರ ಸಂಪರ್ಕ ಬೆಳೆಯಿತು. ನಂತರ ಅಧ್ಯಕ್ಷರಾಗಿ ಅಂತ ನಾಯಕರು ಕೇಳಿಕೊಂಡ್ರು, ಇಂದಿರಾಗಾಂಧಿ ಮಾತ್ರ ಅಧಿಕಾರಕ್ಕೆ ಬರ್ತಾರೆ, ಮುಂದೆ ನೀವೂ ಅಧಿಕಾರಕ್ಕೆ ಬರಬೇಕು ಅಂತಾ ಪ್ರೋತ್ಸಾಹ ನೀಡಿದ್ರು. ಆಗ 35 ವರ್ಷದೊಳಗಿನ ಯುವಕರೇ ಸೇರಿ ಪಕ್ಷ ಸಂಘಟನೆ ಮಾಡಿದ್ವಿ ಎಂದು ಹೇಳಿದರು.
ಪಕ್ಷ ಸೇರಿದ ಕೂಡ್ಲೆ ಅಧಿಕಾರ ಬೇಕು ಅಂತಾರೆ: ಪಕ್ಷ ಸಂಘಟನೆ ಮಾಡಿದ ಬಳಿಕ ನನಗೆ ಎಂಎಲ್ಎ ಟಿಕೆಟ್ ನೀಡಿದ್ರು, ನಾನು ಗೆದ್ದು ಬಂದೆ. ಇವತ್ತು ಸೋನಿಯಾ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಒಂದೆ ದಿನಕ್ಕೆ ನಾನು ಅಧ್ಯಕ್ಷ ಆಗಿಲ್ಲ. ಹಂತ ಹಂತವಾಗಿ ಬೆಳೆದು ಅಧ್ಯಕ್ಷನಾಗಿದ್ದೇನೆ. ಆದರೀಗ ಈಗ ಪಕ್ಷ ಸೇರಿದ ತಕ್ಷಣ ಅಧಿಕಾರ ಬೇಕು ಅಂತಾರೆ. ಗುರಿ ಇಟ್ಟು ಕೆಲಸ ಮಾಡಿದರೆ ಮಾತ್ರ ಮುಂದೆ ಬರ್ತೀರಾ ಎಂದು ಯುವಕರಿಗೆ, ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಕಿವಿಮಾತು ಹೇಳಿದರು.