ದಾವಣಗೆರೆ: ಸರ್ಕಾರಿ ಅಸ್ಪತ್ರೆಯ ಆಡಳಿತಧಿಕಾರಿಗೆ ಶಾಸಕರ ಬೆಂಬಲಿಗ ಅವಾಜ್ ಹಾಕಿರುವ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿ ನಡೆದಿದೆ.
ಜಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರೋ ಮಟನ್ ಓಬಣ್ಣ ಅವಾಜ್ ಹಾಕಿದ ವ್ಯಕ್ತಿಯಾಗಿದ್ದು, ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿಗೆ ಬಾಯಿಗೆ ಬಂದ ಹಾಗೆ ಬೈದಿದ್ದಾನೆ. ಅರ್ಹತೆ ಇಲ್ಲದೆ ಇದ್ದರೂ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಪೋಸ್ಟ್ ತನ್ನ ತಮ್ಮ ಡೆಂಟಿಸ್ಟ್ ಆಗಿರುವ ಪ್ರಸನ್ನನಿಗೆ ಬಿಟ್ಟುಕೊಡುವಂತೆ ಡಾ. ಮುರಳಿಗೆ ಪದೇ ಪದೇ ಟಾರ್ಚರ್ ಕೊಡುತ್ತಿದ್ದ.
ಅಲ್ಲದೇ ಫೋನ್ಕಾಲ್ ಮಾಡಿ ಸಹ ಅವಾಜ್ ಹಾಕಿದ್ದಾನೆ. ಇದರ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇನ್ನು ಮಟನ್ ಓಬಣ್ಣ ಜಗಳೂರಿನ ಕಾಂಗ್ರೆಸ್ ಶಾಸಕ ರಾಜೇಶ್ ಅವರ ಸಂಬಂಧಿಯಾಗಿದ್ದು ತನ್ನ ದರ್ಪವನ್ನು ಅಧಿಕಾರಿಗಳ ಮೇಲೆ ತೋರಿಸುತ್ತಿದ್ದಾನೆ.
ಮೊದಲು ಕುರಿ, ಮಟನ್ ವ್ಯಾಪಾರ ಮಾಡುತ್ತಿದ್ದ ಒಬಣ್ಣ ನಂತರ ರಿಯಲ್ ಎಸ್ಟೇಟ್ ದಂಧೆಗೆ ಇಳಿದು ಅಷ್ಟೋ ಇಷ್ಟೋ ದುಡ್ಡು ಮಾಡಿಕೊಂಡು ಶಾಸಕ ರಾಜೇಶ್ಗೆ ಹತ್ತಿರವಾಗಿದ್ದಾನೆ. ಅಷ್ಟೇ ಅಲ್ಲದೆ ಅಸ್ಪತ್ರೆ ಅಡಳಿತ ಅಧಿಕಾರಿ ಮುರಳಿಗೆ ನಾನು ಎಂಎಲ್ಎ ಕೈಯಿಂದ ನಾಳೆ ಲೆಟರ್ ತರುತ್ತೀನಿ. ಸೀಟು ಬಿಟ್ಟುಕೊಡು, ಎಂಎಲ್ಎ ನನ್ನ ಅಳಿಯ. ಅವನು ನಾನು ಹೇಳಿದ ಹಾಗೇ ಕೇಳುತ್ತಾನೆ. ಮೊದಲು ನಾನು ಯಾರು, ನನ್ನ ಹೆಸರು, ನನ್ನ ಬ್ಯಾಗ್ರೌಂಡ್ ತಿಳ್ಕೋ ಎಂದು ಪಕ್ಕಾ ಸಿನಿಮಾ ಸ್ಟೈಲ್ ನಲ್ಲಿ ಅವಾಜ್ ಹಾಕಿದ್ದಾನೆ.