ಬೆಂಗಳೂರು: ಬಿಬಿಎಂಪಿ ಸೇರಿ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಾದಿಗ ಸಮುದಾಯದ ಅಭ್ಯರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅವಕಾಶ ಕಲ್ಪಿಸುವಂತೆ ಮತ್ತು ಟಿಕೆಟ್ ಪಡೆದವರಿಗೆ ಗೆಲ್ಲಿಸಲು ಎಲ್ಲರೂ ಶ್ರಮ ವಹಿಸಬೇಕು ಎಂದು ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ ತಿಳಿಸಿದರು.
ಜಾಂಬವ ಜಾಗೃತಿ ವೇದಿಕೆ ಆಯೋಜಿಸಿದ್ದ ‘ಮಾದಿಗ ಸಮುದಾಯದ ಮುಂದಿನ ರಾಜಕೀಯ ನಡೆ’ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ಬಿಬಿಎಂಪಿ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಸಮುದಾಯದವರು ಹೆಚ್ಚಾಗಿ ಸ್ಪರ್ಧಿಸಬೇಕು. ಅದಕ್ಕೆ ಅಗತ್ಯ ಇರುವ ಅವಕಾಶಗಳನ್ನು ಎಲ್ಲರೂ ಸೇರಿ ಕೊಡಿಸಬೇಕು. ಆಯಾ ಕ್ಷೇತ್ರದ ಶಾಸಕರು ಮತ್ತು ಎಲ್ಲಾ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ಗೆಲ್ಲಿಸಲು ಮುಂದಾಗಬೇಕು ಎಂದು ಹೇಳಿದರು.
ಮಾಜಿ ಸಚಿವರು, ವಿಧಾನ ಪರಿಷತ್ತಿನ ಸದಸ್ಯ ಆರ್.ಬಿ. ತಿಮ್ಮಾಪುರ, ರಾಜಕೀಯ ಅಧಿಕಾರ ಪಡೆದುಕೊಳ್ಳಲು ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದರು. ಇದನ್ನೂ ಓದಿ: ಡೆಲ್ಲಿ To ಲಂಡನ್ ಬಸ್ ಟೂರ್ – 70 ದಿನಗಳಲ್ಲಿ 18 ದೇಶ ಸುತ್ತುವ ಅವಕಾಶ
ಹೆಚ್ಚು ಜನಸಂಖ್ಯೆಯಿರುವ ಸಮುದಾಯಗಳಲ್ಲಿ ಒಂದಾಗಿರುವ ಮಾದಿಗ ಸಮುದಾಯ ರಾಜಕೀಯ, ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಅವಕಾಶ ವಂಚಿತವಾಗಿದೆ. ಅವಕಾಶ ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕಿದ್ದ ರಾಜಕೀಯ ಪಕ್ಷಗಳು ಅವಕಾಶ ನೀಡದೇ ವಂಚಿಸುತ್ತಲೇ ಬಂದಿವೆ. ಹಾಗಾಗಿ ಈ ಅನ್ಯಾಯದ ವಿರುದ್ಧ ಹೋರಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ ಮುಂಬರುವ ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಾದಿಗ ಸಮುದಾಯ ಅರ್ಹ ಹಾಗೂ ಸಮರ್ಥ ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷಗಳು ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಜಾಂಬವ ಜಾಗೃತಿ ವೇದಿಕೆಯು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಇದೇ ವೇಳೆ ನೂತನ ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ರವರನ್ನು ಜಾಂಬವ ಜಾಗೃತಿ ವೇದಿಕೆಯ ಸದಸ್ಯರು ಸನ್ಮಾನಿಸಿ ಗೌರವಿಸಿದರು. ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತರಾಗಿರುವ ಬೆಂಗಳೂರು ಮಹಾನಗರ ವ್ಯಾಪ್ತಿಯ ಹೆಚ್ಚಿನ ಮುಖಂಡರು ಭಾಗವಹಿಸಿದ್ದರು. ಇದನ್ನೂ ಓದಿ: 290 ಗ್ರಾಂ ತೂಕದ ಸ್ಟ್ರಾಬೆರಿ ಬೆಳೆದು ವಿಶ್ವ ದಾಖಲೆ
ವಿಧಾನಪರಿಷತ್ತಿನ ಮಾಜಿ ಸದಸ್ಯ ಆರ್.ಧರ್ಮಸೇನಾ, ಅಸಂಘಟಿತ ಕಾರ್ಮಿಕರ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಮಾಜಿ ಐಎಎಸ್ ಅಧಿಕಾರಿ ಬಲದೇವಕೃಷ್ಣ, ವೇದಿಕೆ ಅಧ್ಯಕ್ಷ ಎನ್.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಆರ್.ಅಶೋಕ್, ಕಾರ್ಯದರ್ಶಿ ರ. ನರಸಿಂಹಮೂರ್ತಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ತಂದೆ, ಚಿಕ್ಕಪ್ಪನೊಂದಿಗೆ ಅಖಿಲೇಶ್ ಯಾದವ್ ಭರ್ಜರಿ ಚುನಾವಣಾ ಪ್ರಚಾರ