ತಿರುವನಂತಪುರ: ಹೆಣ್ಣು ಮಗು ಹುಟ್ಟಿದ್ರೆ ಸಾಕು ಶಾಪ ಹಾಕುವ ಅಥವಾ ಹೆಣ್ಣು ಭ್ರೂಣವನ್ನು ಕಸದ ಬುಟ್ಟಿಗೆ ಎಸೆಯೋ ಅನೇಕ ಘಟನೆಗಳು ಪ್ರತಿನಿತ್ಯ ನಡೆಯುತ್ತವೆ. ಅಂತದ್ದರಲ್ಲಿ ಕೇರಳದ ವ್ಯಕ್ತಿಯೊಬ್ಬರು ಹೆಣ್ಣು ಮಗು ಹುಟ್ಟಿದ್ರೆ ಚಿನ್ನ ನೀಡೋ ಮೂಲಕ ರಕ್ಷಣೆಗೆ ನಿಂತಿದ್ದಾರೆ.
ಹೌದು. ಕೇರಳದ ಮುಸ್ಲಿಂ ಪ್ರಾಬಲ್ಯವಿರುವ ಜಿಲ್ಲೆಯಲ್ಲಿ ಹೆಣ್ಣು ಮಗು ಹುಟ್ಟಿದ ಸಂತಸದ ಜೊತೆಗೆ ಮಗುವಿನ ಕುಟುಂಬಕ್ಕೆ ಈ ಉಡುಗೊರೆಯನ್ನು ನೀಡುತ್ತಾರೆ. ಮಲಪ್ಪುರಂ ಜಿಲ್ಲೆಯ ಪುಸಭೆ ಕೌನ್ಸಿಲರ್ 38 ವರ್ಷ ವಯಸ್ಸಿನ ಅಬ್ದುಲ್ ರಹೀಮ್ ಎಂಬವರೇ ಈ ಮಹಾನ್ ಕಾರ್ಯ ಮಾಡುತ್ತಿರೋ ವ್ಯಕ್ತಿಯಾಗಿದ್ದಾರೆ. ಇವರು ತನ್ನ ವಾರ್ಡ್ ನಲ್ಲಿ ಯಾವುದೇ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ರೆ ಅದರ ಸಂಭ್ರಮಾಚರಣೆಯ ಜೊತೆಗೆ ಆ ಕುಟುಂಬಕ್ಕೆ ಒಂದು ಗ್ರಾಂ ಚಿನ್ನ ನೀಡುತ್ತಿದ್ದಾರೆ. ರಹೀಮ್ ಅವರು ಈ ಕೆಲಸವನ್ನು ಕಳೆದ 2 ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ.
`ಹುಟ್ಟಿದ ಮಗು ಹೆಣ್ಣಾದ್ರೆ ಕೆಲ ಕುಟುಂಬಗಳು ಶಪಿಸುವುದನ್ನು ನಾನು ನೋಡಿದ್ದೇನೆ. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು. ಯಾಕಂದ್ರೆ ಹೆಣ್ಣು ಮಗು ಮನೆಗೆ ಸಂಪತ್ತನ್ನು ತರುತ್ತಾಳೆ. ಹೆಚ್ಚಿನ ಜನರಿಗೆ ಈ ವಿಚಾರ ತಿಳಿದಿಲ್ಲ. ಹೆಣ್ಣು ಇಲ್ಲದಿದ್ದಲ್ಲಿ ಈ ಜಗತ್ತನ್ನು ಕಲ್ಪನೆ ಮಾಡಲು ಸಾಧ್ಯವೇ ಅಂತ 4 ವರ್ಷದ ಮಗುವಿನ ತಂದೆಯಾಗಿರೋ ಅಬ್ದುಲ್ ರಹೀಮ್ ಪ್ರಶ್ನಿಸಿದ್ದಾರೆ.
ರಹೀಮ್ ಅವರು ಇಲ್ಲಿಯವರೆಗೆ ಸುಮಾರು 16 ಹೆಣ್ಣು ಮಗುವಿನ ತಾಯಂದಿರಿಗೆ ಈ ಉಡುಗೊರೆಯನ್ನು ನೀಡಿದ್ದಾರೆ. ಅಲ್ಲದೇ ಈ ಚಿನ್ನದ ನಾಣ್ಯದ ಪ್ರಮಾಣವನ್ನು ಎರಡಷ್ಟು ಹೆಚ್ಚಿಸಲು ಚಿಂತಿಸಿದ್ದಾರೆ. ಹುಟ್ಟಿದ ಮಗು ಹೆಣ್ಣಾದ್ರೆ ಸಾಕು ಆಸ್ಪತ್ರೆಯಿಂದಲೇ ರಹೀಮಾನ್ ಅವರಿಗೆ ಕರೆ ಬರುತ್ತದೆ. ಕೂಡಲೇ ಅವರು ಆಸ್ಪತ್ರೆಗೆ ತೆರಳಿ ಅವರು ಚಿನ್ನದ ನಾಣ್ಯವನ್ನು ನೀಡಿ ಗಿಫ್ಟ್ ನೀಡುತ್ತಾರೆ.
ಮಹಿಳೆಗೆ ಹೆಣ್ಣು ಮಗು ಹುಟ್ಟಿದ ವಿಚಾರವನ್ನು ನಮಗೂ ತಿಳಿಸಿ, ನಾವು ಕೂಡ ಚಿನ್ನ ಕೊಡುತ್ತೇವೆ ಎಂದು ಕೊಟ್ಟಕ್ಕಲ್ ನ ಪ್ರಮುಖ ಆಭರಣ ಮಳಿಗೆಗಳು ರಹೀಮ್ ಅವರೆ ಮುಂದೆ ಆಫರ್ ಪ್ರಸ್ತಾಪಿಸಿದ್ದವು. ಆದ್ರೆ ರಹೀಮಾನ್ ಮಳಿಗೆಗಳ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ. ನಾನು ಯಾವುದೇ ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿಲ್ಲ ಅಂತ ಹೇಳಿದ್ದಾರೆ.
ಪುರಸಭೆ ಕೌನ್ಸಿಲರ್ ಆಗಿರೋ ನನಗೆ ತಿಂಗಳಿಗೆ 8 ಸಾವಿರದಿಂದ 10 ಸಾವಿರ ಸಂಬಳ ಬರುತ್ತದೆ. ಒಂದು ಗ್ರಾಂ ನಾಣ್ಯಕ್ಕೆ 2500 ರೂ. ವೆಚ್ಚವಾಗುತ್ತದೆ. ನನ್ನ ಸಂಬಳದ ಸಣ್ಣ ಮೊತ್ತವನ್ನು ಇದಕ್ಕಾಗಿ ನಾನು ಖರ್ಚ ಮಾಡಬಲ್ಲೆ ಎಂದು ರಹೀಮ್ ಹೇಳಿದ್ದಾರೆ.
ದೇಶದ ಇತರ ಭಾಗಗಳಿಗಿಂತ ಕೇರಳದಲ್ಲಿ 1000 ಪುರುಷರಿಗೆ 1084 ಮಹಿಳೆಯರಿದ್ದಾರೆ. ಆದರೆ ಜನನ ದರ ಇಳಿಕೆಯಾಗುತ್ತಿದ್ದು, ಲಿಂಗಾನುಪಾತ ಇಳಿಕೆಯಾಗುವ ಸಾಧ್ಯತೆಯಿದೆ.