– ಮೆಡಿಕಲ್ ವಿದ್ಯಾರ್ಥಿಗಳಿಂದ ಚಿಕಿತ್ಸೆ ಕೊಡಿಸಿದ್ದಾರೆಂದು ಪೋಷಕರ ಆರೋಪ
ಮಂಡ್ಯ: ಪೊಲೀಸರ ನಿರ್ಲಕ್ಷ್ಯದಿಂದ ಮೂರುವರೆ ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಇದೀಗ ವೈದ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕಿ ಸಾವನ್ನಪ್ಪಿದೆ ಎಂಬ ಆರೋಪ ಮಂಡ್ಯದಲ್ಲಿ ಕೇಳಿಬಂದಿದೆ. ಮಿಮ್ಸ್ ವೈದ್ಯರ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರ ಜೊತೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ.
ಹೌದು. ಮಳವಳ್ಳಿಯ ನೆಲ್ಲೂರು ಗ್ರಾಮದ ನಿಂಗರಾಜು ಮತ್ತು ರಂಜಿತಾ ದಂಪತಿಗಳ ಪುತ್ರಿ ಸಾನ್ವಿ. ಮೇ 29 ರಂದು ಮನೆಯಲ್ಲಿ ಟೈಲ್ಸ್ ಬಾಲಕಿಯ ಪಾದದ ಮೇಲೆ ಬಿದ್ದಿದೆ. ಈ ವೇಳೆ ಬಾಲಕಿಯ ಕಾಲು ಮುರಿತವಾಗಿದೆ. ಇದರಿಂದ ಉತ್ತಮ ಚಿಕಿತ್ಸೆ ಸಿಗುತ್ತೆ ಅನ್ನುವ ನಿರೀಕ್ಷೆ ಇಟ್ಟುಕೊಂಡು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮೂಳೆ ಸರಿಯಾಗಬೇಕು ಅಂದ್ರೆ ಕೂಡಲೇ ಆಪರೇಷನ್ ಮಾಡಬೇಕು ಅಂತ ವೈದ್ಯರು ಸಲಹೆ ನೀಡಿದ್ದಾರೆ. ಅದರಂತೆ ಸಾನ್ವಿಗೆ 29ರ ರಾತ್ರಿಯೆ ಬಾಲಕಿಗೆ ಆಪರೇಷನ್ ಮಾಡಿದ್ದಾರೆ. ಆಪರೇಷನ್ ಆದ ನಂತರ ಬಾಲಕಿ ಚೇತರಿಸಿಕೊಂಡಿದ್ದು, ಪೋಷಕರ ಜೊತೆಯು ಮಾತನಾಡಿದ್ದಾಳೆ. ತಾನು ಬೇಗ ಚೇತರಿಸಿಕೊಳ್ಳುವುದಾಗಿ ಪೋಷಕರು ಧೈರ್ಯ ಹೇಳಿದ್ದಾರೆ. ಆದ್ರೆ ನಿನ್ನೆ ರಾತ್ರಿ ಬಾಲಕಿ ಮೃತ ಪಟ್ಟಿದ್ದಾಳೆ. ಇದನ್ನೂ ಓದಿ: ಮಂಡ್ಯದಲ್ಲಿ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕಿ ಸಾವು ಆರೋಪ – ಮಿಮ್ಸ್ ವೈದ್ಯರ ವಿರುದ್ಧ ಕುಟುಂಬ ಆಕ್ರೋಶ
ಭುಗಿಲೆದ್ದ ಪ್ರತಿಭಟನೆ
ಸದ್ಯ ಬಾಲಕಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೆ ಕಾರಣ ಅಂತ ಇದೀಗ ಪೊಲೀಸರು ಆರೋಪಿಸಿ ಪೋಷಕರು ಮಿಮ್ಸ್ ವಿರುದ್ಧ ಪ್ರತಿಭಟನೆಗಿಳಿದಿದ್ದಾರೆ. ಪೋಷಕರ ಈ ಪ್ರತಿಭಟನೆಗೆ ಹಲವು ಸಂಘಟನೆಗಳು ಸಾಥ್ ನೀಡಿದ್ದು, ವೈದ್ಯರ ನಿರ್ಲಕ್ಷ್ಯದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಾಲಕಿಗೆ ಆಪರೇಷನ್ ಆದ ನಂತರ ಸರಿಯಾದ ಶುಶ್ರೂಷೆ ಮಾಡಿಲ್ಲ. ವೈದ್ಯರ ಬದಲಾಗಿ ವೈದ್ಯಕೀಯ ವಿದ್ಯಾರ್ಥಿಗಳು ಚಿಕಿತ್ಸೆ ನೀಡಿದ್ದು ಈ ಘಟನೆಗೆ ಕಾರಣ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಅಷ್ಟೆ ಅಲ್ಲದೇ ಮಗು ಸಾವನಪ್ಪಿದ್ರೆ ಪೋಷಕರಿಗೆ ಮೊದಲು ವಿಚಾರ ತಿಳಿಸಬೇಕಾಗಿತ್ತು. ಆದರೆ ಅದರ ಬದಲು ಪೊಲೀಸರಿಗೆ ವಿಚಾರ ತಿಳಿಸಿ ನಂತರ ಪೋಷಕರಿಗೆ ತಿಳಿಸಿದ್ದಾರೆ ಅಂತ ಆರೋಪಿಸಿದ್ದಾರೆ.
ಪೋಷಕರ ಈ ಆರೋಪ ತಳ್ಳಿಹಾಕಿರುವ ವೈದ್ಯರು, ಮೊದಲು ಪರೀಕ್ಷೆ ಮಾಡಿದ ನಂತರ ಆಪರೇಷನ್ ಮಾಡಲಾಗಿದೆ. ಆದ್ರೆ ಅಪರೇಷನ್ ನಂತರ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ. ಈ ವೇಳೆ ರಕ್ತ ಪರೀಕ್ಷೆ ಮಾಡಿದಾಗ ಮಗುವಿನ ಪ್ಲೇಟ್ ಲೇಟ್ ಕಡಿಮೆಯಾಗಿತ್ತು, ಜೊತೆಗೆ ಇನ್ಫೆಕ್ಷನ್ ಆಗಿರುವುದು ಗೊತ್ತಾಗಿದೆ. ಇಲ್ಲಿ ವೈದ್ಯರು ಯಾವುದೇ ನಿರ್ಲಕ್ಷ್ಯ ಮಾಡಿಲ್ಲ ಅಂತ ವೈದ್ಯಧಿಕಾರಿಗಳು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ನಾಲ್ಕೇ ದಿನಕ್ಕೆ KRSನಲ್ಲಿ 11 ಅಡಿ ನೀರು ಹೆಚ್ಚಳ – ಹಲವು ವರ್ಷಗಳ ಬಳಿಕ ಮೇ ತಿಂಗಳಲ್ಲೇ 100 ಅಡಿ ಭರ್ತಿ!
ಮೃತದೇಹ ಮೈಸೂರಿಗೆ ರವಾನೆ
ಮಿಮ್ಸ್ ವೈದ್ಯರ ವಿರುದ್ಧ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರತಿಭಟನಕಾರರ ಜೊತೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಮರಣೋತ್ತರ ಪರೀಕ್ಷೆಗೆ ಬಾಲಕಿ ಮೃತ ದೇಹ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ವೈದ್ಯರ ನಿರ್ಲಕ್ಷ್ಯದ ಬಗ್ಗೆ ವೈದ್ಯರ ತಂಡವನ್ನೇ ನೇಮಿಸಿ ತನಿಖೆ ಮಾಡಲಾಗುತ್ತೆ. ಯಾವೆಲ್ಲ ವೈದ್ಯರು ಚಿಕಿತ್ಸೆ ಮಾಡಿದ್ರು? ಚಿಕಿತ್ಸೆಗೆ ಏನೆಲ್ಲಾ ಔಷಧಿ ನೀಡಲಾಗಿದೆ? ಸಾವಿಗೆ ಕಾರಣ ಏನು ಅನ್ನುವುದರ ಬಗ್ಗೆ ತನಿಖೆ ಮಾಡಲಾಗುತ್ತೆ? ಮರಣೋತ್ತರ ಪರೀಕ್ಷೆ ಜೊತೆ ಸ್ಯಾಂಪಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗುವುದು. ಮಿಮ್ಸ್ ಆಸ್ಪತ್ರೆಯಲ್ಲಿ ಸಾವನಪ್ಪಿರುವ ಕಾರಣ ಕೆ.ಆರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗುತ್ತೆ. ಅದಕ್ಕಾಗಿ ಮೃತದೇಹವನ್ನ ಮೈಸೂರಿಗೆ ರವಾನೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಂಡ್ಯ ಬಾಲಕಿ ಸಾವು ಕೇಸ್ | ಎಚ್ಚೆತ್ತ ಬೆಂಗಳೂರು ಪೊಲೀಸರಿಂದ ಹೊಸ ಎಸ್ಒಪಿ ಜಾರಿ