ಚಿಕ್ಕಬಳ್ಳಾಪುರ: ನೊಂದ ಬಾಲಕಿಯರು, ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಯರಿಗೆ ಆತ್ಮಸ್ಥೈರ್ಯ ತುಂಬಿ ಅವರ ಬಾಳಿಗೆ ಬೆಳಕಾಗಬೇಕಾದ ಸರ್ಕಾರಿ ಬಾಲಕಿಯರ ಮಂದಿರದ ಅಧೀಕ್ಷಕಿಯೇ ಅವರ ಪಾಲಿಗೆ ವಿಲನ್ ಆಗಿದ್ದಾರೆ. ಬಾಲಕಿಯರ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಎಸಗಿದ್ದ, ಅಧೀಕ್ಷಕಿ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಅಂದಹಾಗೆ ಚಿಕ್ಕಬಳ್ಳಾಪುರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀನದಲ್ಲಿ ಸರ್ಕಾರಿ ಬಾಲಕಿಯರ ಮಂದಿರವೊಂದಿದೆ. ಚಿಕ್ಕಬಳ್ಳಾಪುರ ನಗರದ .ಬಿಬಿ ರಸ್ತೆಯಲ್ಲಿ ಮಂದಿರ ಇದೆ. ಇದೆ ಬಾಲಕಿಯರ ಮಂದಿರ ಈಗ ಬಾಲಕಿಯರಿಗೆ ನರಕವಾಗಿದೆ. ಬಾಲಮಂದಿರಕ್ಕೆ ಬರುವ ನೊಂದ ಬಾಲಕಿಯರಿಗೆ ಧೈರ್ಯ ಹೇಳುವುದರ ಬದಲು ಬಾಲಕಿಯರಿಗೆ ಸಕಾಲಕ್ಕೆ ಅನ್ನ ಆಹಾರ ನೀಡದೆ, ದೈಹಿಕ ಕಿರುಕುಳ, ಮಾನಸಿಕ ಕಿರುಕುಳ ದೈಹಿಕ ಹಲ್ಲೆ, ನಡೆಸಿ ಕಿಟಕಿಯ ಸರಳುಗಳಿಗೆ ಕಟ್ಟಿ ಹಾಕುವುದು, ಕೂಡಿ ಹಾಕುವುದು, ಬರೆ ಹಾಕಿರುವ ಪ್ರಕರಣಗಳು ಬಯಲಾಗಿವೆ.
ಸ್ವತಃ ಚಿಕ್ಕಬಳ್ಳಾಪುರ ಸರ್ಕಾರಿ ಬಾಲಕಿಯರ ಮಂದಿರದ ಅಧೀಕ್ಷಕಿ ಮಮತಾ ಬಾಲಕಿಯರಿಗೆ ಸಾಂತ್ವನ ಹೆಳುವುದರ ಬದಲು ಕ್ಷುಲ್ಲಕ ಕಾರಣಕ್ಕೆ ಬಾಲಕಿಯರನ್ನು ಕಿಟಕಿ ಸರಳು, ಕಂಬಗಳಿಗೆ ಕಟ್ಟಿಹಾಕಿ, ರೂಮ್ಗಳಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿರುವ ಬಗ್ಗೆ ಸ್ವತಃ ನೊಂದ ಬಾಲಕಿಯರು ಅವಲತ್ತುಕೊಂಡಿದ್ದರು. ಮಾಹಿತಿ ಅರಿತ ಚಿಕ್ಕಬಳ್ಳಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಬಾಲಕಿಯರ ಮಂದಿರಕ್ಕೆ ಭೇಟಿ ನೀಡಿ ದೂರು ಆಲಿಸಿ ತನಿಖೆಗೆ ಸೂಚಿಸಿದರು.
ಆಗ ಚಿಕ್ಕಬಳ್ಳಾಪುರದ ಸರ್ಕಾರಿ ಬಾಲಕಿಯರ ಮಂದಿರ ಕರ್ಮಕಾಂಡ ಬಯಲಾಗಿವೆ. ಚಿಕ್ಕಬಳ್ಳಾಪುರ ಸರ್ಕಾರಿ ಬಾಲಕಿಯರ ಮಂದಿರದ ಅಧೀಕ್ಷಕಿಯಾಗಿರುವ ಮಮತಾ ಹಾಗೂ ಬಾಲಮಂದಿರದ ಸಹಾಯಕಿ ಸರಸ್ವತಮ್ಮ ಬಾಲಕಿಯರಿಗೆ ಚಿತ್ರಹಿಂಸೆ ನೀಡಿ, ದೈಹಿಕ ಹಲ್ಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಇದರಿಂದ ಸ್ವತಃ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಹಾಗೂ ಮಕ್ಕಳ ರಕ್ಷಣಾ ಘಟಕ ಸಂಘದ ಅಧ್ಯಕ್ಷರಾದ ಪಿ.ಎನ್ ರವೀಂದ್ರರವರ ಸೂಚನೆ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನವತಾಜ್ಬಿ, ಚಿಕ್ಕಬಳ್ಳಾಪುರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದರಿಂದ ಮಹಿಳಾ ಠಾಣೆಯ ಪೊಲೀಸರು ಮಮತಾ ಹಾಗೂ ಸರಸ್ವತಿ ವಿರುದ್ಧ ಮಕ್ಕಳ ಹಕ್ಕುಗಳ ಉಲ್ಲಂಘನೆ ಕಾಯ್ದೆ, ದೈಹಿಕ ಹಲ್ಲೆ, ಮಾನಸಿಕ ಹಿಂಸೆ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಇನ್ನೂ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಮಮತಾರನ್ನ ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.