ಹೈದರಾಬಾದ್: ಪ್ರಿಯಕರನ ಜೊತೆ ಮದುವೆಯಾಗಲು ಯುವತಿ ಪೊಲೀಸ್ ಠಾಣೆ ಮುಂದೆ ಧರಣಿ ಕುಳಿತ ಘಟನೆ ಆಂಧ್ರ ಪ್ರದೇಶದ ಕಾಕಿನಾಡದಲ್ಲಿ ನಡೆದಿದೆ.
ದುರ್ಗ ಭವಾನಿ ಶುಕ್ರವಾರ ರಾತ್ರಿ ತನ್ನ ಪ್ರಿಯಕರನನ್ನು ಮದುವೆ ಆಗಬೇಕೆಂದು ಗೊಲ್ಲಾಪ್ರೋಲು ಪೊಲೀಸ್ ಠಾಣೆ ಮುಂದೆ ಕುಳಿತು ಧರಣಿ ನಡೆಸಿದ್ದಾಳೆ. ಯುವತಿಗೆ ಆಕೆಯ ಪೋಷಕರು ಹಾಗೂ ಸಂಬಂಧಿಕರು ಸಾಥ್ ನೀಡಿದ್ದರು.
ಸಲಾದಿ ನಾಗೇಶ್ವರ್ ರಾವ್ ಹಾಗೂ ದುರ್ಗ ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಸಂದರ್ಭದಲ್ಲಿ ನಾಗೇಶ್ವರ್, ದುರ್ಗಾಳನ್ನು ಮದುವೆಯಾಗುವುದಾಗಿ ಆಶ್ವಾಸನೆ ನೀಡಿದ್ದನು. ಆದರೆ ಈಗ ದುರ್ಗಾ ಮದುವೆಯ ಪ್ರಸ್ತಾಪ ಮಾಡಿದಾಗ ನಾಗೇಶ್ವರ್ ನಿರಾಕರಿಸಿದ್ದಾನೆ. ಬೇರೆ ಯುವತಿಯ ಜೊತೆ ಮದುವೆಯಾಗಲು ತಯಾರಿ ನಡೆಸುತ್ತಿದ್ದನು.
ನಾಗೇಶ್ವರ್ ಬೇರೆ ಯುವತಿಯ ಜೊತೆ ಮದುವೆ ಆಗುತ್ತಿದ್ದಾನೆ ಎಂಬ ವಿಷಯ ತಿಳಿದ ದುರ್ಗಾ ತನ್ನ ತಂದೆ-ತಾಯಿ ಹಾಗೂ ಸಂಬಂಧಿಕರ ಜೊತೆ ಗೊಲ್ಲಾಪ್ರೋಲು ಪೊಲೀಸ್ ಠಾಣೆಯ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ಧರಣಿ ನಡೆಸಿದ್ದಾಳೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಪಿತಾಪುರಂ ಸಿಐಬಿ ಸೂರ್ಯ ಅಪ್ಪರಾವ್ ಹಾಗೂ ಎಸ್ಐಎನ್ ರಾಮಲಿಂಗೇಶ್ವರ ರಾಣೆ ಅವರು ಧರಣಿ ಕುಳಿತವರಿಗೆ ಸಮಾಧಾನ ಮಾಡಲು ಮುಂದಾದರು. ಆದರೆ ಯುವತಿ ಹಾಗೂ ಆಕೆಯ ಪೋಷಕರು ಒಪ್ಪಲಿಲ್ಲ. ಬಳಿಕ ಪೊಲೀಸರು ವಾಹನ ಸವಾರರಿಗೆ ಬೈಪಾಸ್ ಮೂಲಕ ಹೋಗುವುದಾಗಿ ಹೇಳಿ ಟ್ರಾಫಿಕ್ ಕ್ಲಿಯರ್ ಮಾಡಿದ್ದರು.
ಸದ್ಯ ಪೊಲೀಸರು ನಾಗೇಶ್ವರ್ ರಾವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.