– ಆರೋಪಿಯ ಕೆನ್ನೆಗೆ ಬಾರಿಸಿ ಸ್ನೇಹಿತೆ ಎಸ್ಕೇಪ್
– ಕಾಡಿನೊಳಗಿದ್ದ ಮನೆಯಲ್ಲಿ ಬಿಟ್ಟು ಕಾಮುಕರು ಪರಾರಿ
– ಎಫ್ಐಆರ್ ದಾಖಲಿಸಲು ಪೊಲೀಸರು ಹಿಂದೇಟು
ರಾಯ್ಪುರ: ದೇವಸ್ಥಾನದಿಂದ ವಾಪಸ್ ಬರುತ್ತಿದ್ದ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಲರಾಂಪುರ್ ಜಿಲ್ಲೆಯಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಫೆ. 19 ರಂದು ಸಂತ್ರಸ್ತೆ ತನ್ನ ಸ್ನೇಹಿತೆನೊಂದಿಗೆ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುತ್ತಿದ್ದಳು. ಇವರಿಬ್ಬರು ನಿರ್ಜನವಾದ ಪ್ರದೇಶದ ಮೂಲಕ ಹೋಗುತ್ತಿದ್ದರು. ಈ ವೇಳೆ ಇಬ್ಬರು ಯುವಕರು ಅವರಿಗೆ ಕಿರುಕುಳ ನೀಡಿದ್ದಾರೆ. ಆಗ ಸಂತ್ರಸ್ತೆ ಜೊತೆಗಿದ್ದ ಸ್ನೇಹಿತೆ ಧೈರ್ಯದಿಂದ ಆರೋಪಿಯ ಕೆನ್ನೆಗೆ ಬಾರಿಸಿ ಪರಾರಿಯಾಗಿದ್ದಾಳೆ. ಆಗ ಆರೋಪಿಗಳು ಸಂತ್ರಸ್ತೆಯನ್ನು ಹಿಡಿದುಕೊಂಡು, ಆಕೆಯ ಬಾಯಿಯನ್ನು ಮುಚ್ಚಿ ಬಲವಂತವಾಗಿ ಕಾಡಿನೊಳಗಿದ್ದ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅಪ್ರಾಪ್ತ ಸೇರಿದಂತೆ ರಾತ್ರಿಯಿಡೀ ಮೂವರು ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಐಜಿ ರತನ್ಲಾಲ್ ದಂಗಿ ತಿಳಿಸಿದ್ದಾರೆ.
ಮರುದಿನ ಮುಂಜಾನೆ ಆರೋಪಿಗಳು ಸಂತ್ರಸ್ತೆಯನ್ನು ಬಿಟ್ಟು ಎಸ್ಕೇಪ್ ಆಗಿದ್ದಾರೆ. ಇತ್ತ ಅವರಿಂದ ತಪ್ಪಿಸಿಕೊಂಡು ಬಚಾವ್ ಆಗಿದ್ದ ಸಂತ್ರಸ್ತೆಯ ಸ್ನೇಹಿತೆ ಆಕೆಯ ಮನೆಗೆ ಹೋಗಿ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾಳೆ. ತಕ್ಷಣ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಈ ಕುರಿತು ನಿರ್ಲಕ್ಷ್ಯವನ್ನು ತೋರಿಸಿದ್ದಾರೆ.
ಸಂತ್ರಸ್ತೆ ಮನೆಗೆ ಬಂದು ತನ್ನ ಕುಟುಂಬದವರಿಗೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾಳೆ. ನಂತರ ಇನ್ಸ್ಪೆಕ್ಟರ್ ಉಮೇಶ್ ಭಗೆಲ್ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ವರದಿಯಲ್ಲೂ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಆದರೆ ಪೊಲೀಸರು ಎಫ್ಐಆರ್ ದಾಖಲಿಸದೆ ಸಂತ್ರಸ್ತೆಯನ್ನು ಮನೆಗೆ ಕಳುಹಿಸಿದ್ದಾರೆ.
ಸಂತ್ರಸ್ತೆ ಆರೋಪಿಗಳನ್ನು ಗುರುತಿಸಿದ್ದರೂ ಪೊಲೀಸರು ಯಾವುದೇ ಕಾನೂನು ಕ್ರಮಕೈಗೊಂಡಿಲ್ಲ. ಆರೋಪಿಗಳು ಕೂಡ ಭಯವಿಲ್ಲದೇ ಓಡಾಡುತ್ತಿದ್ದರು. ಇತ್ತ ಸಂತ್ರಸ್ತೆ ಅನಾರೋಗ್ಯದಿಂದ ಬಳಲುತ್ತಿದ್ದಳು. ಇದರಿಂದ ಆತಂಕಕ್ಕೊಳಗಾದ ಆಕೆಯ ಕುಟುಂಬದವರು ಪೊಲೀಸರ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಆಗ ಕಾಂಗ್ರೆಸ್ ಶಾಸಕರು ಐಜಿ ದಂಗಿಯನ್ನು ಸಂಪರ್ಕಿಸಿ ಮೂವರು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.
ಇದರ ಬೆನ್ನಲ್ಲೇ ಪೊಲೀಸರು ಎಫ್ಐಆರ್ ದಾಖಲಿಸಿ, ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳನ್ನು ಕುಲದೀಪ್, ಪಿಂಟು ಠಾಕೂರ್ ಮತ್ತು 17 ವರ್ಷದ ಅಪ್ರಾಪ್ತ ಆರೋಪಿ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.