ಕೊಟ್ಟಾಯಂ: ಕೇರಳದ ಕೊಟ್ಟಾಯಂನಲ್ಲಿರುವ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಗೆ ಕಾಲೇಜು ಆವರಣದಲ್ಲೇ ದುಷ್ಕರ್ಮಿಯೊಬ್ಬ ಬೆಂಕಿ ಹಚ್ಚಿ ಬಳಿಕ ತನ್ನ ಮೇಲೂ ಬೆಂಕಿ ಹಚ್ಚಿಕೊಂಡು ಇಬ್ಬರೂ ಮೃತಪಟ್ಟ ಶಾಕಿಂಗ್ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು 20 ವರ್ಷದ ಲಕ್ಷ್ಮೀ ಹಾಗೂ 26 ವರ್ಷದ ಆದರ್ಶ್ ಎಂಬುವುದಾಗಿ ಗುರುತಿಸಲಾಗಿದೆ.
ನಡೆದಿದ್ದೇನು?: ಆದರ್ಶ್ ಕೊಲ್ಲಂ ಜಿಲ್ಲೆಯಲ್ಲಿರುವ ಸ್ಕೂಲ್ ಆಫ್ ಮೆಡಿಕಲ್ ಎಜುಕೇಶ್ ಕಾಲೇಜಿನ 2009ನೇ ಬ್ಯಾಚ್ನ ವಿದ್ಯಾರ್ಥಿಯಾಗಿದ್ದಾನೆ. ಲಕ್ಷ್ಮೀ 2013ನೇ ಬ್ಯಾಚ್ನ ವಿದ್ಯಾರ್ಥಿನಿಯಾಗಿದ್ದಾಳೆ. ಇವರಿಬ್ಬರೂ ಮರು ಪರೀಕ್ಷೆ ಬರೆಯಲೆಂದು ಬುಧವಾರ ಕಾಲೇಜಿಗೆ ಆಗಮಿಸಿದ್ದರು. ಮಧ್ಯಾಹ್ನದ ಫ್ರೀ ಟೈಮ್ನಲ್ಲಿ ಮಾತಾಡಲಿದೆ ಅಂತಾ ಆದರ್ಶ್ ಲಕ್ಷ್ಮೀಯನ್ನು ಕರೆದಿದ್ದಾನೆ. ಆದ್ರೆ ಇದನ್ನು ಲಕ್ಷ್ಮೀ ನಿರಾಕರಿಸಿದ್ದು, ತನ್ನ ಗೆಳತಿಯರೊಂದಿಗೆ ತರಗತಿಯಲ್ಲಿ ಕುಳಿತು ಮಾತನಾಡಿಕೊಂಡಿದ್ದಳು.
ಇದರಿಂದ ಕೋಪಗೊಂಡ ಆದರ್ಶ್ ಕಾಲೇಜಿನ ಹೊರಗಡೆ ಹೋಗಿ ಬಂದವನೇ ಕೈಯಲ್ಲಿ ಪೆಟ್ರೋಲ್ ಕ್ಯಾನ್ ಸಮೇತ ಒಳಗಡೆ ಬಂದು ಏಕಾಏಕಿ ಲಕ್ಷ್ಮೀ ಮೈ ಮೇಲೆ ಸುರಿಯಲು ಯತ್ನಿಸಿ, ಕೂಡಲೇ ಬೆಂಕಿ ಹಚ್ಚಲು ತನ್ನ ಕಿಸೆಯಲ್ಲಿದ್ದ ಲೈಟರ್ನ್ನು ತೆಗೆದಿದ್ದಾನೆ. ಈ ವೇಳೆ ಲಕ್ಷ್ಮೀ ಅಲ್ಲಿಂದ ಓಡಿಹೋಗಿದ್ದಾಳೆ. ಅಂತೆಯೇ ಆಕೆಯನ್ನು ಬೆನ್ನಟ್ಟಿದ ಆದರ್ಶ್ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ತಕ್ಷಣವೇ ಅಲ್ಲಿದ್ದ ವಿದ್ಯಾರ್ಥಿಗಳು ಅವರಿಬ್ಬರನ್ನೂ ರಕ್ಷಿಸಲು ಮುಂದಾದ್ರೂ ಬೆಂಕಿಯನ್ನು ಬೇಗನೇ ನಂದಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇಬ್ಬರಿಗೂ ಗಂಭೀರ ಗಾಯಗಳಾಗಿತ್ತು. ಬಳಿಕ ಇಬ್ಬರನ್ನೂ ಕೊಟ್ಟಾಯಂನ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆಗೆ ಕಾರಣವೇನು?: ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಇವರಿಬ್ಬರೂ ಪ್ರೇಮಿಗಳಾಗಿದ್ದರು. ಲಕ್ಷ್ಮೀ 2013ರಲ್ಲಿ ಫಿಸಿಯೋಥೆರಪಿ ವಿದ್ಯಾರ್ಥಿನಿಯಾಗಿದ್ದರೆ, ಆದರ್ಶ್ ಇದೇ ವಿಷಯದಲ್ಲಿ ಅಧ್ಯಯನ ಮಾಡಿದ್ದ. ಇತ್ತೀಚೆಗಷ್ಟೇ ಲಕ್ಷ್ಮೀ ಈ ಸಂಬಂಧದಿಂದ ದೂರವಿದ್ದರು. ಇದೇ ಈ ಘಟನೆಗೆ ಕಾರಣ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.