– ಓದು ಪೂರ್ಣವಾಗೋವರೆಗೂ ಮದ್ವೆ ಬೇಡ ಎಂದ ವಿದ್ಯಾರ್ಥಿನಿ
– ಪೋಷಕರು ಒಪ್ಪದ್ದಕ್ಕೆ ಮನನೊಂದು ನೇಣಿಗೆ ಶರಣು
ಹೈದರಾಬಾದ್: ಪೋಷಕರು ಮದುವೆ ನಿಗದಿ ಮಾಡಿದ್ದಕ್ಕೆ ಮನನೊಂದು 19 ವರ್ಷದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ನಡೆದಿದೆ.
ಭಾರತಿ(19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಶ್ರೀಕಾಕುಲಂ ಜಿಲ್ಲೆಯ ಬಸವ ಕೊಟ್ಟೂರು ನಿವಾಸಿಗಳಾದ ರಾಮಯ್ಯ ಹಾಗೂ ಲಕ್ಷ್ಮಿ ತಮ್ಮ ಮಗಳ ಮದುವೆಯನ್ನು ಫಿಕ್ಸ್ ಮಾಡಿದ್ದಾರೆ. ಎರಡನೇ ವರ್ಷದ ಪದವಿ ಓದುತ್ತಿರುವ ಭಾರತಿ ನಾನು ಇನ್ನೂ ಓದಬೇಕು ಈಗಲೇ ಮದುವೆ ಬೇಡ ಎಂದರೂ ಪೋಷಕರು ಒಪ್ಪಲಿಲ್ಲ. ಇದರಿಂದ ಮನನೊಂದ ಭಾರತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನಾನು ನನ್ನ ಪದವಿಯನ್ನು ಪೂರ್ಣಗೊಳಿಸಬೇಕು. ಅಲ್ಲಿಯವರೆಗೂ ಮದುವೆ ಮುಂದೂಡುವಂತೆ ಭಾರತಿ ಪೋಷಕರ ಬಳಿ ಮನವಿ ಮಾಡಿಕೊಂಡಿದ್ದಾಳೆ. ಆದರೆ ಎರಡನೇ ಮಗಳಿಗೆ ಈಗಲೇ ಮದುವೆ ಸಂಬಂಧ ಬಂದಿರುವ ಕಾರಣ ಪೋಷಕರು ಭಾರತಿಯ ವಿವಾಹ ಮಾಡಲು ನಿರ್ಧರಿಸಿದ್ದರು. ಪೋಷಕರ ವರ್ತನೆಯಿಂದ ಮನನೊಂದ ಭಾರತಿ ಗುರುವಾರ ಸಂಜೆ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ.
ಗುರುವಾರ ಸಂಜೆ ಭಾರತಿ ಸಹೋದರಿ ಮನೆಗೆ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದ್ದು, ತಕ್ಷಣ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ಅಕ್ಕಪಕ್ಕದ ಮನೆಯವರು ಭಾರತಿಯನ್ನು ಮೊದಲು ಸೋಮಪೇಟಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ನಂತರ ಅಲ್ಲಿಂದ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆದಲ್ಲಿ ಭಾರತಿ ಮೃತಪಟ್ಟಿದ್ದಾಳೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಭಾರತಿಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.