ರಾಮನಗರ: ಡೈರಿಗೆ ಹಾಲು ಹಾಕಲು ಟಿವಿಎಸ್ ಗಾಡಿಯಲ್ಲಿ ತೆರಳುತ್ತಿದ್ದ ಯುವತಿಗೆ ಜೆಸಿಬಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಾಗಡಿ ತಾಲೂಕಿನ ನಂಜಯ್ಯನ ಪಾಳ್ಯದ ಪ್ರಕಾಶ್ ಎಂಬವರ ಪುತ್ರಿ ಚೈತ್ರಾ (18) ಮೃತ ಯುವತಿ. ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಳು. ಇಂದು ಚೈತ್ರಾ ಬೆಳಗ್ಗೆ ಕರಲಮಂಗಲ ಗ್ರಾಮದಲ್ಲಿನ ಹಾಲಿನ ಡೈರಿಗೆ ಹಾಲು ಹಾಕಲು ಟಿವಿಎಸ್ ಗಾಡಿಯಲ್ಲಿ ಹೋಗಿದ್ದಳು. ಈ ವೇಳೆ ಜೆಸಿಬಿ ಡಿಕ್ಕಿ ಹೊಡೆದಿದೆ.
ಹೆಲ್ಮೆಟ್ ಹಾಕಿಕೊಳ್ಳದೆ ಗಾಡಿ ಓಡಿಸುತ್ತಿದ್ದ ಯುವತಿ ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಪೆಟ್ಟಾದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾಳೆ. ಘಟನೆ ಸಂಬಂಧ ಮಾಗಡಿ ಪೊಲೀಸ್ ಠಾಣೆಯ ಪಿಎಸ್ಐ ವೆಂಕಟೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಜೆಸಿಬಿ ಚಾಲಕನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸ್ತಿದ್ದಾರೆ.