ಹಾಸನ: ಸ್ನೇಹಿತನೊಂದಿಗೆ ಲಾಡ್ಜ್ ಗೆ ಬಂದಿದ್ದ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಪ್ರಿಯಕರ ತನ್ನೊಂದಿಗೆ ಸರಿಯಾದ ಮಾತನಾಡುತ್ತಿಲ್ಲ ಎಂದು ಮನನೊಂದು ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ ಎನ್ನುವ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಹಾಸನ ನಗರದ ಹೃದಯ ಭಾಗದಲ್ಲಿರುವ ಮೂನ್ ಲೈಟ್ ಹೋಟೆಲ್ ನಲ್ಲಿ ಕಳೆದ ರಾತ್ರಿ ತನ್ನ ಚಿರಂತಿ ಪ್ರಿಯಕರ ರಾಕೇಶ್ ಜೊತೆ ತಂಗಲು ಬಂದಿದ್ದು, ಸಿಸಿಟಿವಿಯಲ್ಲಿ ದೃಶ್ಯಾವಳಿಗಳು ಸೆರೆಯಾಗಿದೆ. ಕಳೆದ ರಾತ್ರಿ 10:30ಕ್ಕೆ ಇಬ್ಬರು ಪ್ರೇಮಿಗಳು ಬಂದಿದ್ದಾರೆ. ಇಬ್ಬರ ನಡುವೆ ಮೊಬೈಲ್ ಕಾಲ್ ವಿಚಾರವಾಗಿ ಮಧ್ಯರಾತ್ರಿಯವರೆಗೂ ವಾದ ವಿವಾದ ನಡೆದಿದೆ.
ಮುಂಜಾನೆ ಬಾತ್ ರೂಂ ನೊಳಗೆ ಹೋದ ಚಿರಂತಿ ಒಂದು ಗಂಟೆಯಾದರೂ ಹೊರಗಡೆ ಬಂದಿರಲಿಲ್ಲ. ಈ ಹಿನ್ನಲೆಯಲ್ಲಿ ರಾಕೇಶ್ ಲಾಡ್ಜ್ ಸಿಬ್ಬಂದಿ ಸಹಾಯ ಪಡೆದು ಬಾಗಿಲು ಒಡೆದು ನೋಡಿದಾಗ ಚಿರಂತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿಚಾರ ಬೆಳಕಿಗೆ ಬಂದಿದೆ.
ಚಿರಂತಿ ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಗ್ರಾಮದವಳಾಗಿದ್ದು, ಕಳೆದ ಎರಡು ವರ್ಷ ಹಿಂದೆಯೇ ಯುವಕನೊಬ್ಬನಿಗೆ ಮದುವೆಯಾಗಿತ್ತು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತಿದ್ದ ಚಿರಂತಿ ಪತಿಯೊಂದಿಗೆ ವಾಸವಿಲ್ಲದೇ ನಗರದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು.
ಚಿರಂತಿ ತಾನು ವಾಸವಿದ್ದ ಮನೆಯ ಮಾಲೀಕನ ಮಗನಾದ ಸುನೀಲ್ ಅಲಿಯಾಸ್ ರಾಕೇಶ್ ಎಂಬಾತನೊಂದಿಗೆ ಒಡನಾಟವಿತ್ತು. ಕಳೆದ ರಾತ್ರಿಯೂ ಕೂಡ ಇದೇ ರಾಕೇಶ್ನೊಂದಿಗೆ ಲಾಡ್ಜ್ ನಲ್ಲಿ ತಂಗಿದ್ದ ಚಿರಂತಿ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಗರ ಪೊಲೀಸರು ಪ್ರಿಯಕರ ರಾಕೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು ಚಿರಂತಿ ಆತ್ಮಹತ್ಯೆ ಕುರಿತು ತನಿಖೆ ಮುಂದುವರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv