ಮಡಿಕೇರಿ: 18 ವರ್ಷದ ಯುವತಿಯೊಬ್ಬಳು ತಲೆ ಕೂದಲು ಉದುರುತ್ತಿದೆ ಎಂದು ನೊಂದು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದೆ.
ಕೊಡಗು ಮೂಲದ ನೇಹಾ ಗಂಗಮ್ಮ(18) ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಮೂರು-ನಾಲ್ಕು ದಿನಗಳ ಹಿಂದೆ ಮನೆಗೆ ಹೋಗುತ್ತೇನೆ ಎಂದು ಪಿಜಿಯಿಂದ ಹೊರಟಿದ್ದಾಳೆ. ಆದರೆ ಮನೆಗೆ ಬಾರದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶನಿವಾರ ಈಕೆ ಮೃತದೇಹ ಪತ್ತೆಯಾಗಿದೆ.
ನೇಹಾ ಗಂಗಮ್ಮ ಒಂದು ತಿಂಗಳ ಹಿಂದೆ ತನ್ನ ಕೂದಲನ್ನು ವಿ.ವಿ ಮೊಹಲ್ಲದ ರೋಹಿಣಿ ಬ್ಯೂಟಿಪಾರ್ಲರ್ ಎಂಬಲ್ಲಿ ಸ್ಟ್ರೈಟ್ನಿಂಗ್ ಮಾಡಿಸಿದ್ದಾಳೆ. ನಂತರ ಕೂದಲು ಉದುರಲಾರಂಭಿಸಿದೆ. ಇದರಿಂದ ದೃತಿಗೆಟ್ಟ ನೇಹಾ ಬ್ಯೂಟಿಪಾರ್ಲರ್ ಮಾಲೀಕರೊಂದಿಗೆ ಮಾತನಾಡಿದ್ದಾಳೆ. ಆದರೂ ಕೂದಲು ಉದುರುವಿಕೆ ಕಡಿಮೆಯಾಗಿಲ್ಲ. ನಂತರ ಮೈಸೂರಿನಿಂದ ಕೊಡಗಿಗೆ ಆಗಮಿಸಿದ್ದು, ಮನೆಗೆ ಬಂದಿರಲಿಲ್ಲ.
ಮನೆಯವರು ಕೂಡ ಮಗಳು ಮೈಸೂರಿನಲ್ಲಿ ಇದ್ದಾಳೆ ಎಂದು ತಿಳಿದು ಮಗಳಿದ್ದ ಪಿಜಿಗೆ ಕರೆ ಮಾಡಿದ್ದಾರೆ. ಆದರೆ ಮಗಳು ಪಿಜಿಯಲ್ಲಿ ಇಲ್ಲದಿರುವುದು ತಿಳಿದು ಬಂದಿದೆ. ನಂತರ ಪೊಷಕರು ತಮಗೆ ಗೊತ್ತಿರುವ ಕಡೆಯೆಲ್ಲ ಹುಡುಕಾಡಿದ್ದಾರೆ. ಆದರೆ ಏನು ಪ್ರಯೋಜವಾಗಿಲ್ಲ, ಕೊನೆಗೆ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ಯುವತಿಗಾಗಿ ಪೊಲೀಸರು ಹುಡುಕಾಡುತ್ತಿದ್ದರು. ಆದರೆ ಶನಿವಾರ ನೇಹಾ ಮೃತದೇಹ ತನ್ನ ಸ್ವಗ್ರಾಮ ಬಾಳೆಲೆಯ ಲಕ್ಷ್ಮಣ ತೀರ್ಥ ನದಿಯಲ್ಲಿ ಪತ್ತೆಯಾಗಿದೆ. ಆನೇಕ ಬಾರಿ ನೇಹಾ ತಮ್ಮ ಪೊಷಕರ ಬಳಿ ತನ್ನ ಅಳಲು ತೋಡಿಕೊಂಡಿದ್ದು, ನಾನು ಕಾಲೇಜಿಗೆ ಹೋಗಲ್ಲ ನನ್ನ ಕೂದಲು ಉದರುವಿಕೆ ಸರಿಯಾದ ನಂತರ ಹೋಗುತ್ತೇನೆ ಎಂದು ಹೇಳಿದ್ದಾಳೆ. ಆಗ ಪೋಷಕರು ಕೂಡ ಆಕೆಯನ್ನ ಸಮಾಧಾನ ಮಾಡಿ ಕಾಲೇಜಿಗೆ ಹೋಗು ಎಂದ ಹೇಳಿ ಮೈಸೂರಿಗೆ ಕಳುಹಿಸಿದ್ದಾರೆ. ಆದರೆ ಹೇರ್ ಫಾಲ್ ನಿಂದ ಕಂಗೆಟ್ಟ ನೇಹಾ ನೊಂದು ಸ್ವಗ್ರಾಮಕ್ಕೆ ಬಂದು ನದಿಗೆ ಹಾರಿ ಜೀವ ಕಳೆದುಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಸದ್ಯಕ್ಕೆ ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಈ ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv