ಬೆಂಗಳೂರು: ಕಬ್ಬನ್ ಪಾರ್ಕ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪ್ರೀತಿಯಲ್ಲಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬುವುದು ಬೆಳಕಿಗೆ ಬಂದಿದೆ.
ಸಂತೋಷಿ ಆತ್ಮಹತ್ಯೆಗೆ ಶರಣಾದ ಯುವತಿ. ಭಾನುವಾರ ಕಬ್ಬನ್ ಪಾರ್ಕ್ ನಲ್ಲಿ ಯುವತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದರು. ಈ ಸಂಬಂಧ ಪೊಲೀಸರು ಯುವತಿಯ ಪ್ರಿಯಕರ ನರೇಶ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿದೆ.
ಆಗಿದ್ದೇನು?
ಸಂತೋಷಿ ಮತ್ತು ನರೇಶ್ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಬಗ್ಗೆ ಸಂತೋಷಿ ಪೋಷಕರಿಗೆ ತಿಳಿದಿದೆ. ಬಳಿಕ ಅವರು ಆರೋಪಿ ನರೇಶ್ ಗೆ ನನ್ನ ಮಗಳ ಸಹವಾಸಕ್ಕೆ ಬರಬೇಡ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ಪ್ರೇಮಿಗಳಿಬ್ಬರು ಮತ್ತೆ ಭೇಟಿ ಮಾಡಿ ಸುತ್ತಾಡುತ್ತಿದ್ದರು. ಇದನ್ನೆಲ್ಲ ಗಮನಿಸಿದ ಪೋಷಕರು ಸಂತೋಷಿಗೆ ಬುದ್ಧಿ ಮಾತನ್ನು ಹೇಳಿದ್ದಾರೆ. ಈ ರೀತಿ ಪರ ವ್ಯಕ್ತಿಗಳೊಂದಿಗೆ ಸುತ್ತಾಡುವುದು, ಮಾತನಾಡುವುದು ಸರಿಯಿಲ್ಲ. ಒಂದು ವೇಳೆ ನೀನು ಆತನನ್ನು ಇಷ್ಟು ಪಡುವುದಾದರೆ ಆತನ ಜೊತೆಯೇ ಹೋಗು. ಈ ರೀತಿಯಾಗಿ ನಮ್ಮ ಮರ್ಯಾದೆ ತೆಗೆಯಬೇಡ ಎಂದು ಬುದ್ದಿ ಮಾತನ್ನು ಹೇಳಿದ್ದರು. ಇದಕ್ಕೆ ಸಂತೋಷಿ ನಾನು ಆತನನ್ನು ಇಷ್ಟ ಪಡುತ್ತೇನೆ. ಆತನ ಜೊತೆಯಲ್ಲಿಯೇ ಹೋಗುತ್ತೇನೆ ಎಂದು ಶನಿವಾರ ರಾತ್ರಿ ಮನೆ ಬಿಟ್ಟು ಹೋಗಿದ್ದಾಳೆ.
ಏನಿದು ಪ್ರಕರಣ?
ಭಾನುವಾರ ನಗರ ಪ್ರಖ್ಯಾತ ಉದ್ಯಾವನವಾದ ಕಬ್ಬನ್ ಪಾರ್ಕ್ ನಲ್ಲಿ ಅನುಮಾನಸ್ಪದ ರೀತಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಯುವತಿ ಮೃತದೇಹ ಪತ್ತೆಯಾಗಿತ್ತು. ಸಂತೋಷಿ ಶನಿವಾರ ಪಾರ್ಕ್ ಗೆ ಬಂದು ಮರವೊಂದಕ್ಕೆ ತನ್ನ ದುಪ್ಪಟ್ಟದಿಂದ ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಭಾನುವಾರ ಬೆಳಗ್ಗೆ ಉದ್ಯಾನವನದ ಸಿಬ್ಬಂದಿ ಗಮನಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಸಂತೋಷಿಯ ಮೃತ ದೇಹ ನೋಡಿ ಕೂಡಲೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು.
ಮಾಹಿತಿ ತಿಳಿದ ಕಬ್ಬನ್ ಪಾರ್ಕ್ ಪೊಲೀಸರು ಸ್ಥಳಕ್ಕೆ ಬಂದು ಮೃತ ಯುವತಿಯ ದೇಹವನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆಂದು ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಿದ್ದರು. ನಂತರ ಕಬ್ಬನ ಪಾರ್ಕ್ ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv