– ಕೆಲಸಕ್ಕೆ ಹೋಗ್ತಿದ್ದ ಯುವತಿಯ ಮೇಲೆ ಹರಿದ ಬಸ್
ಹೈದರಾಬಾದ್: ತೆಲಂಗಾಣ ಸಾರಿಗೆ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ನಿಶ್ಚಿತಾರ್ಥ ನಿಗದಿಯಾಗಿದ್ದ ಯುವತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತೆಲಂಗಾಣದ ಪಂಜಗುಟ್ಟಾ ಬಳಿ ನಡೆದಿದೆ.
ಎಲ್.ಸಾಯಿ ದೀಪಿಕಾ ರೆಡ್ಡಿ (24) ಮೃತ ಯುವತಿ. ಇವರ ಪೋಷಕರಿಗೆ ಇಬ್ಬರೂ ಹೆಣ್ಣು ಮಕ್ಕಳಿದ್ದು, ದೀಪಿಕಾ ರೆಡ್ಡಿ ಕಿರಿಯ ಮಗಳಾಗಿದ್ದಳು. ಈಕೆ ಖಾಸಗಿ ಕಂಪನಿಯೊಂದರಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಳು. ಹೀಗಾಗಿ ದೀಪಿಕಾ ರೆಡ್ಡಿ ತನ್ನ ಸ್ನೇಹಿತರ ಜೊತೆ ಸನಾತ್ನಗದಲ್ಲಿ ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿ ತನ್ನ ಸ್ಕೂಟಿಯಲ್ಲಿ ಕೆಲಸಕ್ಕೆಂದು ಪಂಜಗುಟ್ಟದಿಂದ ಯೂಸುಫ್ಗುಡಾ ಕಡೆಗೆ ಹೋಗುತ್ತಿದ್ದಳು. ಈ ವೇಳೆ ಬಸ್ ಆಂಧ್ರ ಬ್ಯಾಂಕ್ ಬಳಿ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಬಸ್ಸಿನ ಹಿಂಬದಿ ಚಕ್ರಗಳು ಯುವತಿ ಮೇಲೆ ಹರಿದಿದ್ದು, ಪರಿಣಾಮ ರೆಡ್ಡಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮೃತ ದೀಪಿಕಾ ಚಿಕ್ಕಪ್ಪ ನೀಡಿದ ದೂರಿನ ಆಧಾರದ ಮೇರೆಗೆ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಎಸ್ಪಿ ಹೇಳಿದ್ದಾರೆ. ಇತ್ತ ಮೃತ ದೀಪಿಕಾ ರೆಡ್ಡಿಗೆ ಇನ್ನೂ ಎರಡು ದಿನದಲ್ಲಿ ನಿಶ್ವಿತಾರ್ಥ ಫಿಕ್ಸ್ ಆಗಿತ್ತು. ಹೀಗಾಗಿ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.