ಮುಂಬೈ: ಪ್ರಿಯಕರನೊಬ್ಬ ಬೇರೆ ವ್ಯಕ್ತಿ ಜೊತೆ ಮಾತನಾಡುತ್ತಿದ್ದ ತನ್ನ ಪ್ರೇಯಸಿಗೆ ಕಪಾಳಕ್ಕೆ ಹೊಡೆದ ಘಟನೆ ಭಾನುವಾರ ಮಹಾರಾಷ್ಟ್ರದ ಮುಂಬೈನ ಮನ್ಖುರ್ಡ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ರಾಜು ಪೂಜಾರಿ ಯೆಲ್ಲಪ್ಪ ಕಪಾಳಕ್ಕೆ ಹೊಡೆದ ಪ್ರಿಯಕರ. ಶನಿವಾರ ಯುವತಿ ಬೇರೆ ವ್ಯಕ್ತಿ ಜೊತೆ ಸಾರ್ವಜನಿಕ ಶೌಚಾಲಯದ ಬಳಿ ಮಾತನಾಡುತ್ತಿರುವುದ್ದನ್ನು ರಾಜು ನೋಡಿದ್ದಾನೆ. ಇದರಿಂದ ಕೋಪಗೊಂಡ ರಾಜು ತನ್ನ ಪ್ರೇಯಸಿಗೆ ಕಪಾಳಮೋಕ್ಷ ಮಾಡಿದ್ದಾನೆ. ಪರಿಣಾಮ ಯುವತಿ ಸ್ಥಳದಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.
ವರದಿಗಳ ಪ್ರಕಾರ, ರಾಜು ಯುವತಿಗೆ ಕಪಾಳಕ್ಕೆ ಹೊಡೆದ ತಕ್ಷಣ ಆಕೆ ಸ್ಥಳದಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಘಾಟ್ಕೋಪರ್ ನಲ್ಲಿರುವ ರಾಜಾವಾದಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಆಸ್ಪತ್ರೆಗೆ ತಲುಪಿದ ತಕ್ಷಣ ಆಕೆ ಮೃತಪಟ್ಟಿದ್ದಾಳೆ.
ಈ ಬಗ್ಗೆ ಮುನ್ಖರ್ಡ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ನಿತಿನ್ ಬೊಬಾಡೆ ಪ್ರತಿಕ್ರಿಯೆ ನೀಡಿ, ಸದ್ಯಕ್ಕೆ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ನಾವು ಯುವತಿಯ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಆರೋಪಿ ರಾಜುನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ನಿತಿನ್ ಬೊಬಾಡೆ ತಿಳಿಸಿದ್ದಾರೆ.