ಲಕ್ನೋ: ಗುರ್ಗಾವ್ನ ಶಾಲೆಯೊಂದರ ಟಾಯ್ಲೆಟ್ನಲ್ಲಿ 2ನೇ ಕ್ಲಾಸ್ ಬಾಲಕನ ಕೊಲೆ ಪ್ರಕರಣ ಮಾಸುವ ಮುನ್ನವೇ ಉತ್ತರಪ್ರದೇಶದಲ್ಲಿ ಶಾಲೆಯ ಮೂರನೇ ಮಹಡಿಯಿಂದ ಬಾಲಕಿಯನ್ನು ತಳ್ಳಿ ಕೊಲೆ ಮಾಡಲಾಗಿದೆ ಎನ್ನುವ ಆರೋಪವೊಂದು ಕೇಳಿ ಬಂದಿದೆ.
ಇಲ್ಲಿನ ಡಿಯೋರಿಯಾದ ಮಾರ್ಡನ್ ಸಿಟಿ ಮಾಂಟೆಸ್ಸರಿ ಶಾಲೆಯಲ್ಲಿ ಸೋಮವಾರದಂದು ಈ ಘಟನೆ ನಡೆದಿದೆ. 16 ವರ್ಷದ ಬಾಲಕಿ ನೀತು ಚೌಹಾಣ್ ಮೂರನೇ ಮಹಡಿಯಲ್ಲಿದ್ದ ಟಾಯ್ಲೆಟ್ಗೆ ಹೋಗಿದ್ದು, ಅಲ್ಲಿಂದ ಕೆಳಗೆ ಬಿದ್ದಿದ್ದಾಳೆ. ಆಕೆಯ ಕ್ಲಾಸ್ರೂಮ್ ಮೊದಲನೇ ಮಹಡಿಯಲ್ಲಿತ್ತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಕೆಳಗೆ ಬಿದ್ದ ನೀತೂಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಯ್ತು. ಅಲ್ಲಿಂದ ಗೋರಖ್ಪುರದ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜಿಗೆ ರವಾನೆ ಮಾಡಲಾಯಿತು ಎಂದು ಎಸ್ಎಸ್ಪಿ ರಾಜೀವ್ ಮಲ್ಹೋತ್ರಾ ಹೇಳಿದ್ದಾರೆ.
ನಮ್ಮ ಮಗಳನ್ನು ಯಾರೋ ಮೇಲಿನಿಂದ ತಳ್ಳಿದ್ದಾರೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಬಾಲಕಿಯ ಮೃತದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ ಎಂದು ಮಲ್ಹೋತ್ರಾ ಹೇಳಿದ್ದಾರೆ.
ಪೋಷಕರ ಪ್ರತಿಭಟನೆಗೆ ಹೆದರಿ ಶಾಲೆಯ ಆಡಳಿತ ಮಂಡಳಿ ಶಾಲೆಯನ್ನ ಲಾಕ್ ಮಾಡಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ. ಘಟನೆ ನಡೆದಾಗಿನಿಂದ ಶಾಲೆಯ ಮುಖ್ಯೋಪಾಧ್ಯಾಯರಾದ ಆದ್ಯ ತಿವಾರಿ ಅವರ ಫೋನ್ ಸ್ವಿಚ್ ಆಫ್ ಆಗಿದೆ ಎಂದು ವರದಿಯಾಗಿದೆ.
ಪ್ರಕರಣವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ವಹಿಸಿದ್ದು, ಅವರು ಡಿಇಓ(ಡಿಸ್ಟ್ರಿಕ್ಟ್ ಇನ್ಸ್ಪೆಕ್ಟರ್ ಆಫ್ ಸ್ಕೂಲ್ಸ್) ಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆಂದು ಎಸ್ಎಸ್ಪಿ ಹೇಳಿದ್ದಾರೆ.