ಬೆಂಗಳೂರು: ಗಿರೀಶ್ ಕಾರ್ನಾಡ್ ಅವರನ್ನು ನೋಡುತ್ತಿದ್ದರೆ ನನಗೆ ವಿವೇಕಾನಂದ ನೆನಪಾಗುತ್ತಿದ್ದರು ಎಂದು ಸಾಹಿತಿ ಬಿ.ಟಿ ಲಲಿತಾ ನಾಯಕ್ ಅವರು ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಲಲಿತಾ ನಾಯಕ್, ಗಿರೀಶ್ ಕಾರ್ನಾಡ್ ಅವರು ಬಹಳ ಮಾತನಾಡುತ್ತಿರಲಿಲ್ಲ. ಅವರು ತುಂಬಾ ಗಂಭೀರವಾಗಿರುತ್ತಿದ್ದರು. ಅವರನ್ನು ನೋಡಿದಾಗ ನನಗೆ ವಿವೇಕಾನಂದ ನೆನಪಾಗುತ್ತಿದ್ದರು. ಆದರೆ ನಾವು ಮಾತನಾಡುತ್ತಿರುವುದನ್ನು ಹೆಚ್ಚು ಕೇಳುತ್ತಿದ್ದರು. ಕೆಲವೇ ಮಾತುಗಳಲ್ಲಿ ಅವರು ತಮ್ಮ ಮಾತನ್ನು ಮುಗಿಸುತ್ತಿದ್ದರು. ಅವರು ಕೇವಲ ಸಾಹಿತಿ ಹಾಗೂ ಪರಿಸರದ ಬಗ್ಗೆ ಮಾತನಾಡುತ್ತಿದ್ದರು. ಅದು ಹೊರತುಪಡಿಸಿ ರಾಜಕೀಯದ ಬಗ್ಗೆ ಇನ್ಡೈರೆಕ್ಟ್ ಆಗಿ ಮಾತನಾಡುತ್ತಿದ್ದರು ಹೇಳಿದರು. ಇದನ್ನೂ ಓದಿ: ಯಾವುದೇ ವಿಧಿವಿಧಾನ ಇರಲ್ಲ, ಅಂತ್ಯಸಂಸ್ಕಾರಕ್ಕೆ ಸಾರ್ವಜನಿಕರು, ಗಣ್ಯರು ಬರಬೇಡಿ – ಶಾರದಾ ಕಾರ್ನಾಡ್
ನಾನು ಅವರೊಬ್ಬ ನಾಟಕಗಾರ, ಸಿನಿಮಾ ಕಲಾವಿದರು ಎಂದು ಎಂದು ಹೇಳಲು ಹೆಚ್ಚಾಗಿ ಅವರನ್ನು ಒಬ್ಬ ಸಾಹಿತಿಯಾಗಿ, ಹೋರಾಟಗಾರ ಎಂದು ನೆನಪು ಮಾಡಿಕೊಳ್ಳುತ್ತೇನೆ. ಏಕೆಂದರೆ ಸಮಾಜದಲ್ಲಿ ಏನೇ ಅನ್ಯಾಯ ಆದರೂ ಅವರು ಸರ್ಕಾರ, ಧರ್ಮ-ಜಾತಿ ವಿರುದ್ಧ ಯಾವುದೇ ಮುಲಾಜಿಲ್ಲದೇ ಸಾಮಾನ್ಯರಂತೆ ಕುಳಿತು ಹೋರಾಟ ಮಾಡುತ್ತಿದ್ದರು. ಅದನ್ನು ಖಂಡಿಸುತ್ತಿದ್ದರು. ಅಂತಹ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡಿದ್ದು ಬೇಸರವಾಗುತ್ತಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಾಹಿತಿ ಗಿರೀಶ್ ಕಾರ್ನಾಡ್ ಇನ್ನಿಲ್ಲ
ಗಿರೀಶ್ ಕಾರ್ನಡ್ ಅವರು ಯಾವುದೇ ಒಂದು ಜಾತಿಗೆ ಧರ್ಮಕ್ಕೆ ಕಟ್ಟುಬಿದ್ದಿರಲಿಲ್ಲ. ಅವರು ನಡೆದಿದ್ದೇ ದಾರಿ. ಅವರ ಸುಮಾರು ನಾಟಕಗಳು ಹಲವರಿಗೆ ಬದಲಾವಣೆಯ ಗಾಳಿ ಬೀಸಿದೆ. ಅದರಲ್ಲಿ ನಾನು ಕೂಡ ಒಬ್ಬಳು. ಇತ್ತೀಚೆಗೆ ಕಾರ್ನಾಡ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. 5-6 ತಿಂಗಳ ಹಿಂದೆ ಕಾರ್ಯಕ್ರಮದಲ್ಲಿ ಅವರನ್ನು ಭೇಟಿಯಾಗಿದ್ದೆ. ಅವರು ಬೇರೆಯವರ ಸಹಾಯದಿಂದ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಅವರು ನಮಗೆ ಉಸಿರಾಡಲು ಶುದ್ಧವಾದ ಗಾಳಿ ಸಿಗುತ್ತಿಲ್ಲ. ಅಷ್ಟು ಪರಿಸರ ಹಾಳಾಗಿದೆ ಎಂದು ಪರಿಸರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು ಎಂದರು.
ಗಿರೀಶ್ ಕಾರ್ನಡ್ ಅವರು ಬಹು ಅಂಗಾಂಗ ವೈಫಲ್ಯದಿಂದ ಕಳೆದ 1 ತಿಂಗಳಿನಿಂದ ಬಳಲುತ್ತಿದ್ದ ಸಾಹಿತಿ ಬೆಂಗಳೂರಿನ ಲ್ಯಾವೆಲ್ಲಾ ರಸ್ತೆಯ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ಮಹಾರಾಷ್ಟ್ರದಲ್ಲಿ ಜನಿಸಿರುವ ಇವರು ಕರ್ನಾಟಕದ ಶಿರಸಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದರು. ಬಳಿಕ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗಣಿತ ಮತ್ತು ಸಂಖ್ಯಾಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ನಂತರ ಇಂಗ್ಲೆಂಡ್ನಲ್ಲಿ ರಾಜ್ಯಶಾಸ್ತ್ರ, ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರ ಅಧ್ಯಯನ ಮಾಡಿದ್ದರು.
https://www.youtube.com/watch?v=rjR2qIhqevM