ಬೆಂಗಳೂರು: ಭಾರತೀಯ ಕಲೆ, ಸಂಗೀತ, ಸಾಹಿತ್ಯ, ನಾಟಕ, ನೃತ್ಯ, ನಟನೆ, ನಿರ್ದೇಶನ, ಚಿತ್ರಕಲೆ, ಜಾನಪದ ಸಂಸ್ಕೃತಿ, ಬಹುಭಾಷೆಗಳಲ್ಲಿ ಪಾಂಡಿತ್ಯ, ಪ್ರಗತಿಪರ ವಿಚಾರಧಾರೆ, ವ್ಯವಸ್ಥೆಯ ವಿರುದ್ಧ ಬಂಡೇಳುವ ಪ್ರವೃತ್ತಿ ಎಲ್ಲವನ್ನು ಒಳಗೊಂಡ ನಾಯಕ ಗಿರೀಶ್ ಕಾರ್ನಾಡರ ಅಂತ್ಯಕ್ರಿಯೆ ಬೈಯಪ್ಪನಹಳ್ಳಿ ಕಲ್ಲಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ನೆರವೇರಿತು.
ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 81 ವರ್ಷದ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದರು. ಗಿರೀಶ್ ಕಾರ್ನಾಡರ ಕೊನೆಯ ಆಸೆಯಂತೆ, ಯಾವುದೇ ಸರ್ಕಾರಿ ಗೌರವಗಳಿಲ್ಲದೇ, ಅಂತಿಮ ಮೆರವಣಿಗೆ, ಹಾರ ತುರಾಯಿಗಳು ಇಲ್ಲದೇ, ಅಂತಿಮ ವಿಧಿವಿಧಾನಗಳು ಇಲ್ಲದೇ ಬೈಯಪ್ಪನಹಳ್ಳಿ ಕಲ್ಲಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸಾಹಿತಿ ಅನಂತಮೂರ್ತಿ ಮತ್ತು ಇತರರ ಸಾವಿನ ವೇಳೆ ಎದುರಾದ ಟೀಕೆ, ವಿರೋಧಗಳಿಂದಾಗಿ ನೊಂದಿದ್ದ ಕಾರ್ನಾಡರು, ತಮ್ಮ ಅಂತ್ಯಕ್ರಿಯೆಗೆ ಯಾವುದೇ ಸರ್ಕಾರಿ ಗೌರವ ಬೇಡ ಅಂತ ಕುಟುಂಬದ ಸದಸ್ಯರಿಗೂ ತಿಳಿಸಿದ್ದರು. ಆದರೂ ಕಲ್ಲಹಳ್ಳಿ ವಿದ್ಯುತ್ ಚಿತಾಗಾರಕ್ಕೆ ಸರ್ಕಾರದ ಪರವಾಗಿ ಸಚಿವ ಡಿಕೆ ಶಿವಕುಮಾರ್, ದೇಶಪಾಂಡೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಇನ್ನುಳಿದಂತೆ ಕಾರ್ನಾಡರ ಆಪ್ತರಾದ ಬರಗೂರು ರಾಮಚಂದ್ರಪ್ಪ, ಬಿ ಜಯಶ್ರೀ, ಚಿರಂಜೀವಿ ಸಿಂಗ್, ಮರಳಸಿದ್ದಪ್ಪ, ಸುರೇಶ್ ಹೆಬ್ಳಿಕರ್ ಸೇರಿ ಹಲವು ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದರು.
https://www.youtube.com/watch?v=VFiqV4WJVGw