ಬೆಂಗಳೂರು: ಅಪ್ಪಟ ಕನ್ನಡದ ಶೀರ್ಷಿಕೆ ಮತ್ತು ಅಗಾಧವಾಗಿ ಹಬ್ಬಿಕೊಂಡಿರೋ ಕುತೂಹಲ… ಇಂಥಾದ್ದರ ಒಡ್ಡೋಲಗದಲ್ಲಿ ಗಿಣಿ ಹೇಳಿದ ಕಥೆ ಚಿತ್ರ ಇದೇ ತಿಂಗಳ 11ರಂದು ತೆರೆ ಕಾಣಲು ತಯಾರಾಗಿದೆ. ದೇವ್ ರಂಗಭೂಮಿ ನಿರ್ಮಾಣದ ಈ ಸಿನಿಮಾ ಹೊಸಾ ಅಲೆಯದ್ದು. ಏನಾದರೊಂದು ಕಮಾಲ್ ಸೃಷ್ಟಿಸುತ್ತೆ ಎಂಬ ಪ್ರೇಕ್ಷಕರ ಭರವಸೆ ತುಂಬಿದ ನಿರೀಕ್ಷೆ ಗಿಣಿ ಹೇಳಿದ ಕಥೆಯ ಮೇಲಿದೆ.
ಒಂದು ಚಿತ್ರವೆಂದ ಮೇಲೆ ಹೀಗೀಗೇ ಇರಬೇಕೆಂಬ ಅಳತೆಗೋಲುಗಳಿವೆ. ಅದನ್ನು ಮೀರಿಕೊಂಡ ಸಿನಿಮಾಗಳು ಗೆಲುವು ದಾಖಲಿಸಿದ್ದೂ ಇದೆ. ಅದೇ ಪಥದಲ್ಲಿರೋ ಚಿತ್ರ ಗಿಣಿ ಹೇಳಿದ ಕಥೆ. ಈ ಚಿತ್ರಕ್ಕೆ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಾಯಕನಾಗಿಯೂ ದೇವ್ ನಟಿಸಿದ್ದಾರೆ. ನಿರ್ಮಾಣದ ಭಾರವನ್ನೂ ಅವರೇ ಹೊತ್ತುಕೊಂಡಿದ್ದಾರೆ.
ಈ ಚಿತ್ರದಲ್ಲಿ ಎಂಭತ್ತಕ್ಕೂ ಹೆಚ್ಚು ಪಾತ್ರಗಳಿವೆ. ಆ ಅಷ್ಟೂ ಪಾತ್ರಗಳಿಗೂ ಅಳೆದೂ ತೂಗಿ ಹೊಂದುವಂಥಾ ನಟ ನಟಿಯರನ್ನೇ ದೇವ್ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಿದ್ದ ಮೇಲೆ ನಾಯಕಿ ಪಾತ್ರಕ್ಕೆ ಆಯ್ಕೆ ಮಾಡುವಾಗ ಎಚ್ಚರ ವಹಿಸದೇ ಇರ್ತಾರಾ? ಈ ಕಥೆಗೆ ಗುಂಗುರು ಕೂದಲಿನ, ಮುಗ್ಧ ಮುಖಭಾವ ಹೊಂದಿರೋ ಹುಡುಗಿ ಬೇಕಿತ್ತು. ಇದಕ್ಕಾಗಿ ದೇವ್ ಆಡಿಷನ್ ನಡೆಸಿದ್ದರು. ಅದರಲ್ಲಿ ಹತ್ತಾರು ಹುಡುಗಿಯರು ಪಾಲ್ಗೊಂಡಿದ್ದರು. ಅವೆಲ್ಲರ ಮಧ್ಯೆ ಗೀತಾಂಜಲಿ ನಾಯಕಿಯಾಗಿ ಆಯ್ಕೆಯಾಗಿದ್ದರು.
ಆಕೆ ಗುಂಗುರು ಕೂದಲು ಹೊಂದಿದ್ದಾರೆಂಬುದು ಮಾತ್ರವೇ ಆಯ್ಕೆಗೆ ಕಾರಣವಾಗಿರಲಿಲ್ಲ. ನಟಿಸೋ ಕಲೆಯೂ ಗೀತಾಂಜಲಿಗಿತ್ತು. ಅಂತೂ ದೇವ್ ಈ ಕಥೆ ಕೇಳುತ್ತಿದ್ದ ಕರ್ಲಿ ಕೂದಲ ಗಿಣಿಯನ್ನು ಹುಡುಕಿದ್ದೂ ಕೂಡಾ ಒಟ್ಟಾರೆ ಚಿತ್ರ ರೂಪುಗೊಂಡ ಶ್ರದ್ಧೆಗೆ ಕನ್ನಡಿಯಂತಿದೆ!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv