ಚಿಕ್ಕಬಳ್ಳಾಪುರ: ಕಳೆದ ಬಾರಿಯ ಚುನಾವಣೆಯಲ್ಲಿ ಕುಕ್ಕರ್ ಕೊಟ್ಟು ಮಹಿಳಾ ಮತದಾರರ ಮನ ಗೆದ್ದಿದ್ದ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಡಾ ಕೆ ಸುಧಾಕರ್, ಈ ಬಾರಿಯೂ ಮಹಿಳಾ ಮತದಾರರ ಮನವೊಲಿಕೆಗೆ ಇಳಿದಿದ್ದಾರೆ.
ಕ್ಷೇತ್ರದ ಮಹಿಳಾ ಮತದಾರರಿಗೆ ತಮಿಳುನಾಡಿನ ಓಂ ಶಕ್ತಿ ದೇವಸ್ಥಾನಕ್ಕೆ ಪ್ರವಾಸ ಭಾಗ್ಯ ಆಯೋಜನೆ ಮಾಡುವ ಮೂಲಕ ಮತದಾರರನ್ನು ಸೆಳೆಯಲು ಶಾಸಕ ಡಾ ಕೆ ಸುಧಾಕರ್ ಮುಂದಾಗಿದ್ದಾರೆ.
ಮಹಿಳಾ ಮತದಾರರಿಗೆ ಓಂ ಶಕ್ತಿ ದೇವಸ್ಥಾನಕ್ಕೆ ಪ್ರವಾಸ ಭಾಗ್ಯ ಕಲ್ಪಿಸಿರುವ ಶಾಸಕ ಡಾ ಕೆ ಸುಧಾಕರ್ ಅವರು 55 ಕೆಎಸ್ಆರ್ಟಿಸಿ ಬಸ್ ಗಳನ್ನ ಬುಕ್ ಮಾಡಿದ್ದು, ಕ್ಷೇತ್ರದ 3000 ಮಂದಿ ಮಹಿಳೆಯರು ಓಂ ಶಕ್ತಿ ದೇವಸ್ಥಾನಕ್ಕೆ ಪ್ರವಾಸ ಹೊರಟಿದ್ದಾರೆ. ಬೆಳ್ಳಂಬೆಳಗ್ಗೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಶ್ರೀ ವಿರಾಂಜನೇಯ ಸ್ವಾಮಿ ದೇಗುಲದ ಬಳಿ ಜಮಾಯಿಸಿದ ಸಾವಿರಾರು ಮಂದಿ ಮಹಿಳೆಯರು ಓಂ ಶಕ್ತಿ ದೇವಸ್ಥಾನಕ್ಕೆ ಪ್ರವಾಸ ಹೊರಟರು.
ಪ್ರವಾಸಕ್ಕೆ ಹೊರಟವರಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಪ್ರವಾಸ ಹೊರಡೋದಕ್ಕೂ ಮುನ್ನ ಸ್ಥಳಕ್ಕೆ ಬಂದ ಶಾಸಕ ಡಾ ಕೆ ಸುಧಾಕರ್ ಹಾಗೂ ಕಾಂಗ್ರೆಸ್ ಮುಖಂಡರು ಪ್ರವಾಸಕ್ಕೆ ಹೊರಟವರಿಗೆ ಬೀಳ್ಕೊಡುಗೆ ನೀಡಿದ್ರು. ಶಾಸಕ ಸುಧಾಕರ್ ಕೂಡ ನಾಳೆ ಓಂ ಶಕ್ತಿ ದೇವಸ್ಥಾನಕ್ಕೆ ಪ್ರವಾಸ ಮಾಡುವುದಾಗಿ ತಿಳಿಸಿದ್ದಾರೆ.