ಬೆಂಗಳೂರು: ದೇಶ ಕಷ್ಟದ ಕಾಲದಲ್ಲಿ ಇರುವಾಗ ಹೀಗೆ ಮಾಡಬಾರದಿತ್ತು ಎಂದು ಗುಲಾಂ ನಬಿ ಆಜಾದ್ ರಾಜೀನಾಮೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುಲಾಂ ನಬಿ ಆಜಾದ್ ರಾಜೀನಾಮೆ ದುಃಖದ ಸುದ್ದಿ. ನಾವೆಲ್ಲ ದೇಶಕ್ಕಾಗಿ ಹೋರಾಟ ಮಾಡುವಾಗ 600 ಜನ ನಾಯಕರು ಉದಯಪುರದಲ್ಲಿ ಕುಳಿತು ಚರ್ಚೆ ಮಾಡಿದ್ದೆವು, ತೀರ್ಮಾನ ಮಾಡಿದ್ದೆವು. ಆಗ ಗುಲಾಂ ನಬಿ ಆಜಾದ್ ಕೂಡ ಇದೆಲ್ಲದರಲ್ಲಿ ಪಾಲುದಾರರಾಗಿದ್ದರು ಎಂದು ನೆನಪು ಮೆಲುಕು ಹಾಕಿಕೊಂಡರು.
ಐದು ಪೇಜ್ ಪತ್ರವನ್ನೂ ಕೂಡ ಬರೆದಿದ್ದಾರೆ. 50 ವರ್ಷಗಳ ಕಾಲ ಎಲ್ಲ ನಿರ್ಧಾರ ತೆಗೆದುಕೊಳ್ಳುವ ಟೀಂನಲ್ಲಿ ಅವರೇ ಕೆಲಸ ಮಾಡಿದ್ದರು. ಇವತ್ತು ಇಂಥ ತೀರ್ಮಾನ ಮಾಡಿದ್ದಕ್ಕೆ ಏನು ಹೆಸರಿಡಬೇಕೋ ನೀವೇ ಹೇಳಿ. ಹೆತ್ತ ತಾಯಿಗೆ ದ್ರೋಹ ಮಾಡಿದ್ದಾರೆ ಎಂದು ಡಿಕೆಶಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ – ಸರ್ಕಾರದ ವಿವೇಚನೆಗೆ ಬಿಟ್ಟ ಹೈಕೋರ್ಟ್
ಗುಲಾಂ ನಬಿ ಆಜಾದ್ಗೆ ಅವರೇ ಎಲ್ಲವನ್ನೂ ಪಾಲನೆ ಮಾಡುವುದಕ್ಕೆ ಅವಕಾಶ ಇತ್ತು. ಕಾಂಗ್ರೆಸ್ ಪಕ್ಷ 40 ವರ್ಷ ಅವರಿಗೆ ಅಧಿಕಾರ ಕೊಟ್ಟಿದೆ. ಕಾಂಗ್ರೆಸ್ ಪಕ್ಷವೇ ಅವರಿಗೆ ಎಲ್ಲ ಕೊಟ್ಟಿದೆ. ಗುಲಾಂ ನಬಿ ಆಜಾದ್ ಅಂತ ಅವರಿಗೆ ಹೆಸರು ಬರುವುದಕ್ಕೆ ಕಾಂಗ್ರೆಸ್ ಪಾರ್ಟಿ, ನೆಹರೂ ಫ್ಯಾಮಿಲಿ, ಗಾಂಧಿ ಫ್ಯಾಮಿಲಿ ಕಾರಣ ಎಂದರು.
ಇಷ್ಟು ದೊಡ್ಡ ಅಧಿಕಾರ ಅನುಭವಿಸಿ ಹೆಸರು ಪಡೆದುಕೊಂಡರು. ಈಗ ರಾಹುಲ್ ಗಾಂಧಿ ಸರಿ ಇಲ್ಲ ಅನ್ನುವವರು ಯಾಕೆ ರಾಹುಲ್ ರಾಜೀನಾಮೆ ಕೊಡುವಾಗ ಪ್ರತಿಭಟನೆ ಮಾಡಲಿಲ್ಲ?. ಸೋನಿಯಾ ಗಾಂಧಿಯವರು ಕೊಡುವುದಕ್ಕೆ ಇನ್ನೇನು ಉಳಿದಿತ್ತು. ನಿಮಗೆ ಗಾಂಧಿ ಫ್ಯಾಮಿಲಿ ಕೊಡುವುದಕ್ಕೆ?. ಹೊಸ ಜನರೇಷನ್ ಆಲೋಚನೆ ಏನಿದೆ ಗುಲಾಂಗೆ ಗೊತ್ತಿತ್ತಾ ಎಂದು ಪ್ರಶ್ನಿಸಿದರು.
ಯುವಕರು ಹೊಸ ಆಲೋಚನೆ ಮಾಡ್ತಿದ್ದಾರೆ, ಹೊಸ ಕಾಲಕ್ಕೆ ಹೋಗಿದೆ. ಭಾರತವನ್ನು ಉಳಿಸಬೇಕಾದವರು, ಭಾರತ್ ಜೋಡೋ ಯಾತ್ರೆ ಮಾಡಬೇಕು ಅಂತ ನೀವೇ ಹೇಳಿದವರು. ಇದು ದುರದೃಷ್ಟಕರ, ಹಿರಿತನಕ್ಕೆ ಮಾದರಿ ಆಗಿರಬೇಕಾಗಿತ್ತು ಗುಲಾಂ. ಕಾಂಗ್ರೆಸ್ ನ ಮುಳುಗಿಸುವುದಕ್ಕೆ ಸಾಧ್ಯ ಇಲ್ಲ, ಲಕ್ಷಾಂತರ ಜನರನ್ನ ಕಾಂಗ್ರೆಸ್ ತಯಾರು ಮಾಡಿದೆ. ಕಾಂಗ್ರೆಸ್ ಇರಲಿಲ್ಲ ಅಂದಿದ್ದರೆ ಇಡೀ ದೇಶ ಇಬ್ಭಾಗ ಆಗ್ತಿತ್ತು ಎಂದು ಡಿಕೆಶಿ ಹೇಳಿದರು.