ಚಿಕ್ಕಬಳ್ಳಾಪುರ: ಡಿಸೆಂಬರ್ 26ರಂದು ಘಟಿಸಲಿರುವ ಸೂರ್ಯ ಗ್ರಹಣದ ದಿನ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಶ್ರೀ ಭೋಗನಂದೀಶ್ವರನ ದೇವಾಲಯ ಬಂದ್ ಆಗಲಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳಗ್ಗೆ 08.05 ನಿಮಿಷಕ್ಕೆ ಗ್ರಹಣ ಸ್ಪರ್ಶ ಕಾಲ ಆರಂಭವಾಗಲಿದ್ದು, 9.30 ನಿಮಿಷಕ್ಕೆ ಮಧ್ಯ ಕಾಲ ಸೇರಿದಂತೆ 11.05 ನಿಮಿಷಕ್ಕೆ ಗ್ರಹಣ ಮೋಕ್ಷಕಾಲವಾಗಲಿದೆ. ಹೀಗಾಗಿ ಸೂರ್ಯ ಗ್ರಹಣದ ಹಿಂದಿನ ದಿನ ಡಿಸೆಂಬರ್ 25ರ ರಾತ್ರಿ ಪೂಜೆ ನಂತರ ದೇವಾಲಯದ ಬಾಗಿಲು ಬಂದ್ ಆಗಲಿದೆ.
ಎಂದಿನಂತೆ ಡಿಸೆಂಬರ್ 26ರ ಮುಂಜಾನೆ ದೇವಾಲಯದ ಬಾಗಿಲು ತೆರೆಯುವುದಿಲ್ಲ. ಗ್ರಹಣ ಮುಕ್ತಾಯದ ನಂತರ ದೇವಾಲಯದಲ್ಲಿ ಶುದ್ಧಿ ಕಾರ್ಯಗಳನ್ನು ನೆರವೇರಿಸಿ ತದನಂತರ 1 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಾಗುವುದು ಎಂದು ಚಿಕ್ಕಬಳ್ಳಾಪುರ ತಹಶೀಲ್ದಾರ್ ನರಸಿಂಹಮೂರ್ತಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಇನ್ನೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಮಣ್ಯ ದೇವಾಲಯವೂ ಸಹ ಆ ದಿನ ಬಂದ್ ಆಗಲಿದೆ. ಗ್ರಹಣ ಮುಕ್ತಾಯದ ನಂತರ ದೇವಾಲಯದಲ್ಲಿ ಶುದ್ಧಿ ಕಾರ್ಯ ನೆರವೇರಿಸಿದ ನಂತರ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸುವುದಾಗಿ ದೇವಾಲಯದ ಕಾರ್ಯ ನಿರ್ವಾಹಕಾಧಿಕಾರಿ ಕೃಷ್ಣಪ್ಪ ಪಬ್ಲಿಕ್ ಟಿವಿಗೆ ತಿಳಿಸಿದರು.