ರಾಯಚೂರು: ರಾಯಚೂರು ನಗರಸಭೆ ಸಭಾಂಗಣದಲ್ಲಿ ನಡೆದ ಮಹಾ ಸಾಮಾನ್ಯ ಸಭೆ ಸದಸ್ಯರ ಕೂಗಾಟ, ಹಾರಾಟಗಳಿಗೆ ಬಲಿಯಾಯಿತು. ಸಭೆ ಆರಂಭದಿಂದಲೂ ವೈಯಕ್ತಿಕ ಸಮಸ್ಯೆಗಳನ್ನು ತೋಡಿಕೊಂಡ ಸದಸ್ಯರು ಅಧಿಕಾರಿಗಳು ಮಾತು ಕೇಳ್ತಿಲ್ಲಾ ಎಂದು ಹರಿಹಾಯ್ದರು. ನಗರಸಭೆಯಲ್ಲಿ ಸದಸ್ಯರನ್ನು ಕೇಳುವವರಿಲ್ಲ ಅಂತ ತಮ್ಮ ಗೋಳು ತೋಡಿಕೊಂಡರು.
ಸದಸ್ಯೆ ಸೀಮಾ ನದಾಫ್ ತಮ್ಮ ವಾರ್ಡಿನ ಕಬರಸ್ತಾನದಲ್ಲಿ ತಮಗೇ ತಿಳಿಯದಂತೆ ಶೌಚಾಲಯ ನಿರ್ಮಿಸಿದ್ದಾರೆ ಅಂತ ಕೂಗಾಡಿದರು. ಇತರೆ ಸದಸ್ಯರು ಬೆಂಬಲ ಕೊಡದಿದ್ದಕ್ಕೆ ಖುರ್ಚಿಯಿಂದ ಎದ್ದು ಅಧ್ಯಕ್ಷೆ, ಉಪಾಧ್ಯಕ್ಷ, ಪೌರಾಯುಕ್ತರ ವಿರುದ್ಧ ಆರೋಪಿಸಿ ಪ್ರತಿಭಟನೆ ನಡೆಸಿದರು. ಗೊತ್ತುವಳಿಗಳು ಚರ್ಚಿಸದೇ ಎಸ್ ಪಾಸ್ ಆಗುತ್ತಿವೆ ಅಂತ ಸದಸ್ಯ ನರಸಪ್ಪ ಟೇಬಲ್ ಹಾರಿ ಸಭಾಂಗಣದ ಬಾವಿಗೆ ಇಳಿದು ನಗರಸಭೆ ಉಪಾಧ್ಯಕ್ಷ ಜಯಣ್ಣ ವಿರುದ್ಧ ಕೂಗಾಡಿ ಗೊಂದಲ ಸೃಷ್ಟಿ ಮಾಡಿದರು.
ಇನ್ನೂ ಸದಸ್ಯ ಮೆಹಬೂಬ್ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದೀಪಾಲಂಕಾರಕ್ಕೆ ನಗರಸಭೆಯಿಂದ ನೀಡಲಾದ 3 ಲಕ್ಷ 90 ಸಾವಿರ ರೂಪಾಯಿ ಲೆಕ್ಕ ತೋರಿಸುವಂತೆ ಆಗ್ರಹಿಸಿ ಕಳ್ಳಲೆಕ್ಕಗಳಲ್ಲಿ ನಗರಸಭೆ ಮುಳುಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರೆಲ್ಲರೂ ಪಕ್ಷಭೇದ ಮರೆತು ನಗರಸಭೆ ಸದಸ್ಯರಿಗೆ ಬೆಲೆ ಸಿಗುತ್ತಿಲ್ಲ ಅಂತ ಕೂಗಾಡಿದರು. ಗದ್ದಲ, ಗಲಾಟೆಯಲ್ಲಿ 41 ಗೊತ್ತುವಳಿಗಳನ್ನು ಎಸ್ ಪಾಸ್ ಮೂಲಕ ಅಂಗೀಕರಿಸಲಾಯಿತು.
ನಗರದಲ್ಲಿ ದಿನೇ ದಿನೇ ಗಂಭೀರವಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆ ಕುರಿತಾಗಲಿ, ಅಸಮರ್ಪಕವಾಗಿ ಸಾಗಿರುವ ಒಳಚರಂಡಿ ಕಾಮಗಾರಿಯ ತೊಂದರೆ, ರಸ್ತೆ, ಶೌಚಾಲಯ, ವಿದ್ಯುತ್ ದೀಪದ ಬಗ್ಗೆ ಗಂಭೀರ ಚರ್ಚೆ ನಡೆಯದೇ ಬರೀ ಗಲಾಟೆಯಲ್ಲಿ ಸಭೆ ಮುಕ್ತಾಯಗೊಂಡಿತು.