ಬೆಂಗಳೂರು: ಕಸದ ಡಂಪಿಂಗ್ ಯಾರ್ಡ್ ನಲ್ಲಿ ಸ್ಫೋಟ ಸಂಭವಿಸಿ ಭೂಮಿ ನಡುಗಿದ ಘಟನೆ ಬೆಂಗಳೂರಿನ ಹೆಚ್ಎಎಲ್ ನಲ್ಲಿ ನಡೆದಿದೆ.
ಇಂದು ಸಂಜೆ 4.30 ರ ಸುಮಾರಿನಲ್ಲಿ ಎಲ್.ಎನ್. ಶಾಸ್ತ್ರಿ ನಗರದಲ್ಲಿ ಈ ಸ್ಫೋಟ ಸಂಭವಿಸಿದ್ದು ಸ್ಥಳೀಯರಲ್ಲಿ ನಡುಕವನ್ನು ಉಂಟುಮಾಡಿತ್ತು. ಹೆಚ್ಎಎಲ್ ಕಂಪನಿ ಎಂಟು ಎಕರೆ ಪ್ರದೇಶದಲ್ಲಿ ಕ್ವಾಟ್ರಸ್ ನಿರ್ಮಿಸುತ್ತಿದ್ದು, ಅದರ ಕಾರ್ನರ್ ಸೈಟ್ ನಲ್ಲಿ ಕಳೆದ ಎರಡು-ಮೂರು ತಿಂಗಳ ಹಿಂದೆ ಬಂಡೆ ಸ್ಫೋಟಿಸಲು ಜಿಲೆಟಿನ್ ಬಳಕೆ ಮಾಡಿದ್ದಾರೆ. ನಂತರ ಅದರ ಮೇಲೆಯೇ ಕಾರ್ಮಿಕರು ಕಸ ಹಾಕುತ್ತಿದ್ದು ಇಂದು ಸಂಜೆ ಅದೇ ಸ್ಥಳದಲ್ಲಿ ಈ ಸ್ಫೋಟ ಸಂಭವಿಸಿದೆ.
ಸ್ಫೋಟದ ತೀವ್ರತೆಗೆ ಒಂದು ಕಿ.ಮೀ ಭೂಮಿ ಕಂಪಿಸಿದಂತಾಗಿದ್ದು, ಸ್ಥಳದಲ್ಲಿದ್ದ ಸಿಂಟೆಕ್ಸ್ ನೀರಿನ ಟ್ಯಾಂಕ್ ಕೂಡ ಸ್ಫೋಟಗೊಂಡಿದೆ. ಈ ವೇಳೆ ಸ್ಥಳದ ಅಕ್ಕಪಕ್ಕದ ಮನೆಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ.
ಹೆಚ್ಎಎಲ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸ್ಥಳಕ್ಕೆ ಬಾಂಬ್ ನಿಷ್ಕ್ರೀಯದಳ ಸಿಬ್ಬಂದಿಯೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ಮಾತನಾಡಿ, ಎಚ್ಎಎಲ್ ಆವರಣದ ಎಲ್ ಬಿ ಶಾಸ್ತಿ ನಗರದಲ್ಲಿ ಘಟನೆ ಸಂಭವಿಸಿದ್ದು, ಈ ಹಿಂದೆ ಕಟ್ಟಡ ನಿರ್ಮಿಸುತಿದ್ದ ಕಾರ್ಮಿಕರ ನಿರ್ಲಕ್ಷ್ಯದಿಂದ ಸ್ಫೋಟ ಸಂಭವಿಸಿದೆ ಎಂದು ಸ್ಪಷ್ಟನೆ ನೀಡಿದರು.
ಬಳಿಕ ಸ್ಥಳಕ್ಕೆ ಭೇಟಿ ನೀಡಿದ್ದ ವಿಜ್ಞಾನ ನಗರ ವಾರ್ಡ್ ಕಾರ್ಪೊರೇಟರ್ ಎಸ್.ಜಿ.ನಾಗರಾಜ್ ಮಾತನಾಡಿ, ಎಚ್ಎಎಲ್ ಅಪಾಟ್ರ್ಮೆಂಟ್ ಕಟ್ಟುವಾಗ ಜಿಲೆಟಿನ್ ಕಡ್ಡಿಗಳಿಂದ ಬಂಡೆಗಳನ್ನು ಸ್ಫೋಟಿಸಿದೆ. ಆದರೆ ಈ ಬಗ್ಗೆ ಬಿಬಿಎಂಪಿಯಿಂದ ಅನುಮತಿ ಪತ್ರ ಪಡೆದಿಲ್ಲ. ನಿಯಮ ಉಲ್ಲಂಘಿಸಿ 300 ಕ್ಕೂ ಹೆಚ್ಚು ಕಾರ್ಮಿಕರನ್ನು ಬಳಸಲಾಗುತ್ತಿದೆ. ಕೂಡಲೇ ಬಿಬಿಎಂಪಿಯಿಂದ ಎಚ್ಎಎಲ್ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು. ಅಪಾಟ್ರ್ಮೆಂಟ್ ನಿರ್ಮಾಣ ಬಗ್ಗೆ ತನಿಖೆ ನಡೆಸಲು ಸೂಚಿಸುತ್ತೇನೆ ಎಂದು ಹೇಳಿದರು.