ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಜೆಡಿಎಸ್ನ ಮಧು ಬಂಗಾರಪ್ಪ ಪರವಾಗಿ ಅವರ ಸಹೋದರಿ ಗೀತಾ ಶಿವರಾಜ್ ಕುಮಾರ್ ಪ್ರಚಾರ ಆರಂಭಿಸಿದ್ದಾರೆ.
ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ಪ್ರಚಾರ ಮಾಡಲಿರುವ ಗೀತಾ ಇಂದು ಪುರದಾಳು, ಮಲೆಶಂಕರ ಇನ್ನಿತರ ಪ್ರದೇಶಗಳಲ್ಲಿ ಪ್ರಚಾರ ಮಾಡಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆಗಿ ಸೋಲುಂಡ ಗೀತಾ ಅವರು ಈ ಬಾರಿ ತಮ್ಮನ ಪರವಾಗಿ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಗೀತಾ ಶಿವರಾಜ್ ಕುಮಾರ್, ಮೊದಲ ಹಂತವಾಗಿ ಮೂರು ದಿನಗಳ ಕಾರ್ಯ ಪ್ರಚಾರ ಕಾರ್ಯದಲ್ಲಿ ತೊಡಗುತ್ತೇನೆ. ಈ ಬಾರಿ ಮೈತ್ರಿ ಸರ್ಕಾರದಿಂದ ಸಹೋದರ ಚುನಾವಣೆಗೆ ನಿಂತಿದ್ದಾರೆ. ಕಾಂಗ್ರೆಸ್ ಅವರು ಬೆಂಬಲ ನೀಡಿದ್ದು, ಗೆಲ್ಲುವ ವಿಶ್ವಾಸ ಇದೆ. ಕಳೆದ ವಿಧಾನಸಭಾ ಚುನಾವಣೆ ಅಲ್ಪ ಅಂತರದಲ್ಲಿ ಸೋಲುಂಟಾಗಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ನೀಡಿದ್ದ ಆಶ್ವಾಸನೆ ಈಡೇರಿಸಿಲ್ಲ. ಮೈತ್ರಿ ಸರ್ಕಾರದ ಸಾಧನೆಯನ್ನು ಪ್ರಮುಖ ವಿಷಯವಾಗಿ ಪ್ರಚಾರ ಮಾಡಿ ಮತಯಾಚನೆ ಮಾಡುತ್ತೇನೆ. ತಂದೆ ಬಂಗಾರಪ್ಪನವರ ಕೊನೆಯ ಚುನಾವಣೆಯ ಸೋಲನ್ನು ಈ ಬಾರಿ ಗೆಲುವಾಗಿ ಪರಿವರ್ತನೆ ಮಾಡುತ್ತೇವೆ ಎಂದು ಹೇಳಿದರು.
ಮೊದಲ ಹಂತದಲ್ಲಿ ಮೂರು ದಿನಗಳ ಪ್ರಚಾರ ಕಾರ್ಯ ಶಿವಮೊಗ್ಗ, ಸಾಗರ ಸೇರಿದಂತೆ ಹಲವು ಪ್ರದೇಶದಲ್ಲಿ ನಡೆಯಲಿದೆ ಎಂದರು. ಇದೇ ವೇಳೆ ಶಿವಣ್ಣ ಅವರು ಭೇಟಿ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಮೊದಲೇ ಕವಚ ಸಿನಿಮಾದ ಪ್ರಚಾರ ಸಭೆ ನಿಗದಿಯಾಗಿತ್ತು. ಸಿನಿಮಾ ಪ್ರಚಾರಕ್ಕೆ ಮಾತ್ರ ಅವರು ಆಗಮಿಸಿದ್ದು, ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ತಿಳಿಸಿದರು.