ಕೊಪ್ಪಳ: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಪ್ರತಿ ವರ್ಷದ ಪರಂಪರೆಯಂತೆ ವಿಜಯದ ಸಂಕೇತವಾಗಿ ಗವಿಮಠದ ಆವರಣದಲ್ಲಿ ಕಲರ್ಫುಲ್ ಪಟಾಕಿಗಳು ಬಾನಂಗಳಕ್ಕೆ ಚಿಮ್ಮಿ ಚಿತ್ತಾರ ಮೂಡಿಸಿ ಜನರನ್ನು ರಂಜಿಸಿದವು.
ಕೊಪ್ಪಳದ ಗವಿಮಠದ ಮಹಾರಥೋತ್ಸವ ನೆರವೇರಿಸಿ, ಪಟಾಕಿ ಸಿಡಿಸುವ ಸಂಪ್ರದಾಯವೂ ಈ ಹಿಂದಿನಿಂದಲೂ ನಡೆದು ಬಂದಿದೆ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತರು ಕೈಲಾಸ ಮಂಟಪದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶರಣರ ಹಿತನುಡಿ ಆಲಿಸುತ್ತಾರೆ. ಬಳಿಕ ಮಠದ ಆವರಣದಲ್ಲಿ ಕಲರ್ಫುಲ್ ಪಟಾಕಿಗಳನ್ನು ಸಿಡಿಸಲಾಗುತ್ತದೆ.
ಅದರಂತೆಯೇ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳ ಆಶೀರ್ವಚನ ಮುಗಿಯುತ್ತಿದ್ದಂತೆ ಗವಿಸಿದ್ದೇಶ್ವರ ಕಾಲೇಜಿನ ಕಟ್ಟಡದ ಮೇಲಿಂದ ಬಾನೆತ್ತರಕ್ಕೆ ಕಲರ್ಫುಲ್ ಪಟಾಕಿಗಳು ಸಿಡಿದು, ಹೂವಿನಾಕಾರದ ಬಗೆ ಬಗೆಯ ಚಿತ್ತಾರ ಮೂಡಿಸುತ್ತಾ ಜನರನ್ನು ರಂಜಿಸಿದವು. ಬಾನಂಗಳದಲ್ಲಿ ರಾಕೆಟ್ನಂತೆ ಚಿಮ್ಮುತ್ತಿದ್ದ ಪಟಾಕಿಗಳು ಜನರನ್ನು ಮೋಡಿ ಮಾಡುತ್ತಿದ್ದವು.