ನವದೆಹಲಿ: ನಿಮ್ಮ ಗೀಳಿಗಾಗಿ ಅನೇಕ ಬಾರಿ ಸಿಕ್ಸ್ ಸಿಡಿಸಿದ್ದೀರಿ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್, ಎಂ.ಎಸ್.ಧೋನಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಏಪ್ರಿಲ್ 2 ಮೈಲಿಗಲ್ಲು, ಅಚ್ಚಳಿಯದ ನೆನಪಾಗಿ ಉಳಿದಿದೆ. ಇದೇ ದಿನ ಭಾರತವು 28 ವರ್ಷಗಳ ನಂತರ ವಿಶ್ವಕಪ್ ಗೆದ್ದಿತು. ಎಂ.ಎಸ್.ಧೋನಿ ಮತ್ತು ಗೌತಮ್ ಗಂಭೀರ್ ಅವರು 2011ರ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ತಂಡದ ಗೆಲುವಿಗೆ ಕೊಡುಗೆ ನೀಡಿದ್ದರು. ದೇಶವು ಗುರುವಾರ ಐತಿಹಾಸಿಕ ದಿನದ ಒಂಬತ್ತನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಭಾರತೀಯ ಕ್ರಿಕೆಟ್ನ ಸುವರ್ಣ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಿದೆ.
ಶ್ರೀಲಂಕಾ ಕ್ರಿಕೆಟ್ ತಂಡದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರನ್ನು ಎದುರಿಸಲು ಯುವರಾಜ್ ಸಿಂಗ್ ಬದಲು ಐದನೇ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್ ಇಳಿದರು. ಧೋನಿ ಈ ನಿರ್ಧಾರವನ್ನು ಈಗಲೂ ಅನೇಕರು ಶ್ಲಾಘಿಸುತ್ತಾರೆ. ಫೈನಲ್ ಪಂದ್ಯದಲ್ಲಿ ಎಂ.ಎಸ್.ಧೋನಿ ಅಜೇಯ 91 ರನ್ ಚಚ್ಚಿದ್ದರು. ಕೊನೆಗೆ ಸಿಕ್ಸ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಇತ್ತ ಗೌತಮ್ ಗಂಭೀರ್ ಕೂಡ ಸಚಿನ್ ತೆಂಡೂಲ್ಕರ್ ಮತ್ತು ವಿರೇಂದ್ರ ಸೆಹ್ವಾಗ್ ಅವರ ಆರಂಭಿಕ ಸೋಲಿನ ನಂತರ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದ್ದರು. ಈ ವೇಳೆ ಗಂಭೀರ್ 97 ರನ್ ಗಳಿಸಿದ್ದರು.
ಟೂರ್ನಿಯುದ್ದಕ್ಕೂ ಹಾಗೂ ಫೈನಲ್ ಪಂದ್ಯದಲ್ಲಿ ಪ್ರತಿಯೊಬ್ಬರ ಕೊಡುಗೆ ನಿರ್ಣಾಯಕವಾಗಿದ್ದರೂ ಎಂ.ಎಸ್.ಧೋನಿ ಅವರ ಫಿನಿಶಿಂಗ್ ಸಿಕ್ಸ್ ಹೆಚ್ಚು ಮೆಚ್ಚುಗೆ ಗಳಿಸಿಕೊಂಡಿತ್ತು. ಇದೇ ವಿಚಾರವಾಗಿ ಗಂಭೀರ್ ಕೆಂಡಾಮಂಡಲವಾಗಿದ್ದಾರೆ.
Just a reminder @ESPNcricinfo: #worldcup2011 was won by entire India, entire Indian team & all support staff. High time you hit your obsession for a SIX. pic.twitter.com/WPRPQdfJrV
— Gautam Gambhir (@GautamGambhir) April 2, 2020
ಈ ಕುರಿತು ಟ್ವೀಟ್ ಮಾಡಿರುವ ಗಂಭೀರ್, ‘ಕೇವಲ ಒಂದು ಜ್ಞಾಪನೆ: ವಿಶ್ವಪಕ್ 2011 ಅನ್ನು ಇಡೀ ಭಾರತ, ಇಡೀ ಭಾರತೀಯ ತಂಡ ಮತ್ತು ಬೆಂಬಲ ನೀಡಿದ ಎಲ್ಲಾ ಸಿಬ್ಬಂದಿ ಗೆದ್ದಿದ್ದಾರೆ. ನಿಮ್ಮ ಗೀಳಿಗಾಗಿ ಅನೇಕ ಬಾರಿ ಸಿಕ್ಸ್ ಸಿಡಿಸಿದ್ದೀರಿ’ ಎಂದು ಖಾರವಾಗಿ ಬರೆದು ಟ್ವೀಟ್ ಮಾಡಿದ್ದಾರೆ.