ಬೆಂಗಳೂರು: ವಿಚಾರವಾದಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ(ವಿಶೇಷ ತನಿಖಾ ತಂಡ) ಈಗಾಗಲೇ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.
ರಾಜರಾಜೇಶ್ವರಿನಗರದಲ್ಲಿ ಬಾಡಿಗೆದಾರರ ವಿವರ ಕಲೆಹಾಕುತ್ತಿದ್ದು, ಗೌರಿ ಲಂಕೇಶ್ ಹತ್ಯೆಯ ಬಳಿಕ ಮನೆ ಖಾಲಿ ಮಾಡಿದವರ ಹಾಗೂ ಲಾಡ್ಜ್ ಗಳಲ್ಲಿ ವಾಸ್ತವ್ಯ ಹೂಡಿದ್ದವರ ವಿವರಗಳನ್ನು ಸಂಗ್ರಹಿಸುತ್ತಿದೆ. ಇದಕ್ಕಾಗಿ ಕರಪತ್ರ ಮುದ್ರಿಸಿ ಹಾಗೂ ದಿನಪತ್ರಿಕೆಗಳ ಮೂಲಕ ಮನೆ ಮಾಲೀಕರಿಗೆ, ಲಾಡ್ಜ್ ಮಾಲೀಕರಿಗೆ ವಿವರ ನೀಡುವಂತೆ ಸೂಚಿಸಿದೆ.
ಅಲ್ಲದೇ ಇ-ಮೇಲ್, ಮೊಬೈಲ್ ಸಂಖ್ಯೆ ಇರುವ ಕರಪತ್ರ ಮುದ್ರಿಸಿರುವ ಎಸ್ಐಟಿ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಿದೆ. ಪೊಲೀಸ್ ಸೂಚನೆ ಅಂತ ಸುಮಾರು 22 ಸಾವಿರ ಪಾಂಪ್ಲೆಟ್ ಮುದ್ರಿಸಿ ಹಂಚಿರುವ ಪೊಲೀಸರು ಅಪಾರ್ಟ್ಮೆಂಟ್ಗಳು, ಬಾಡಿಗೆ ಮನೆಗಳು, ಹೋಟೆಲ್, ಲಾಡ್ಜ್, ಪಿಜಿಗಳು, ಹಾಸ್ಟೆಲ್, ರೆಸಾರ್ಟ್, ದೇವಾಲಗಳ ವಸತಿ ಗೃಹಗಳು ಹಾಗೂ ಯಾವುದೇ ಧಾರ್ಮಿಕ ವಸತಿ ಗೃಹಗಳು ಇತ್ಯಾದಿಗಳಲ್ಲಿ ಖಾಲಿ ಮಾಡಿಕೊಂಡು ಹೋಗಿರುವವರ ಮಾಹಿತಿ ನೀಡಲು ಸೂಚನೆ ನೀಡಿದೆ.