ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬಗ್ಗೆ ಗೃಹ ಸಚಿವ ರಾಮಲಿಂಗಾರೆಡ್ಡಿಯವರಿಗೆ ನಗರದ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರು ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದಾರೆ.
ವರದಿಯಲ್ಲಿ ಏನಿದೆ?
ಸಂಜೆ ಗಾಂಧಿಬಜಾರ್ ಕಛೇರಿಯಿಂದ ಮೈಸೂರು ರಸ್ತೆ ಮೂಲಕ ಗೌರಿ ಲಂಕೇಶ್ ಕಾರಿನಲ್ಲಿ ಮನೆಗೆ ಬಂದಿದ್ದಾರೆ. ಸುಮಾರು ಒಂದು ಕಾಲು ಗಂಟೆ ಕಾಲ ಕಾರು ಡ್ರೈವ್ ಮಾಡಿದ್ದಾರೆ. ಈ ಸಮಯದಲ್ಲಿ ಗೌರಿ ಲಂಕೇಶ್ ಮೊಬೈಲ್ ಪರಿಶೀಲನೆ ನಡೆಸಲಾಗಿದ್ದು, ಟವರ್ ಪರಿಶೀಲನೆ ವೇಳೆ ಗೌರಿ ಲಂಕೇಶ್ ಅವರನ್ನ ಹಂತಕರು ಹಿಂಬಾಲಿಸಿಕೊಂಡು ಬಂದಿರವ ಮಾಹಿತಿಯನ್ನು ಪೊಲೀಸರು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.
ಹತ್ಯೆಗೆ ಸ್ವದೇಶಿ ನಿರ್ಮಿತ 7.2 ಪಿಸ್ತೂಲ್ ಬಳಸಿದ್ದಾರೆ. ಸುಮಾರು 6 ಮತ್ತು 4 ಅಡಿ ದೂರದಿಂದ ಫೈರಿಂಗ್ ಮಾಡಲಾಗಿದ್ದು, ಗೌರಿ ಲಂಕೇಶ್ ದೇಹಕ್ಕೆ 3 ಗುಂಡುಗಳು ಹೊಕ್ಕಿದ್ದರೆ, 4 ಗುಂಡು ಹೊರಗಡೆ ಬಿದ್ದಿತ್ತು. ಪ್ರೊಫೆಷನಲ್ ಹಂತಕರು ಈ ಕೃತ್ಯವನ್ನು ಎಸಗಿರಬಹುದು ಎನ್ನುವ ಶಂಕೆಯಿದೆ ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ.
ಎಸ್ಐಟಿ ತನಿಖೆ: ಸಿದ್ದರಾಮಯ್ಯ ಸರ್ಕಾರ ಗೌರಿ ಲಂಕೇಶ್ ಹತ್ಯೆಯ ತನಿಖೆಯನ್ನು ವಿಶೇಷ ತನಿಖಾ ತಂಡ(ಎಸ್ಐಟಿ) ವಹಿಸಿದೆ. ಗುಪ್ತಚರ ಇಲಾಖೆಯ ಐಜಿ ಆಗಿರುವ ಬಿಕೆ ಸಿಂಗ್ ಅವರಿಗೆ ಎಸ್ಐಟಿ ಹೊಣೆ ನೀಡಲಾಗಿದ್ದು, ತನಿಖಾಧಿಕಾರಿಯಾಗಿ ಡಿಸಿಪಿ ಅನುಚೇತ್ ಅವರನ್ನು ನೇಮಿಸಿದೆ.