ಬೆಂಗಳೂರು: ದೇಶಾದ್ಯಂತ ಭಾರೀ ಸುದ್ದಿಯಾಗಿದ್ದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ತನಿಖೆ ನಡೆಸಿದ ವಿಶೇಷ ತನಿಖಾ ತಂಡ(ಎಸ್ಐಟಿ)ಗೆ ರಾಜ್ಯ ಸರ್ಕಾರ 25 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ.
ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ, ಈಗಾಗಲೇ ಅಮೋಲ್ ಕಾಳೆ, ಪರಶುರಾಮ್ ವಾಗ್ಮೋರೆ ಸೇರಿದಂತೆ 16 ಮಂದಿ ಆರೋಪಿಯನ್ನು ಬಂಧಿಸಿದೆ.
2017ರ ಸೆಪ್ಟಂಬರ್ 5 ರಂದು ರಾಜರಾಜೇಶ್ವರಿ ನಗರದಲ್ಲಿರುವ ಅವರ ನಿವಾಸದ ಎದುರೇ ಅಪರಿಚಿತ ವ್ಯಕ್ತಿಗಳು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಈ ಪ್ರಕರಣದ ತನಿಖೆಯನ್ನು ಸರ್ಕಾರ ಎಸ್ಐಟಿಗೆ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಆಯುಕ್ತ ಬಿ.ಕೆ ಸಿಂಗ್ ಹಾಗೂ ಉಪ ಆಯುಕ್ತ ಎಂ ಎನ್ ಅನುಚೇತನ್ ನೇತೃತ್ವದ ಎಸ್ಐಟಿ ತಂಡ ಪ್ರಕರಣವನ್ನ ಕೈಗೆತ್ತಿಕೊಂಡು ರಾಜ್ಯದ ಎಲ್ಲಾ ಘಟಕಗಳಲ್ಲೂ ತನಿಖೆ ಮುಂದುವರಿಸಿತ್ತು. ಸತತವಾಗಿ ಒಂದು ವರ್ಷ ಪರಿಶ್ರಮಪಟ್ಟ ವಿಶೇಷ ತನಿಖಾ ತಂಡ ಆರೋಪಿಗಳನ್ನು ಮುಂಬೈ ಸೇರಿದಂತೆ ವಿವಿಧೆಡೆಗಳಿಂದ ಬಂಧಿಸಿತ್ತು.
2918ರ ಮಾರ್ಚ್ ತಿಂಗಳಲ್ಲಿ ಪ್ರಕರಣ ಸಂಬಂಧ ಮೊದಲು ಓರ್ವನನ್ನು ಬಂಧಿಸಿತ್ತು. ಇದೀಗ 16 ಮಂದಿಯನ್ನು ಬಂಧಿಸಿದೆ. ಇದನ್ನೂ ಓದಿ: ಟ್ರಂಕ್ನಲ್ಲಿಟ್ಟು ಎಸ್ಐಟಿಯಿಂದ ಗೌರಿ ಹತ್ಯೆಯ ಚಾರ್ಜ್ ಶೀಟ್ ಸಲ್ಲಿಕೆ
ಆರೋಪಿಗಳು ಯಾರು?
ಪ್ರಕರಣದ ಪ್ರಮುಖ ಆರೋಪಿ (ಎ1) ಮಹಾರಾಷ್ಟ್ರ ಅಮೋಲ್ ಕಾಳೆ ಇವನು ಹತ್ಯೆಯ ಪ್ರಧಾನ ಸಂಚುಕಾರ, ಉಳಿದಂತೆ (ಎ2) ವಿಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ್ ವಾಗ್ಮೋರೆ -ಶೂಟರ್, (ಎ3) ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ ? ಬೈಕ್ ರೈಡರ್, (ಎ4) ಹುಬ್ಬಳ್ಳಿ ಅಮಿತ್ ಬುದ್ಧ -ರೈಡರ್ ಸಹಾಯಕ, (ಎ5) ಮಹಾರಾಷ್ಟ್ರದ ಅಮಿತ್ ದೇಗ್ವೇಕರ್ -ಹಣಕಾಸು ಉಸ್ತುವಾರಿ, (ಎ6) ಬೆಳಗಾವಿಯ ಭರತ್ ಕುರ್ನೆ – ಶಸ್ತ್ರಾಸ್ತ್ರ ತರಬೇತಿಗೆ ಆಶ್ರಯ ನೀಡಿದ್ದು, (ಎ7) ಮಹಾರಾಷ್ಟ್ರದ ಸುಧನ್ವಾ ಗೋಲೆಧಕರ್- ಸಂಚುಗಾರ, (ಎ8) ಮಹಾರಾಷ್ಟ್ರದ ಶರದ್ ಕಲಾಸ್ಕರ್ ? ಸಂಚುಗಾರ, (ಎ9) ಕೊಡಗಿನ ರಾಜೇಶ್ ಬಂಗೇರಾ- ಶಸ್ತ್ರಾಸ್ತ್ರ ತರಬೇತುದಾರ, (ಎ10) ಮಹಾರಾಷ್ಟ್ರದ ಶ್ರೀಕಾಂತ್ ಪಂಗಾರ್ಕರ್- ಸಂಚುಗಾರ ಇವರನ್ನು ಸೇರಿದಂತೆ ಒಟ್ಟು 17 ಜನ ಆರೋಪಿಗಳಿದ್ದಾರೆ.