ಸಂದರ್ಶನ ಯಾರೇ ಮಾಡುತ್ತಿರಲಿ ಕಿಚ್ಚ ಸುದೀಪ್ ಮಾತ್ರ ಅಚ್ಚುಕಟ್ಟಾಗಿ ಅದರಲ್ಲಿ ಭಾಗಿಯಾಗುತ್ತಾರೆ. ಪ್ರಶ್ನೆಗೆ ಹೊಸ ರೀತಿಯಲ್ಲೇ ಉತ್ತರ ನೀಡುತ್ತಾರೆ. ಅವರ ಮಾತಿನಲ್ಲೊಂದು ತೂಕ ಇರುತ್ತದೆ. ಪ್ರತಿಮೆ ಬಳಸಿಕೊಂಡೇ ಅವರು ಮಾತನಾಡುತ್ತಾರೆ. ರಶ್ಮಿಕಾ ಮಂದಣ್ಣ ಮೇಲೆ ಆಗುತ್ತಿರುವ ಟ್ರೋಲ್ ವಿಚಾರವಾಗಿಯೂ ಸುದೀಪ್ ಪ್ರತಿಕ್ರಿಯೆ ನೀಡಿದ್ದು, ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ. ನಾವು ಏನು ಮಾತನಾಡುತ್ತಿದ್ದೇವೆ ಎನ್ನುವುದರ ಬಗ್ಗೆ ಅರಿವೂ ಇರಬೇಕು ಅಂದಿದ್ದಾರೆ.
ನಾನಾ ಕಾರಣಗಳಿಂದಾಗಿ ರಶ್ಮಿಕಾ ಮಂದಣ್ಣ ಟ್ರೋಲ್ ಆಗುತ್ತಲೇ ಇರುತ್ತಾರೆ. ಬಹುಶಃ ಈ ವರ್ಷದಲ್ಲಿ ಅತೀ ಹೆಚ್ಚು ಟ್ರೋಲ್ ಆದ ನಟಿ ಎಂಬ ಹೆಗ್ಗಳಿಕೆಯೂ ಅವರದ್ದು. ಅದರಲ್ಲೂ ಕನ್ನಡ ಸಿನಿಮಾರಂಗ ಮತ್ತು ಕನ್ನಡದ ವಿಚಾರವಾಗಿ ಅವರು ಸಾಕಷ್ಟು ಬಾರಿ ಟ್ರೋಲ್ ಆಗಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಕಾಂತಾರ ಸಿನಿಮಾವನ್ನೂ ಇನ್ನೂ ನೋಡಿಲ್ಲ ಎನ್ನುವ ಕಾರಣಕ್ಕಾಗಿ ಟ್ರೋಲಿಗರಿಗೆ ಆಹಾರವಾಗಿದ್ದರು. ಇದೇ ವಿಚಾರವಾಗಿಯೇ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಅದನ್ನೂ ಮಾರ್ಮಿಕವಾಗಿಯೇ ವಿವರಿಸಿದ್ದಾರೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ
ಟ್ರೋಲ್ ವಿಚಾರದಲ್ಲಿ ಮುಂದುವರೆದು ಮಾತನಾಡಿರುವ ಸುದೀಪ್, ‘ಪಬ್ಲಿಕ್ ಫಿಗರ್ ಎಂಬ ಹಣೆಪಟ್ಟಿ ಬಂದಾಕ್ಷಣ ಹೂವಿನ ಹಾರದ ಜೊತೆ, ಟೊಮ್ಯಾಟೊ, ಮೊಟ್ಟೆ, ಕಲ್ಲುಗಳು ಸಹ ಬರಬಹುದು’ ಎಂದು ಹೇಳಿದ್ದಾರೆ. ಈ ಮೂಲಕ ಸಿಲೆಬ್ರಿಟಿ ಆದವನು ಹೇಗೆ ಇರಬೇಕು, ಹೇಗೆ ಇದ್ದರೆ ತಮ್ಮತ್ತ ಏನು ತೂರಿ ಬರುತ್ತವೆ ಎನ್ನುವುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ಅದರಲ್ಲೂ ಸಾರ್ವಜನಿಕ ಬದುಕಿನಲ್ಲಿ ಇರುವವರು ಹೇಗೆ ಇರಬೇಕು, ಯಾವ ರೀತಿಯಲ್ಲಿ ವರ್ತಿಸಬೇಕು ಎನ್ನುವುದನ್ನು ವಿವರಿಸಿದ್ದಾರೆ.
ಬಿಗ್ ಬಾಸ್ ವೇದಿಕೆಯಲ್ಲೂ ಕಿಚ್ಚ ಇಂತಹ ಅನೇಕ ಸಂಗತಿಗಳನ್ನು ಹೇಳಿಕೊಂಡಿದ್ದಾರೆ. ಉದಾಹರಣೆ ಸಹಿತ ವಿವರಿಸಿದ್ದಾರೆ. ಯಾರೋ ಯಾರಿಗೋ ಅವಮಾನ ಮಾಡಿದಾಗ ನೇರವಾಗಿಯೇ ಅವರಿಗೆ ತಿವಿದಿದ್ದಾರೆ. ಸಲಹೆಗಳನ್ನು ನೀಡಿದ್ದಾರೆ. ಎಚ್ಚರಿಕೆಯ ಮಾತುಗಳನ್ನೂ ಆಡಿದ್ದಾರೆ. ಹಾಗಾಗಿ ಕಿಚ್ಚ ಸುದೀಪ್ ಅವರ ಮಾತುಗಳು ಯಾವತ್ತಿಗೂ ವಿಶೇಷವಾಗಿ ಇರುತ್ತವೆ.