ತುಮಕೂರು: ಸ್ಮಾರ್ಟ್ ಸಿಟಿ ತುಮಕೂರಿನಲ್ಲಿ ಮತ್ತೇ ಕಸದ ಸಮಸ್ಯೆ ತಲೆದೂರಿದೆ. ಕಳೆದ 15 ದಿನಗಳಿಂದ ಕಸ ವಿಲೇವಾರಿಯಾಗದೇ ತುಮಕೂರು ತರಕಾರಿ ಮಾರುಕಟ್ಟೆ ಗಬ್ಬೆದ್ದು ನಾರುತ್ತಿದೆ.
ನಗರದ ಅಂತರಸನಹಳ್ಳಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 15 ದಿನಗಳಿಂದ ವಿಲೇವಾರಿಯಾಗದೇ ಮಾರುಕಟ್ಟೆಯಲ್ಲೇ ಕಸ ಬಿದ್ದಿದ್ದು, ಎಪಿಎಂಸಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಈ ಮೊದಲು ಮಾರುಕಟ್ಟೆ ಪ್ರಾಂಗಣದಲ್ಲಿನ ಕಸ ಪ್ರತಿದಿನ ವಿಲೇವಾರಿಯಾಗುತಿತ್ತು. ಇದೀಗ 15 ದಿನಗಳಿಂದ ಕಸ ಎತ್ತದೇ ಮಾರುಕಟ್ಟೆ ತುಂಬೆಲ್ಲಾ ಕಸದ ಪರ್ವತವೇ ಸೃಷ್ಟಿಯಾಗಿದೆ.
ವಿಎಂವಿ ಅಸೋಸಿಯೆಟ್ಸ್ ಕಂಪನಿಗೆ ಕಸ ವಿಲೇವಾರಿ ಟೆಂಡರ್ ನೀಡಲಾಗಿದ್ದು ಅಲ್ಲಿನ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ಸರಿಯಾದ ಮೂಲಭೂತ ಸೌಕರ್ಯ ಸಹ ಮಾರುಕಟ್ಟೆಯಲ್ಲಿ ಒದಗಿಸದೇ ಎಪಿಎಂಸಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮಾರುಕಟ್ಟೆ ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.
ಕಸದ ವಾಸನೆಯ ಪರಿಣಾಮ ಮಾರುಕಟ್ಟೆಗೆ ಆಗಮಿಸಲು ವ್ಯಾಪಾರಸ್ಥರು, ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದು, ದಿನನಿತ್ಯ ಮೂಗು ಮುಚ್ಚಿಕೊಂಡು ವ್ಯಾಪಾರದಲ್ಲಿ ತೊಡಗುವಂತಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv