ಮುಂಬೈ: ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಸೋಲಿನ ಬಳಿಕ ಟೀಂ ಇಂಡಿಯಾ ಮಾಜಿ ನಾಯಕರ ಸೌರವ್ ಗಂಗೂಲಿ ಆಯ್ಕೆ ಸಮಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಗಂಗೂಲಿ, ಟೀಂ ಇಂಡಿಯಾ ಬ್ಯಾಟಿಂಗ್ ಬಲಗೊಳಿಸಲು ಉತ್ತಮ ಫಾರ್ಮ್ ಹೊಂದಿರುವ ಕೆಎಲ್ ರಾಹುಲ್ ಅವರ ಅಗತ್ಯತೆ ಇದೆ ಎಂದು ಸಮರ್ಥನೆ ನೀಡಿದರು.
ಟೀಂ ಇಂಡಿಯಾ ಬ್ಯಾಟಿಂಗ್ ಕ್ರಮಾಂಕದಲ್ಲಿ 4ನೇ ಸ್ಥಾನ ತುಂಬುವ ಸಮರ್ಥ ಆಟಗಾರ ಯಾರು ಎಂಬ ಪ್ರಶ್ನೆಗೆ ಉತ್ತರಿಸಿ, ಕೆಎಲ್ ರಾಹುಲ್ ಈ ಸ್ಥಾನವನ್ನು ತುಂಬಲು ಸಮರ್ಥರಾಗಿದ್ದಾರೆ. ಯಾವುದೇ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಮೊದಲ ನಾಲ್ವರು ಬ್ಯಾಟ್ಸ್ ಮನ್ ಗಳು ಬಲಿಷ್ಠರಾಗಿರಬೇಕು. ಅಲ್ಲದೇ ಯಾವುದೇ ಆಟಗಾರರನ ವೃತ್ತಿ ಜೀವನದ ಆರಂಭದಲ್ಲಿ ಮೊದಲ 15 ಪಂದ್ಯಗಳನ್ನು ಯಾವುದೇ ಒತ್ತಡವಿಲ್ಲದೇ ಆಡಲು ಅವಕಾಶ ನೀಡಬೇಕು. ನಾನು ಕೆಎಲ್ ರಾಹುಲ್ ಗೆ 15 ಪಂದ್ಯಗಳನ್ನು ನೀಡುತ್ತಿದ್ದೆ ಎಂದು ಹೇಳಿದರು.
ಇದೇ ವೇಳೆ ಸದ್ಯ ಟೀಂ ಇಂಡಿಯಾದ 5,6,7 ಬ್ಯಾಟಿಂಗ್ ಕ್ರಮಾಂಕದಲ್ಲಿ ಧೋನಿ, ದಿನೇಶ್ ಕಾರ್ತಿಕ್, ರೈನಾ ಸೂಕ್ತ ಎಂದು ತಿಳಿಸಿದರು. ಅಂದಹಾಗೇ ಇಂಗ್ಲೆಂಡ್ ವಿರುದ್ಧ ಕೊನೆಯ ಮಂಗಳವಾರ ನಡೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ 22 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು.
ವಿರಾಟ್ ಕೊಹ್ಲಿ ತಂಡದ ನಾಯಕತ್ವದ ತಂಡದಲ್ಲಿ ಸದ್ಯ ರೋಹಿತ್ ಹಾಗೂ ವಿರಾಟ್ ಹೆಚ್ಚಿನ ಒತ್ತಡ ಎದುರಿಸುತ್ತಿದ್ದು, ಕೆಎಲ್ ರಾಹುಲ್ ಅಥವಾ ರಹಾನೆ ಅವರನ್ನು ಬಳಸಿಕೊಳ್ಳಬೇಕಿದೆ. ಇದಕ್ಕೆ ಸೂಕ್ತ ಉದಾಹರಣೆ ದಕ್ಷಿಣ ಆಫ್ರಿಕಾ ವಿರುದ್ಧದ ರಣಿಯಲ್ಲಿ ಕೊಹ್ಲಿ ನಂ.3 ಕ್ರಮಾಂಕದಲ್ಲಿ ಬ್ಯಾಟ್ ಬಿಸಿ 6 ಪಂದ್ಯಗಳಲ್ಲಿ 3 ಶತಕ ಸಿಡಿಸಿದರು. ಕೊಹ್ಲಿ ಶತಕ ಗಳಿಸಿದರೆ ಮಾತ್ರ ತಂಡ ಜಯದ ನಿರೀಕ್ಷೆಯಲ್ಲಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.