ಲಕ್ನೋ: ಜೀವನದಲ್ಲಿ ಒಮ್ಮೆ ಕಾಶಿ ಯಾತ್ರೆ ಮಾಡಬೇಕು ಗಂಗಾರತಿ ನೋಡಬೇಕು ಅನ್ನೋದು ಬಹುತೇಕ ಹಿಂದೂಗಳ ಆಶಯ. ಆದರೆ ಅಂಗವಿಕಲರು ಮತ್ತು ವಿಶೇಷ ಚೇತನರಿಗೆ ಇದು ಕಷ್ಟವಾಗುತ್ತಿತ್ತು. ಆದರೆ ಇನ್ನು ಆ ತೊಂದರೆ ಇಲ್ಲ, ವಾರಾಣಸಿಯ ಪ್ರಮುಖ ಮೂರು ಗಂಗಾನದಿಯ ಘಾಟ್ ಗಳಿಗೆ ವೀಲ್ ಚೇರ್ ರ್ಯಾಂಪ್ ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ದೇಶದಲ್ಲಿನ ಪುಣ್ಯಕ್ಷೇತ್ರಗಳ ಪೈಕಿ ಮೊದಲ ಬಾರಿ ಇಲ್ಲಿ ವೀಲ್ ಚೇರ್ ರ್ಯಾಂಪ್ ನಿರ್ಮಿಸಲಾಗುತ್ತಿದೆ ಎನ್ನಲಾಗಿದೆ.
ಹೊಸ ವರ್ಷದ ಗಿಫ್ಟ್ ಎನ್ನುವಂತೆ ಗಂಗಾ ನದಿ ತಟದಲ್ಲಿರುವ ಮಣಿಕರ್ಣಿಕ, ಅಸ್ಸಿ ಮತ್ತು ದಶಾಶ್ವಮೇಧ ಘಾಟ್ ನಲ್ಲಿ ವೀಲ್ ಚೇರ್ ರ್ಯಾಂಪ್ ನಿರ್ಮಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ಮೂರು ಕೋಟಿ ಬಜೆಟ್ ನಲ್ಲಿ ಅರ್ಧವನ್ನು ಉತ್ತರ ಪ್ರದೇಶ ಸರ್ಕಾರ ಬಿಡುಗಡೆ ಮಾಡಿದೆ. ವಾರಾಣಸಿಯ ಘಾಟ್ ಗಳ ಪೈಕಿ ಈ ಮೂರು ಘಾಟ್ ಗಳು ಹೆಚ್ಚು ಜನಸಂದಣಿಯಿಂದ ಕೂಡಿರುತ್ತೆ ಅಲ್ಲದೇ ಇಲ್ಲಿ ನಡೆಯುವ ಗಂಗಾರಾತಿ ನೋಡಲು ಜನರು ಬಯಸುತ್ತಾರೆ. ಆದರೆ ದೊಡ್ಡ ಪ್ರಮಾಣದಲ್ಲಿ ಹೆಚ್ಚು ಮೆಟ್ಟಿಲುಗಳು ಇರುವ ಕಾರಣ ಅಂಗವಿಕಲರಿಗೆ ವಿಶೇಷ ಚೇತನರಿಗೆ ಇದು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡಿರುವ ಸರ್ಕಾರ ಈ ಮೂರು ಘಾಟ್ ಗಳಲ್ಲಿ ಗಂಗಾರತಿ ನಡೆಯುವ ಸ್ಥಳಕ್ಕೆ ವೀಲ್ ಚೇರ್ ರ್ಯಾಂಪ್ ನಿರ್ಮಿಸಲು ಚಿಂತಿಸಿದೆ.
ಸ್ಥಳೀಯ ಬಿಜೆಪಿ ನಾಯಕರ ಪ್ರಕಾರ ವಿಶೇಷ ಚೇತನರು ಗಂಗಾರತಿ ನೋಡಲು ಕಷ್ಟ ಪಡುವುದನ್ನು ಪ್ರಧಾನಿ ನರೇಂದ್ರ ಮೋದಿ ಗಮನಿಸಿದ್ದರಂತೆ. ಬಳಿಕ ವೀಲ್ ಚೇರ್ ರ್ಯಾಂಪ್ ನಿರ್ಮಿಸುವ ಈ ಕಾರ್ಯಕ್ಕೆ ಹೆಚ್ಚು ಆಸಕ್ತಿ ವಹಿಸಿದ್ದರು ಎನ್ನಲಾಗಿದ್ದು ಕೇಂದ್ರ ನೆರವಿನಲ್ಲಿ ಈ ಮೂರು ಘಾಟ್ ಗಳನ್ನು ಅಭಿವೃದ್ಧಿ ಪಡಿಸಲು ಸೂಚಿಸಲಾಗಿದೆಯಂತೆ. ಅಲ್ಲದೇ ಕುಡಿಯುವ ನೀರಿನ ಅರವಟಿಕೆ, ಶೌಚಾಲಯಗಳಲ್ಲಿ ಬ್ರೇನ್ ಲಿಪಿ ಅಳವಡಿಸಲು ಸೂಚಿಸಿಲಾಗಿದೆ.
ವಾರಾಣಸಿಯಲ್ಲಿ ಈ ಮೂರು ಘಾಟ್ಗಳು ಅತಿಹೆಚ್ಚು ಜನ ಸಂದಣಿಯಿಂದ ಕೂಡಿದ್ದು, ಇಲ್ಲಿ ಅಂಗವಿಕಲರು ಮತ್ತು ವಿಶೇಷ ಚೇತನರು ಗಂಗಾರತಿ ನೋಡುವುದು ಕಠಿಣ, ಹೆಚ್ಚು ಮೆಟ್ಟಿಲುಗಳಿರುವುದರಿಂದ ವೀಕಲಚೇತನರಿಗೆ ಕಷ್ಟವಾಗುತ್ತಿದೆ ಎಂದು ವರದಿ ನೀಡಲಾಗಿತ್ತು. ಈ ವರದಿ ಆಧರಿಸಿ ಕೇಂದ್ರ ನೆರವಿನಲ್ಲಿ ರಾಜ್ಯ ಸರ್ಕಾರ ಕಾಮಗಾರಿ ಆರಂಭಿಸಲು ಮುಂದಾಗಿದೆ.