ಬೆಂಗಳೂರು: ಸಿಲಿಕಾನ್ ಸಿಟಿಯ ಕಾಮುಕರ ಗ್ಯಾಂಗ್ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಶ್ಚಿಮ ಬಂಗಾಳ ಮೂಲದ ಯುವತಿಯ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮಾರ್ಚ್ 24 ರಾತ್ರಿ ಅತ್ಯಾಚಾರ ನಡೆದಿದ್ದು, ಸಂತ್ರಸ್ತ ಯುವತಿ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ದೆಹಲಿ ಮೂಲದ ನಾಲ್ವರು ಕಾಮುಕರನ್ನು ಬಂಧಿಸಿದ್ದಾರೆ.
ರಜತ್, ಶಿವರಾಣ್, ದೇವ್ ಸರೋಯಿ ಹಾಗೂ ಯೋಗೇಶ್ ಕುಮಾರ್ ಬಂಧಿತ ಆರೋಪಿಗಳು. ಬೆಂಗಳೂರಿನಲ್ಲಿ ಸಂತ್ರಸ್ತೆ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದರು. ಡೇಟಿಂಗ್ ಆ್ಯಪ್ನಲ್ಲಿ ಯುವತಿಗೆ ಆರೋಪಿ ರಜತ್ ಪರಿಚಯವಾಗಿದ್ದ. ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರು ನಂಬರ್ಗಳನ್ನು ಶೇರ್ ಮಾಡಿಕೊಂಡು ಸಂಪರ್ಕದಲ್ಲಿದ್ದರು. ಇದನ್ನೂ ಓದಿ: ಬ್ಯಾಂಕ್, ಎಟಿಎಂ ಬಾಗಿಲಿನಲ್ಲಿ ಮಲ ವಿಸರ್ಜನೆ ಮಾಡಿ ವಿಕೃತಿ
ಕಳೆದ ವಾರ ರಜತ್ ಯುವತಿಗೆ ಊಟಕ್ಕೆಂದು ರೆಸ್ಟೋರೆಂಟ್ಗೆ ಕರೆದುಕೊಂಡು ಹೋಗಿದ್ದ. ಬಳಿಕ ಹತ್ತಿರದಲ್ಲಿದ್ದ ತನ್ನ ರೂಂ ಗೂ ಕರೆದುಕೊಂಡು ಹೋಗಿದ್ದಾನೆ. ರೂಂನಲ್ಲಿ ರಜತ್ ಸ್ನೇಹಿತರು ಸೇರಿ ಎಲ್ಲರು ಕುಡಿದು ಊಟ ಮಾಡಿದ್ದರು. ಕುಡಿದ ಅಮಲಿನಲ್ಲಿ ರಜತ್ ಮೊದಲು ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ರಜತ್ ಸ್ನೇಹಿತರು ಕೂಡ ಯುವತಿ ಮೇಲೆ ಒಬ್ಬರ ನಂತರ ಒಬ್ಬರು ಅತ್ಯಾಚಾರ ಎಸಗಿದ್ದಾರೆ.
ಸಂತ್ರಸ್ತೆ ಘಟನೆಯ ಬಗ್ಗೆ ದೂರು ಕೊಡುವುದಾಗಿ ಆರೋಪಿಗಳಿಗೆ ಖಾತ್ರಿಯಾಗುತ್ತಿದ್ದಂತೆ ದೂರು ಕೊಡದಂತೆ ಮನವೊಲಿಸಿದ್ದಾರೆ. ಯುವತಿ ಆರೋಪಿಗಳ ಮಾತಿಗೆ ಮನ್ನಣೆ ಕೊಡದೆ ದೂರು ಕೊಟ್ಟಿದ್ದಾಳೆ. ಈ ವಿಚಾರ ತಿಳಿದು ಆರೋಪಿಗಳು ದಿಕ್ಕಾಪಾಲಾಗಿದ್ದಾರೆ.
ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿದ್ದಂತೆ ಆರೋಪಿಗಳು ದೆಹಲಿಗೆ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಪೊಲೀಸರು ಕಾರ್ಯಪ್ರವೃತ್ತರಾಗಿ ಬೆಂಗಳೂರಿನ ಉಪ್ಪಾರ್ ಪೇಟೆ ಲಾಡ್ಜ್ ಹಾಗೂ ಏರ್ಪೋರ್ಟ್ನಲ್ಲಿ ಅಡಗಿದ್ದವರನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ. ಇದನ್ನೂ ಓದಿ: ಜೈಲಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕೈದಿ
ಆರೋಪಿಗಳಾದ ರಜತ್, ಶಿವರಾಣ್, ದೇವ್ ಸರೋಯಿ ಹಾಗೂ ಯೊಗೇಶ್ ಕುಮಾರ್ ರಾಷ್ಟ್ರೀಯ ಈಜುಪಟುಗಳಾಗಿದ್ದು, ರಜತ್ ಕಳೆದ ಮೂರು ತಿಂಗಳಿಂದ ಟ್ರೈನಿಂಗ್ಗಾಗಿ ಸಂಜಯ್ ನಗರದಲ್ಲಿ ಉಳಿದುಕೊಂಡಿದ್ದ. ಉಳಿದ ಮೂವರು ಆರೋಪಿಗಳು 25 ದಿನಗಳ ಹಿಂದೆಯಷ್ಟೇ ಈಜು ತರಬೇತಿಗೆ ಬೆಂಗಳೂರಿಗೆ ಬಂದು ರಜತ್ ಜೊತೆ ವಾಸವಾಗಿದ್ದರು.
ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿ, ತನಿಖೆಗೆ ಒಳಪಡಿಸಿದ್ದಾರೆ. ಆರೋಪಿಗಳು ಅತ್ಯಾಚಾರ ಎಸಗಿರುವ ಬಗ್ಗೆ ತಪ್ಪೋಪ್ಪಿಕೊಂಡಿದ್ದಾರೆ ಎನ್ನಲಾಗಿದೆ.