ಚಿಕ್ಕಮಗಳೂರು: ಹಲವು ವರ್ಷಗಳಿಂದ ಬೆಳೆದು ಹೆಮ್ಮರವಾಗಿರುವ ಈಚಲು ಮರದಲ್ಲಿ ವಿಘ್ನೇಶ್ವರನ ಮೂರ್ತಿ ಪ್ರತ್ಯಕ್ಷಗೊಂಡು ಭಕ್ತರನ್ನು ಪುಳಕಿತರನ್ನಾಗಿಸಿದ ಘಟನೆ ನಗರದ ಬೈಪಾಸ್ ರಸ್ತೆಯ ಪಟಾಕಿ ಗ್ರೌಂಡ್ ಪಕ್ಕದ ಹೊಲದಲ್ಲಿ ನಡೆದಿದೆ.
ಹಲವು ವರ್ಷಗಳಿಂದಲೂ ಎರಡು ಈಚಲು ಮರಗಳಿದ್ದವು. ಅವುಗಳು ಮಾಮೂಲಿ ಎಲ್ಲಾ ಮರಗಳಂತೆ ಬೆಳೆಯುತ್ತಿದ್ದವು. ಆದರೆ, ಈಚಲು ಮರದಲ್ಲಿ ಗಣಪತಿ ಮುಖವನ್ನೇ ಹೋಲುವ ಮೂರ್ತಿ ಆಕಾರ ಮೂಡಿದೆ. ಅದು ನೋಡಲು ಗಣಪತಿಯಂತೆಯೇ ಭಾಸವಾಗುತ್ತಿದೆ. ಕಣ್ಣು, ಕಿವಿ, ಸೊಂಡಿಲು, ಮುಖದ ಆಕಾರ ಸಂಪೂರ್ಣ ಗಣಪತಿಯನ್ನೇ ಹೋಲುತ್ತಿದೆ. ಹಾಗಾಗಿ, ಭಕ್ತರು ನಾ ಮುಂದು ತಾ ಮುಂದು ಎಂದು ಬಂದು ಗಣಪತಿಯನ್ನು ನೋಡಿಕೊಂಡು ಆಶ್ಚರ್ಯ ಚಕಿತರಾಗಿ ಗಣಪನಿಗೆ ಪೂಜೆ ಮಾಡಿಕೊಂಡು ಹೋಗುತ್ತಿದ್ದಾರೆ. ಇದನ್ನೂ ಓದಿ: ಕೊಡಗಿನ ಕರಿಕೆ, ಸಂಪಾಜೆ, ಚೆಂಬು ಗ್ರಾಮದಲ್ಲಿ ಕಂಪಿಸಿದ ಭೂಮಿ
ಈಚಲು ಮರದಲ್ಲಿ ಮೂಡಿರುವ ಪಾರ್ವತಿ ಸುತನನ್ನು ಕಂಡು ಜನ ಮೂಕವಿಸ್ಮಿತರಾಗುತ್ತಿದ್ದಾರೆ. ಒಬ್ಬರ ಬಾಯಿಂದ ಒಬ್ಬರಿಗೆ ಹರಡಿ ಇದೀಗ ದಿನಕ್ಕೆ ನೂರಾರು ಜನ ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಈಗಾಗಲೇ ನಗರದಲ್ಲಿ ನಾಲ್ಕೈದು ಗಣಪತಿ ದೇವಸ್ಥಾನಗಳಿವೆ. ಅವೆಲ್ಲವೂ ಕೂಡ ಪಶ್ಚಿಮ ದಿಕ್ಕಿಗೆ ಮುಖ ಮಾಡಿವೆ. ಆದರೆ, ಈ ಈಚಲು ಮರದ ಉದ್ಭವ ಗಣಪತಿ ಪೂರ್ವ ದಿಕ್ಕಿಗೆ ಮುಖ ಮಾಡಿ ಹುಟ್ಟಿರೋದು ಸ್ಥಳೀಯರು ಹಾಗೂ ಆಸ್ತಿಕರ ತೀವ್ರ ತರವಾದ ಭಕ್ತಿಗೆ ಕಾರಣವಾಗಿದೆ. ಹೊಲದಲ್ಲಿರುವ ಈಚಲು ಮರದಲ್ಲಿ ಗಣೇಶ ದರ್ಶನ ಕೊಟ್ಟಿರುವುದು ಸ್ಥಳೀಯರಿಗೆ ಅಚ್ಚರಿ ತಂದಿದೆ. ಈ ಈಚಲು ಮರದ ಗಣಪನಿಗೆ ಕೈಮುಗಿದು ಬೇಡಿಕೊಂಡು ಹೋದರೆ ಹೋಗುವ ಕೆಲಸ ಆಗುತ್ತೆ ಅನ್ನೋದು ಭಕ್ತರ ನಂಬಿಕೆಯಾಗಿದೆ. ಇದನ್ನೂ ಓದಿ: ವೃದ್ಧೆಯ ಹೊಟ್ಟೆ ಕೊಯ್ದು ಹಾಗೆ ಬಿಟ್ಟ – ವೈದ್ಯನ ಯಡವಟ್ಟಿಗೆ ವೃದ್ಧೆ ನರಳಾಟ
ಈಗಾಗಲೇ ಹಲವು ಭಕ್ತರು ನಿತ್ಯ ಯಾವುದಾದರೂ ಒಳ್ಳೆ ಕೆಲಸಕ್ಕೆ ಹೋಗುವ ಮುನ್ನ ಇಲ್ಲಿಗೆ ಬಂದು ಕೈಮುಗಿದು ಬೇಡಿಕೊಂಡು ಹೋಗುತ್ತಿದ್ದಾರೆ. ಬೆಳಗ್ಗೆ, ಸಂಜೆ ಬಂದು ಭಕ್ತರು ಈ ಗಣಪತಿಗೆ ಪೂಜೆ ಸಲ್ಲಿಸಿ ಕಷ್ಟಗಳ ನಿವಾರಿಸೋ ಈಚಲ ವಿಘ್ನೇಶ ಎಂದು ಬೇಡಿಕೊಳ್ಳುತ್ತಿದ್ದಾರೆ.