ಬೆಂಗಳೂರು: ಚೆಲುವಿನ ಚಿತ್ತಾರ ಚಿತ್ರದ ಫೋಟೋ ಬಳಕೆ ಸಂಬಂಧ ನಟ ಗಣೇಶ್ ಹಾಗೂ ನಿರ್ದೇಶಕ ಎಸ್.ನಾರಾಯಣ್ ಪ್ರಕರಣದ ವಿಚಾರಣೆಯನ್ನು ಸಿಟಿ ಸಿವಿಲ್ಕೋರ್ಟ್ ಮಾರ್ಚ್ 6ಕ್ಕೆ ಮುಂದೂಡಿದೆ.
ಎಸ್.ನಾರಾಯಣ್ ಪ್ರತಿಕ್ರಿಯಿಸಿ, ಇದು ಮಾತನಾಡಿ ಇತ್ಯರ್ಥ ಮಾಡಿಕೊಳ್ಳುವ ಸಮಸ್ಯೆ. ಆದರೆ ಗಣೇಶ್ ಫೋನ್ಗೂ ಸಿಗುತ್ತಿಲ್ಲ. ಪ್ರಕರಣ ಹಿಂಪಡೆಯದಿದ್ದರೆ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಹೇಳಿದರು.
ಏನಿದು ಪ್ರಕರಣ?
ಚೆಲುವಿನ ಚಿತ್ತಾರದ ಪ್ರಚಾರದ ಸಲುವಾಗಿ ಮೋಕ್ಷ ಅಗರಬತ್ತಿ ಅಂಡ್ ಕಂಪೆನಿಯ ಜೊತೆ ನಿರ್ದೇಶಕ ಎಸ್.ನಾರಾಯಣ್ ಮೂರು ತಿಂಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಈ ಅವಧಿ ಅವಧಿ ಮುಗಿದ ಬಳಿಕವೂ ಸಂಸ್ಥೆ ಚಿತ್ರದ ಹೆಸರನ್ನು ಪ್ರಚಾರಕ್ಕೆ ಬಳಸಿತ್ತು. 2008ರಲ್ಲಿ ಒಪ್ಪಿಗೆಯಿಲ್ಲದೆ ಮೋಕ್ಷ ಅಗರಬತ್ತಿ ಅಂಡ್ ಕಂಪೆನಿ ತನ್ನ ಫೋಟೋಗನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಚಿತ್ರನಟ ಗಣೇಶ್ ಮೋಕ್ಷ ಅಗರಬತ್ತಿ ಅಂಡ್ ಕಂಪೆನಿ ವಿರುದ್ಧ 75 ಲಕ್ಷ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಆದರೆ, ಮೋಕ್ಷ ಅಗರಬತ್ತಿ ಕಂಪೆನಿ ಚೆಲುವಿನ ಚಿತ್ತಾರ ಚಿತ್ರದ ನಿರ್ದೇಶಕ ಎಸ್.ನಾರಾಯಣ್ರನ್ನು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯಕ್ಕೆ ಕೋರಿದ್ದರಿಂದ ಕೋರ್ಟ್ ನಾರಾಯಣ್ ಅವರಿಗೂ ಸಮನ್ಸ್ ಜಾರಿ ಮಾಡಿತ್ತು. ಇದರಿಂದ ಅಸಮಾಧಾನಗೊಂಡಿರುವ ನಾರಾಯಣ್, ಗಣೇಶ್ ದಾಖಲಿಸಿದ ದೂರಿನಿಂದ ತಮಗೂ ಸಮನ್ಸ್ ಬಂದಿದ್ದು, ಮಾನಹಾನಿಯುಂಟಾಗಿದೆ. ಹೀಗಾಗಿ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿ ತಮ್ಮ ವಕೀಲ ಶಂಕರಪ್ಪ ಅವರಿಂದ ಗಣೇಶ್ಗೆ ನೋಟಿಸ್ ಕೊಡಿಸಿದ್ದಾರೆ.