ಗದಗ: ಕಾಮಣ್ಣ ದಹನದ ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಓರ್ವ ಗಂಭೀರ ಗಾಯಗೊಂಡಿರುವ ಘಟನೆ ನಗರದ ಟ್ಯಾಗೋರ್ ರಸ್ತೆನಲ್ಲಿ ನಡೆದಿದೆ.
ರಂಗಪಂಚಮಿ ಅಂಗವಾಗಿ ಬೆಳಗಿನ ಜಾವ ಕಾಮಣ್ಣ ದಹನ ನೋಡಲು ಆಕಾಶ ಹಬೀಬ್ ಎಂಬಾತ ಟ್ಯಾಗೋರ್ ರಸ್ತೆಗೆ ಬಂದಿದ್ದನು. ಆಗ ಕ್ಷುಲ್ಲಕ ಕಾರಣಕ್ಕೆ ಆಕಾಶ್ ಮೇಲೆ ಸ್ಥಳೀಯ ರಾಜೇಶ್ ಕಟ್ಟಿಮನಿ, ರೋಹಿತ್ ಹಾಗೂ ನಿಖಿಲ್ ಕಟ್ಟಿಮನಿ ಒಟ್ಟಾಗಿ ಹಲ್ಲೆ ಮಾಡಲು ಮುಂದಾಗಿದ್ದರು. ಈ ವೇಳೆ ಗಲಾಟೆ ಬಿಡಿಸಲು ಆಕಾಶ್ನ ಚಿಕ್ಕಪ್ಪ ಗೋವಿಂದ್ ಹಬೀಬ್ ಮಧ್ಯೆ ಬಂದಿದ್ದರು. ಈ ವೇಳೆ ಜಗಳ ಬಿಡಿಸಲು ಬಂದ ಗೋವಿಂದ್ ಮೇಲೆಯೇ ಮೂವರು ಪುಂಡರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಕಾಮಣ್ಣ ಸುಡುವ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದರಿಂದ ಗೋವಿಂದ್ ಅವರ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನ ಸಧ್ಯ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ಮಾಡಿದ ರಾಜೇಶ್, ರೋಹಿತ್ ಹಾಗೂ ನಿಖಿಲ್ ಪರಾರಿಯಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.